ಹಾವೇರಿ: ಹಾವೇರಿ ವಿಶ್ವವಿದ್ಯಾಲಯ ಬಂದ್ ಆಗಲ್ಲ. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆತಂಕ ಪಡುವುದು ಬೇಡ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ಅಭಯ ನೀಡಿದರು.
ಇಲ್ಲಿನ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಹಾವೇರಿ ವಿಶ್ವವಿದ್ಯಾಲಯದ ದ್ವಿತೀಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿವಿ ಉಳಿವಿಗೆ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಶ್ರಮಿಸುತ್ತಿದ್ದಾರೆ. ಹಾಗಾಗಿ, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಎಲ್ಲ ಶಾಸಕರು ವಿವಿ ಉಳಿಸಿ, ಬೆಳೆಸಲು ಸದಾ ನಿಮ್ಮೊಂದಿಗೆ ಇರುತ್ತೇವೆ ಎಂದು ಹೇಳಿದರು.
ವಿವಿಗೆ ವರ್ಷಕ್ಕೆ ಬೇಕಾಗುವ ಅಗತ್ಯ ಅನುದಾನ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ರಾಜ್ಯದಲ್ಲೇ ಹಾವೇರಿ ವಿವಿ ಉತ್ತಮ ವಿವಿ ಆಗಬೇಕು ಎನ್ನುವುದು ನನ್ನ ಸಂಕಲ್ಪ ಎಂದು ಹೇಳಿದರು.
ವಿವಿ, ತೋಟಗಾರಿಕೆ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ, ಇಂಜಿನೀಯರಿಂಗ್ ಕಾಲೇಜ್ ಹಾಗೂ ಕೃಷಿ ವಿಜ್ಞಾನ ಕೇಂದ್ರ ನನ್ನ ಕ್ಷೆತ್ರ ವ್ಯಾಪ್ತಿಗೆ ಬರುವುದು ನನ್ನ ಸೌಭಾಗ್ಯ. ಈ ಶಿಕ್ಷಣ ಕೇಂದ್ರಗಳ ಬೆಳವಣಿಗೆಗೆ ಸದಾ ಸಿದ್ಧನಾಗಿರುವೆ ಎಂದು ಹೇಳಿದರು.
ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಆಲೂರ ಮಾತನಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗ, ಆರ್ಥಿಕವಾಗಿ ಹಿಂದುಳಿದ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಿವಿಗೆ ಬರುತ್ತಾರೆ. ಅವರಿಗೆ ಹೊರೆಯಗದಂತೆ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿಯಾಗಿದೆ. ಸಮೃದ್ಧ ನಾಡು ಕಟ್ಟುವುದು ಶಿಕ್ಷಕರಿಂದ ಮಾತ್ರ ಸಾಧ್ಯ. ಹಾಗಾಗಿ ವಿದ್ಯಾರ್ಥಿಗಳಲ್ಲಿ ದೊಡ್ಡ ಚಿಂತನೆ, ದೂರದೃಷ್ಟಿ ಮನೋಭಾವ ಬೆಳೆಸಬೇಕು. ವಿವಿಗಳು ಸುಭಿಕ್ಷ ಸಮಾಜ ನಿರ್ಮಾಣದ ಆಸ್ತಿ ಇದ್ದಂತೆ. ಚಲಾವಣೆ ನಾಣ್ಯಗಳ ರೀತಿಯಲ್ಲಿ ವಿದ್ಯಾರ್ಥಿಗಳನ್ನು ತಯಾರಿಸಬೇಕು. ಈ ವಿವಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಛಾಪು ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಇಂದು ಭೋತ್ಪಾದನೆ, ದುಷ್ಟ ಶಕ್ತಿಗಳ ಅಟ್ಟಹಾಸ, ಸ್ವಾರ್ಥ ಜನರ ಬದುಕು ತಲ್ಲಣಗೊಳಿಸಿದೆ. ಯುವ ಜನಾಂಗ ಆಧುನೀಕರಣಕ್ಕೆ ಮಾರುಹೋಗಿ ಪಾಶ್ಚಿಮಾತ್ಯರ ಅನುಕರಣೆ ಮಾಡುತ್ತಿರುವುದು ವಿಷಾದಕಾರ ಸಂಗತಿಯಾಗಿದೆ. ವಿದ್ಯಾರ್ಥಿಗಳು ಜೀವನದಲ್ಲಿ, ಶಿಸ್ತು, ಸಂಯಮ, ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಹಾವೇರಿ ವಿವಿಯಲ್ಲಿ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಎಚ್. ಜಂಗಮಶೆಟ್ಟಿ ಹಾವೇರಿ ವಿಶ್ವವಿದ್ಯಾಲಯ ಬೆಳವಣಿಗೆ ಕುರಿತು ಮಾತನಾಡಿದರು. ಕುಲಸಚಿವ ಪ್ರೊ.ಎಸ್.ಬಿ ಬಾಗಲಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಾವೀನ್ಯತೆ ಸಲಹೆಗಾರ ರಾಜಶೇಖರ ಹಿರೇಮಠ ಹಾಗೂ ಅಂತಾರಾಷ್ಟ್ರೀಯ ಶೈಕ್ಷಣಿಕ ಸಲಹೆಗಾರ ಡಾ.ಶಿವಾನಂದ ಉತ್ಲಾಸರ ಹಾಗೂ ಮೌಲ್ಯಮಾಪನ ಕುಲಸಚಿವೆ ಪ್ರೊ.ರೇಣುಕಾ ಮೇಟಿ, ಇತರರು ಉಪಸ್ಥಿತರಿದ್ದರು.
ಸಿಎಂ ಅವರಿಂದ ತೋಟಗಾರಿಕೆ ಕಾಲೇಜ್ ಉದ್ಘಾಟನೆ
ದೇಶದ ಯಾವುದೇ ಭಾಗದಲ್ಲಿ ಇಲ್ಲದ ತೋಟಗಾರಿಕೆ ಅಭಿಯಾಂತ್ರಿಕ ಆಹಾರ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯ ನಮ್ಮ ಜಿಲ್ಲೆಯಲ್ಲಿದೆ. ಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ರಸ್ತೆ, ಚರಂಡಿ ಸೇರಿದಂತೆ ಮೂಲ ಸೌಕರ್ಯ ಕಾಮಗಾರಿ ಪ್ರಗತಿಯಲ್ಲಿದೆ. ಮುಖ್ಯಮಂತ್ರಿ ಹಾಗೂ ತೋಟಗಾರಿಕೆ ಸಚಿವರಿಂದ ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದು ಶಿವಣ್ಣನವರ ಹೇಳಿದರು.