ಬ್ಯಾಡಗಿ: ಗೋವಿನಜೋಳ, ಹತ್ತಿ ಹಾಗೂ ಇತರ ಬೆಳೆಯಲ್ಲಿ ತೀವ್ರ ಬೆಲೆ ಇಳಿಮುಖ, ಕೂಲಿಕಾರರ ಸಮಸ್ಯೆ ಹಾಗೂ ಆದಾಯ ಕೊರತೆಯ ಹಿನ್ನೆಲೆಯಲ್ಲಿ ತಾಲೂಕಿನ ಹಲವಾರು ರೈತರು ರೇಷ್ಮೆ ಬೆಳೆಯತ್ತ ಮುಖ ಮಾಡಿದ್ದಾರೆ.

ತಾಲೂಕಿನ ಕಲ್ಲೆದೇವರು, ಮೋಟೆಬೆನ್ನೂರು, ಕೆಂಗೊಂಡ, ಗುಂಡೇನಹಳ್ಳಿ, ಕದರಮಂಡಲಗಿ, ಮಲ್ಲೂರು, ಹೆಡಿಗ್ಗೊಂಡ, ಚಿಕ್ಕಣಜಿ, ಬುಡಪನಹಳ್ಳಿ, ಅಳಲಗೇರಿ, ಹಿರೇಹಳ್ಳಿ ಗ್ರಾಮಗಳ ಬಹುತೇಕ ರೈತರು ರೇಷ್ಮೆ ಬೆಳೆಯಲು ತೊಡಗಿದ್ದಾರೆ. ಒಂದು ಕಿಲೋ ರೇಷ್ಮೆ ಗೂಡಿಗೆ 500 ರಿಂದ 700 ರೂ. ದರ ಲಭಿಸುತ್ತಿದೆ. ಹೀಗಾಗಿ, ರೈತರು ಖುಷಿಯಿಂದಲೇ ರೇಷ್ಮೆ ಬೆಳೆಯಲು ಮುಂದಾಗಿದ್ದಾರೆ. ಕಡಿಮೆ ಜಮೀನು ಹಾಗೂ ಅಲ್ಪ ಕೊಳವೆ ಬಾವಿ ನೀರು ಹೊಂದಿದ ರೈತರು ಈ ಬೆಳೆಯತ್ತ ಮುಖ ಮಾಡಿದ್ದು, ಐದಾರು ವರ್ಷಗಳಲ್ಲಿ ಬೆಳೆಗಾರರ ಸಂಖ್ಯೆ ದ್ವಿಗುಣವಾಗಿದೆ.
5 ವರ್ಷಗಳಲ್ಲಿ ಏರಿಕೆ:
2018ರಿಂದ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ರೇಷ್ಮೆ ಬೆಳೆ ಸೇರ್ಪಡೆಗೊಳಿಸಿದ ಬಳಿಕ 200 ಹೆಕ್ಟೇರ್ನಲ್ಲಿ ರೈತರು ರೇಷ್ಮೆ ಬೆಳೆಯತೊಡಗಿದ್ದರು. ಬೆಳೆಗಾರರಿಗೆ ಕೇಂದ್ರ ರೇಷ್ಮೆ ಇಲಾಖೆ ವಿವಿಧ ಸಹಾಯಧನ ನೀಡುವ ಮೂಲಕ ರೈತರನ್ನು ಇನ್ನಷ್ಟು ಪ್ರೋತ್ಸಾಹಿಸುತ್ತಿದೆ. ಐದಾರು ವರ್ಷಗಳಲ್ಲಿ 450ಕ್ಕೂ ಹೆಕ್ಟೇರ್ ಪ್ರದೇಶವನ್ನು ವ್ಯಾಪಿಸಿದೆ. ಕೆಲವರು ಅಡಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳ ಮಧ್ಯೆ ರೇಷ್ಮೆ ಬೆಳೆಯುವ ಮೂಲಕ ಹೈನುಗಾರಿಕೆ ಹಾಗೂ ರೇಷ್ಮೆ ಗೂಡು ಉತ್ಪಾದನೆಯಲ್ಲಿ ತೊಡಗಿದ್ದಾರೆ.
