ಬೆಳಗಾವಿ:ಜವಾಬ್ದಾರಿ ಮರೆತಯುವ ಜನಾಂಗ, ಭ್ರಷ್ಟಾಚಾರದ ವ್ಯವಸ್ಥೆ ಹೀಗೆ ಅನೇಕ ಸಮಸ್ಯೆಗಳಿಗೆ ಮಹಾತ್ಮ ಗಾಂಧೀಜಿ ಅವರ ಮೌಲ್ಯಯುತ ಸಂದೇಶಗಳು ರಾಮಬಾಣವಾಗಿವೆ. ಹಾಗಾಗೀ ಮಹಾತ್ಮ ಗಾಂಧೀಜಿ ಅವರ ಆದರ್ಶಮಯಜೀವನ ಮತ್ತು ಮೌಲ್ಯಯುತ ಸಂದೇಶಗಳನ್ನೊಳಗೊಂಡ ಗಾಂಧೀವಾದವು ವಿಶ್ವಕ್ಕೆ ಸಾರ್ವಕಾಲಿಕ ಅವಶ್ಯವಾಗಿದೆ ಎಂದು ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ಡಾ. ವೂಡೇ ಪಿ ಕೃಷ್ಣ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಕೆಎಲ್ಇ ವಿಶ್ವವಿದ್ಯಾಲಯ, ಬೆಂಗಳೂರಿನ ಕರ್ನಾಟಕ ಗಾಂಧೀ ಸ್ಮಾರಕ ನಿದಿ ಮತ್ತು ರಾಷ್ಟಿಯ ಸೇವಾ ಯೋಜನೆ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಶುಕ್ರವಾರ ಜರುಗಿದ ಎನ್.ಎಸ್.ಎಸ್ ಅಧಿಕಾರಿಗಳ ಒಂದು ದಿನದ ಪುನಶ್ಚೇತನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಇತ್ತೀಚೆಗೆ ಅಪರಾಧ ಮತ್ತು ದುಶ್ಚಟಗಳತ್ತ ಬಹು ಪ್ರಮಾಣದಲ್ಲಿ ಯುವಜನತೆ ತುತ್ತಾಗುತ್ತಿದೆ. ಹಾಗಾಗೀ ಯುವಜನರಿಗೆ ಸೂಕ್ತ ದಾರಿ ತೋರುವ ಅವಶ್ಯಕತೆಯಿದೆ. ಮಹಾತ್ಮ ಗಾಂಧೀಜಿ ಅವರ ಮೌಲ್ಯಯುತ ಸಂದೇಶಗಳನ್ನು ಯುವಕರಿಗೆ ತಿಳಿಸುವ ಏಕ ಮಾತ್ರ ಸಂಘಟನೆ ಎನ್ಎಸ್ಎಸ್ ಆಗಿದೆ. ಎನ್.ಎಸ್.ಎಸ್ ಆಧಿಕಾರಿಗಳು ಪರಿಣಾಮಕಾರಿಯಾಗಿ ಎನ್.ಎಸ್.ಎಸ್ ಶಿಬಿರ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಾಲೇಜು ವಿದ್ಯಾರ್ಥಿಗಳಿಗೆ ಯುವಜನತೆಗೆ ಅವರ ಜವಾಬ್ದಾರಿ ಮತ್ತು ಶಕ್ತಿಯನ್ನು ಅರಿವು ಮೂಡಿಸಬೇಕು ಎಂದರು.
ಸಮಾಜದಲ್ಲಿ ಜಾತೀಯತೆ, ಮತೀಯತೆ ಎದ್ದು ಕಾಣುತ್ತಿದೆ. ತಾಂತ್ರಿಕ ಜಗದಲ್ಲಿ ಆಡಂಬರದ ಬದುಕಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಪ್ರಕೃತಿ ಮತ್ತು ಮಾನವನ ಮಧ್ಯದ ಸಂಪರ್ಕ ಕಡಿದು ಹೋಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಯುವಜನಾಂಗ ಕಳೆದು ಹೋಗಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರದೊರೆಯುವುದು ಗಾಂಧೀವಾದದಿAದ ಮಾತ್ರ. ಆದ್ದರಿಂದ ಎನ್.ಎಸ್.ಎಸ್ ಅಧಿಕಾರಿಗಳು ಮತ್ತು ಸ್ವಯಂಸೇವಕರು ಹಳ್ಳಿಯಿಂದ ದಿಲ್ಲಿವರೆಗೆ ಸಮಾಜದ ಸಮಸ್ಯೆಗಳಿಗೆ ಪರಿಹಾರ ನೀಡಲು ಮುಂದಾಗಬೇಕು ಎಂದರು.
ಮಹಾತ್ಮ ಗಾಂಧೀಜಿ ಅವರು ವಿಶ್ವದ ಮಹಾ ಮಾನವತಾವಾದಿ ಎಂದು ಖ್ಯಾತಿ ಪಡೆದಿದ್ದಾರೆ. ಅಮೆರಿಕಾದ ಲೂಥರ್ ಕಿಂಗ್ ಮತ್ತ ಆಫ್ರೀಕಾದ ನೇಲ್ಸ್ನ ಮಂಡೇಲಾ ಸೇರಿದಂತೆ ವಿಶ್ವದ ಮಹಾನಾಯಕರು ಮಹಾತ್ಮ ಗಾಂಧೀಜಿ ಅವರ ಜೀವನದಿಂದ ಪ್ರೇರಣೆ ಪಡೆದಿದ್ದಾರೆ. ಗಾಂಧೀಜಿ ಅವರು ತಮ್ಮ ಜೀವನವನ್ನು ಅತ್ಯಂತ ಪರಿಶುದ್ಧ, ಪ್ರಾಮಾಣಿಕ ಮತ್ತು ಪಾರದರ್ಶಕ ಬದುಕನ್ನು ಅವರು ಹೊಂದಿದ್ದರು. ಆದರೆ ಇತ್ತೀಚೆಗೆ ಮಹಾತ್ಮಗಾಂಧೀಜಿ ಅವರ ಜೀವನದ ಕಾರ್ಯಗಳನ್ನು ಮತ್ತು ಸಂದೇಶಗಳನ್ನು ತಿರುಚಲಾಗುತ್ತಿರುವುದು ಎಂದು ಬೇಸರ ವ್ಯಕ್ತಪಡಿಸಿದರು.
