ಹಾವೇರಿ: ಕೇರಳದಲ್ಲಿ ಮಳೆ ಪ್ರಾರಂಭವಾಗಲು ಇನ್ನೂ ಮೂರ್ನಾಲ್ಕು ದಿನ ವಿಳಂಬವಾಗಲಿದೆ. ಹಾಗಾಗಿ, ಕರ್ನಾಟಕಕ್ಕೆ ಅದರಲ್ಲೂ ಉತ್ತರ ಒಳನಾಡು ತಲುಪುವುದು ಇನ್ನಷ್ಟು ವಿಳಂಬವಾಗಲಿದೆ. ಈ ಹಿನ್ನಲೆಯಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ರೈತರಿಗೆ ಸಲಹೆ ನೀಡಿದ್ದಾರೆ ಎಂದು ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.
ಮುಂಗಾರು ಪ್ರವೇಶಿಸುವವರೆಗೆ ಬಿತ್ತನೆ ಮಾಡದಂತೆ ರೈತರಿಗೆ ಸಲಹೆ ನೀಡಲಾಗಿದೆ. ಬಿತ್ತನೆ ಮಾಡಿದವರು ನೀರು ಲಭ್ಯವಿದ್ದರೆ ಈ ಶುಷ್ಕ ಅವಧಿಯಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಒಂದು ತುಂತುರು ನೀರಾವರಿಯನ್ನು ನೀಡಲು ಸೂಚನೆ ನೀಡಲಾಗಿದೆ. ರೈತರು ತಮ್ಮ ಜಮೀನು ಮತ್ತು ಪರಿಕರಗಳನ್ನು ಬಿತ್ತನೆಗೆ ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.