ಶಿಗ್ಗಾಂವಿ: ತಾಲೂಕಿನ ಬಂಕಾಪುರ, ದುಂಡಶಿ, ಚಂದಾಪುರ, ಶಿಡ್ಲಾಪುರ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾಡಹಗಲೇ ಇಸ್ಪೀಟ್ ಅಡ್ಡೆಗಳು ಆರಂಭವಾಗಿದ್ದು, ಯಾರ ಭಯವೂ ಇಲ್ಲದೇ ದಂಧೆ ನಡೆಯುತ್ತಿದೆ.
ಮನ್ನೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಕೆಡಿಪಿ ಸಭೆಯಲ್ಲಿ ದಂಧೆ ಬಂದ್ ಮಾಡಿಸುವಂತೆ ಎಚ್ಚರಿಕೆ ನೀಡಿದ್ದರು. ಬಳಿಕವೂ ಇಸ್ಪೀಟ್ ದಂಧೆಕೋರರು ರಾಜಾರೋಷವಾಗಿ ಟೆಂಟ್ ಹಾಕಿಕೊಂಡು ಇಸ್ಪೀಟ್ ಜೂಜಾಡುತ್ತಿದ್ದಾರೆ.
ಶಾಸಕರ ಆಪ್ತ ಎಂಬ ಶಂಕೆ ?: ಶಿಗ್ಗಾಂವಿ ಶಾಸಕ ಪಠಾಣ ಬೆಂಬಲಿಗ ದುಂಡಶಿ ಗ್ರಾಪಂ ಮಾಜಿ ಅಧ್ಯಕ್ಷನೊಬ್ಬ ದುಂಡಶಿ ಬಳಿ ಅಡ್ಡೆ ನಡೆಸುತ್ತಿದ್ದಾನೆಂಬ ಆರೋಪ ಕೇಳಿ ಬಂದಿದೆ. ಈ ಕುರಿತ ವಿಡಿಯೋ ಒಂದು ವೈರಲ್ ಆಗಿದೆ. ಆದರೆ, ಈತನ ಮೇಲೆ ಕೇಸ್ ಆಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಅಂದರ್ ಬಾಹರ್ ಅನುಮತಿಗಾಗಿ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಲೋಕಾಯುಕ್ತ ದಾಳಿ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.