ಎನ್.ಎಸ್.ಎಸ್. ರಾಜ್ಯ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ ಮಾತನಾಡಿ, ದೇಶದಲ್ಲಿ ಸದ್ಯ ೪೫ ಲಕ್ಷ ಮತ್ತು ರಾಜ್ಯದಲ್ಲಿ ೬.೫ ಲಕ್ಷ ಎನ್.ಎಸ್.ಎಸ್ ಸ್ವಯಂ ಸೇವಕರಿದ್ದಾರೆ. ಈ ಸಂಖ್ಯೆಯನ್ನು ದೇಶದಲ್ಲಿ ಒಂದು ಕೋಟಿ ಮತ್ತು ರಾಜ್ಯದಲ್ಲಿ ೧೦ ಲಕ್ಷ ವೃದ್ಧಿಸುವ ಗುರಿ ಹೊಂದಲಾಗಿದೆ. ಕೇಂದ್ರ ಸರ್ಕಾರ ಎನ್.ಎಸ್.ಎಸ್ ಅನುದಾನವನ್ನು ಹೆಚ್ಚಿಸುವ ಮೂಲಕ ಎನ್.ಎಸ್.ಎಸ್ ಕಾರ್ಯಗಳಿಗೆ ಬಹಳಷ್ಟು ಉತ್ತೇಜನ ನೀಡುತ್ತಿದೆ ಎಂದರು.
ಆರ್ಸಿಯು ಕುಲಸಚಿವೆ ರಾಜಶ್ರೀ ಜೈನಾಪೂರ ಮಾತನಾಡಿ, ಎನ್ಎಸ್ಎಸ್ ಸ್ವಯಂಸೇವಕರಿಗೆ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗವಾದ ಕೃಷಿ ಮತ್ತು ಜಾನುವಾರು ಸಾಕಾಣಿಕೆಯ ಚಟುವಟಿಕೆ ಕಾರ್ಯಗಳ ತರಬೇತಿ ನೀಡಬೇಕು. ಇದರಿಂದ ಯುವಜನತೆಗೆ ಗ್ರಾಮ ವಿಕಾಸದ ಮಹತ್ವ ಅರಿಯುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಆರ್ಸಿಯು ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಮಾತನಾಡಿ, ಮಹಾತ್ಮ ಗಾಂಧೀಜಿ ಅವರ ಸಂದೇಶ, ತತ್ವ ಮತ್ತು ಸಿದ್ಧಾಂತಗಳನ್ನು ನಾವೆಲ್ಲರೂ ಪಾಲಿಸುವುದರ ಮೂಲಕ ಮುಂದಿನ ಪೀಳಿಗೆಗೆ ತಿಳಿಸದೆ ಹೋದಲ್ಲಿ ನಾವೆಲ್ಲರೂ ಬಹು ದೊಡ್ಡ ಶಾಪಕ್ಕೆ ಗುರಿಯಾಗುತ್ತೇವೆ. ಪಾಠ ಮತ್ತು ತರಗತಿಯಿಂದ ವಿಮುಖವಾಗುತ್ತಿರುವ ಕಾಲೇಜು ವಿದ್ಯಾರ್ಥಿಗಳಗೆ ಎನ್.ಎಸ್.ಎಸ್ ಮೂಲಕ ಮೌಲ್ಯಯುತ ಶಿಕ್ಷಣ ನೀಡುವ ಅವಶ್ಯಕತೆಯಿದೆ ಎಂದು ಹೇಳಿದರು.
ಧಾರವಾಡದ ಗಾಂಧೀ ಶಾಂತಿ ಪ್ರತಿಷ್ಠಾನದ ಡಾ. ಸಂಜೀವ ಕುಲಕರ್ಣಿ ಮತ್ತು ಧಾರವಾಡದ ಕವಿವಿಯ ಗಾಂಧೀ ಅಧ್ಯಯನ ಪೀಠದ ನಿವೃತ್ತ ನಿರ್ದೇಶಕಡಾ. ಶಿವಾನಂದ ಶೆಟ್ಟರ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಾಗಾರದಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆಯ ವಿವಿಧ ೧೫೦ಕ್ಕೂ ಹೆಚ್ಚು ಕಾಲೇಜುಗಳ ಎನ್ಎಸ್ಎಸ್ ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಹಾಜರಿದ್ದರು.
ಗಾಂಧೀ ಭವನದ ನಿರ್ದೇಶಕ ಪ್ರೊ. ಜಿ. ಬಿ ಶಿವರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಂಜೀವ ತಳವಾರ ನಿರೂಪಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸಂಯೋಜಕ ಡಾ.ಕನಕಪ್ಪ ಪೂಜಾರ ಸ್ವಾಗತಿಸಿದರು. ಕೆಎಲ್ಇ ವಿವಿಯ ಎನ್.ಎಸ್.ಎಸ್ ಸಂಯೋಜಕಿ ಡಾ.ಅಶ್ವಿನಿ ನರಸಣ್ಣವರ ವಂದಿಸಿದರು.