ಅತಿ ಹೆಚ್ಚು ರೇಷ್ಮೆ ಬೆಳೆಯ ಗ್ರಾಮ
ತಾಲೂಕಿನ ಕಲ್ಲೆದೇವರು ಗ್ರಾಮದಲ್ಲಿ 180 ಹೆಕ್ಟೇರ್ನಲ್ಲಿ 125 ರೈತ ಕುಟುಂಬಗಳು ರೇಷ್ಮೆಯನ್ನು 15 ವರ್ಷಗಳಿಂದ ಬೆಳೆಯುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಉದ್ಯೋಗ ದೊರಕಿದೆ. ಕೂಲಿಕಾರರು ಇದರೊಂದಿಗೆ ಹೈನುಗಾರಿಕೆ, ಕುರಿ ಸಾಕಾಣಿಕೆ ಮೂಲಕ ಆದಾಯ ದ್ವಿಗುಣಗೊಳಿಸಿಕೊಂಡಿದ್ದಾರೆ.
ಇಲಾಖೆ ಸೌಲಭ್ಯಗಳು
ರೈತರಿಗೆ ಇಲಾಖೆಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಕಡ್ಡಿ ನಾಟಿಗೆ ಎಕರೆಗೆ 52 ಸಾ. ರೂ. ಸಹಾಯಧನ, ರೇಷ್ಮೆ ಮನೆಗೆ 3.37 ಲಕ್ಷ ರೂ. ಸಹಾಯಧನ, ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ 1 ಲಕ್ಷ ರೂ., ರೇಷ್ಮೆ ಹುಳು ಸಾಕಣಿಕೆ ಸಲಕರಣೆಗಳಿಗೆ ಶೇ. 75ರಷ್ಟು ಸಹಾಯಧನ, ಗೂಡು ಸಾಕಣಿಕೆಗೆ ಕೀಲೋಗೆ 10 ರೂ., ಚಾಕಿ ವೆಚ್ಚ, ನೂರು ಮೊಟ್ಟೆಗೆ 1 ಸಾ.ರೂ. ಸೇರಿದಂತೆ ಇತ್ಯಾದಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವಾರ್ಷಿಕವಾಗಿ ಎಲ್ಲ ಬೆಳೆಗಾರರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುತ್ತಿದೆ.
ಮೆಗಾ ಮಾರುಕಟ್ಟೆ ಆರಂಭವಾಗಿಲ್ಲ
10 ಕೋ.ರೂ. ವೆಚ್ಚದಲ್ಲಿ ಹೂಲಿಹಳ್ಳಿ ಬಳಿ 2023ರಲ್ಲಿ ರೇಷ್ಮೆ ಮಾರುಕಟ್ಟೆ ಕಾಮಗಾರಿ ಆರಂಭವಾಗಿದೆ. ಆದರೆ, ಈವರೆಗೂ ರೇಷ್ಮೆ ಮಾರುಕಟ್ಟೆ ಪೂರ್ಣಗೊಂಡಿಲ್ಲ. ಪರಿಣಾಮ ರೈತರು ದೂರದ ರಾಮನಗರ ಸೇರಿದಂತೆ ವಿವಿಧ ಮಾರುಕಟ್ಟೆಗೆ ತೆರಳುವುದು ತಪ್ಪಿಲ್ಲ. ಜಿಲ್ಲೆಯಲ್ಲಿ ರೈತರಿಗೆ ಮಾರುಕಟ್ಟೆ ಆರಂಭವಾದರೆ ಇನ್ನಷ್ಟು ರೈತರು ರೇಷ್ಮೆ ಬೆಳೆಯುವ ಸಾಧ್ಯತೆ ಇದೆ.
