ವಿಜಯವಾಣಿ ಸುದ್ದಿಜಾಲ ಹೆಬ್ರಿ
ನಾವೆಲ್ಲರೂ ಸರ್ಕಾರಿ ಹುದ್ದೆಯಲ್ಲಿರುವುದು ಸಾರ್ವಜನಿಕರ ಸೇವೆ ಮಾಡಲು. ಸೇವೆಯಲ್ಲಿ ವಿಳಂಬವಾದಾಗ ಪ್ರಶ್ನಿಸುವ ಹಕ್ಕಿದೆ. ಇಂದು-ನಾಳೆ ಎಂದು ಸತಾಯಿಸದೆ ಜನರ ಸೇವೆ ಮಾಡಬೇಕು. ಕೆಲವರು ಪ್ರಶ್ನಿಸಿದ್ದನ್ನು ಮಟ್ಟ ಹಾಕಲು ನೋಡುತ್ತಾರೆ. ಇಂತಹ ಬೆಳವಣಿಗೆ ಒಳ್ಳೆಯದಲ್ಲ ಎಂದು ಉಡುಪಿ ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಮಂಜುನಾಥ ಶಂಕ್ರಳ್ಳಿ ಹೇಳಿದರು.
ಹೆಬ್ರಿಯ ತಾಲೂಕು ಆಡಳಿತ ಕಚೇರಿಯಲ್ಲಿ ಬುಧವಾರ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಅಜೆಕಾರು ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಹೊಸ ಕಟ್ಟಡ ನಿರ್ಮಾಣ ಮಾಡುವಾಗ ಅವ್ಯವಹಾರ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಕಡ್ತಲ ನಿವಾಸಿ ಆನಂದ ನಾಯಕ್ ದೂರು ನೀಡಿದರು. ಡಿವೈಎಸ್ಪಿ ಪ್ರತಿಕ್ರಿಯಿಸಿ ಸೂಕ್ತ ದಾಖಲೆ ನೀಡಿದರೆ ತನಿಖೆ ನಡೆಸಲಾಗುವುದು ಎಂದರು.
ವಾರಾಹಿ ಯೋಜನೆಯಡಿ ಎಲ್ಲರಿಗೂ ಕುಡಿಯುವ ನೀರಿನಲ್ಲಿ ಲಭ್ಯತೆ ಆಗಬೇಕು. ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು,ನೈರ್ಮಲ್ಯ ಇಲಾಖಾಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕೆಂದು ಡಿವೈಎಸ್ಪಿ ಸೂಚಿಸಿದರು. ಹೆಬ್ರಿ ತಹಸೀಲ್ದಾರ್ ಎಸ್.ಎ.ಪ್ರಸಾದ್, ಇಒ ಶಶಿಧರ್ ಕೆ.ಜೆ., ವಿವಿಧ ಇಲಾಖೆ ತಾಲೂಕುಮಟ್ಟದ ಅಧಿಕಾರಿಗಳಾದ ಸಿದ್ದೇಶ್ವರ, ಶ್ರೀನಿವಾಸ್ ಬಿ.ವಿ., ಗೋವಿಂದ ನಾಯ್ಕ, ಸುರೇಂದ್ರನಾಥ್, ದಿವಾಕರ ಮರಕಾಲ, ತ್ರಿನೇಶ್ವರ, ಪಿಸ್ಎಸ್ಐ ಮಹಾಂತೇಶ್ ಜಾಬಗೌಡ, ಸಾರ್ವಜನಿಕರು ಉಪಸ್ಥಿತರಿದ್ದರು.
ಅಧಿಕಾರಿಗಳಿಗೆ ಯಾರಾದರೂ ಫೋನಾಯಿಸಿ, ಲೋಕಾಯುಕ್ತ ಎಂದು ಸುಳ್ಳು ಹೇಳಿ ಹಣ ಕೇಳಿದರೆ ಲಿಖಿತ ರೂಪದಲ್ಲಿ ದೂರು ನೀಡಬೇಕು. ನಾವು ತ್ವರಿತವಾಗಿ ಈ ಬಗ್ಗೆ ಕ್ರಮ ಜರುಗಿಸುತ್ತೇವೆ. ಜಿಲ್ಲೆಯಲ್ಲಿ ಹಲವಾರು ಕಡೆ ಇಂತಹ ಪ್ರಕರಣ ಹೆಚ್ಚಾಗುತ್ತಿರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಸರ್ವೇ ಕೆಲಸ ಮಾಡುವಾಗ ಅಧಿಕಾರಿಗಳು ಮುತುವರ್ಜಿನ ಮಾಡಬೇಕಾಗಿದೆ. ಈ ಬಗ್ಗೆ ಅನೇಕ ಲೋಪಗಳಾಗಿವೆ ಎಂದರು.
-ಮಂಜುನಾಥ್ ಶಂಕ್ರಳ್ಳಿ, ಡಿವೈಎಸ್ಪಿ