ಹುಳುಗಳ ಖರೀದಿಯಲ್ಲಿ ಗುಣಮಟ್ಟದ ಕೊರತೆ
ಜಿಲ್ಲಾದ್ಯಂತ ಸರ್ಕಾರಿ ಚಾಕಿ ಕೇಂದ್ರಗಳಿಲ್ಲ. 10 ವರ್ಷಗಳ ಹಿಂದೆ ಎಲ್ಲ ತಾಲೂಕುಗಳಲ್ಲಿ ರೇಷ್ಮೆ ಚಾಕಿ ಕೇಂದ್ರ ತೆರೆದು ಕಟ್ಟಡ ನಿರ್ಮಿಸಲಾಗಿತ್ತು. ಆದರೆ, ಈಗ ಎಲ್ಲವೂ ಬಾಗಿಲು ಮುಚ್ಚಿವೆ. ಖಾಸಗಿ ಚಾಕಿ ಕೇಂದ್ರಗಳು ರೈತರಿಗೆ ಹುಳುಗಳನ್ನು ನೀಡುತ್ತಿದ್ದು, ಗುಣಮಟ್ಟದ ಕೊರತೆಯಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಚಾಕಿ ಖರೀದಿ ಬಳಿಕ ಗುಣಮಟ್ಟದ ಪ್ರಮಾಣ ಪತ್ರ ನೀಡಬೇಕಿದೆ. ಇದಕ್ಕೂ ಮೊದಲು ಇಲಾಖೆ ಸಿಬ್ಬಂದಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಿ ವರದಿ ನೀಡಬೇಕಿದೆ. ಆದರೆ, ಅಧಿಕಾರಿಗಳು ಇದ್ಯಾವ ಗೊಡವೆಗೂ ತಲೆಕೆಡಿಸಿಕೊಳ್ಳುತ್ತಿಲ್ಲ. ಪರಿಣಾಮ ರೈತರು ಗೂಡು ಇಳುವರಿಯಲ್ಲಿ ತೀವ್ರ ಹಾನಿ ಅನುಭವಿಸುತ್ತಿದ್ದಾರೆ. ಈಗ ಕೆಲವರು ಬೆಂಗಳೂರು, ರಾಮನಗರಗಳ ಬಳಿಯ ಚಾಕಿ ಕೇಂದ್ರಗಳಿಂದ ಹುಳು ತರಿಸಿಕೊಳ್ಳುವ ಸ್ಥಿತಿ ಬಂದಿದೆ. ಈ ಕುರಿತು ಜಿಲ್ಲಾಧಿಕಾರಿಗಳು, ಉಸ್ತುವಾರಿ ಮಂತ್ರಿಗಳು ಗಮನಿಸಬೇಕಿದೆ.
ಗುಣಮಟ್ಟದ ಹುಳುಗಳ ಪೂರೈಕೆಯಾಗುತ್ತಿಲ್ಲ, ಗೂಡು ಕಟ್ಟುವ ಸಮಯದಲ್ಲಿ ಹಾಲು ಹುಳುಗಳು ಕಾಣಿಸಿಕೊಂಡ ಪರಿಣಾಮ ರೈತನಿಗೆ ನಷ್ಟವಾಗುತ್ತಿದೆ. ಇಲಾಖೆ ಅಧಿಕಾರಿಗಳು ಮೌನ ವಹಿಸಿರುವುದು ರೈತರಿಗೆ ಬಿಸಿತುಪ್ಪವಾಗಿದೆ. ಹಿಪ್ಪು ನೇರಳೆ ಗಿಡಗಳಿಗೆ ಮುಟುರು ರೋಗ ಬಂದಲ್ಲಿ ಸಮರ್ಪಕ ಔಷಧ, ಸಲಹೆ ಸಿಗುತ್ತಿಲ್ಲ. ಚಾಕಿ ಸೆಂಟರ್ಗಳಿಂದ ರೈತರಿಗೆ ಸಾಕಷ್ಟು ಮೋಸವಾಗುತ್ತಿದೆ.
ಪ್ರವೀಣ ಉಜನಿ, ಕದರಮಂಡಲಗಿ
ಅಲ್ಪ ಜಮೀನು ಉಳ್ಳ ರೈತರು ಕಡಿಮೆ ವೆಚ್ಚದಲ್ಲಿ ರೇಷ್ಮೆ ಬೆಳೆಯಲು ಮುಂದಾಗಿದ್ದಾರೆ. ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯ ಒದಗಿಸಲಾಗುತ್ತಿದೆ. ಸರ್ಕಾರದ ಚಾಕಿ ಸೆಂಟರ್ ಜಿಲ್ಲೆಯಲ್ಲಿ ಇಲ್ಲ. ಖಾಸಗಿ ಸೆಂಟರ್ನಿಂದ ಕಡ್ಡಾಯವಾಗಿ ರೈತರು ಗುಣಮಟ್ಟ ಪರೀಕ್ಷೆಯ ಪ್ರಮಾಣ ಪಡೆಯಲು ಸೂಚಿಸಿದ್ದೇವೆ. ಈ ಕುರಿತು ಸಂಬಂಧಿಸಿದ ಮೇಲಧಿಕಾರಿಗಳ ಸಹಕಾರ ಪಡೆಯುತ್ತೇನೆ.
ಭಾರತಿ ನಾಯ್ಕ, ರೇಷ್ಮೆ ಇಲಾಖೆ ವಿಸ್ತರ್ಣಾಧಿಕಾರಿ