ಬೆಂಗಳೂರು: ಬಿಗ್ಬಾಸ್ ಅತ್ಯಂತ ಹೆಚ್ಚಿನ ಜನಮನ್ನಣೆ ಪಡೆದಿರುವ ಕಾರ್ಯಕ್ರಮವಾಗಿದೆ. ಬಿಗ್ಬಾಸ್ ಮನೆಗೆ ಎಂಟ್ರಿ ಕೊಡಲು ಜನಸಾಮಾನ್ಯರು ಹಾಗೂ ಸೆಲಬ್ರೆಟಿಗಳು ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಆದರೆ ಕೆಲವು ಜನಕ್ಕೆ ಮಾತ್ರ ಅವಕಾಶ ದೊರೆಯುತ್ತದೆ. ಹೀಗೆ ಬಿಗ್ಬಾಸ್ ಮನೆ ಪ್ರವೇಶ ಮಾಡಲು ನನಗೆ ಒಂದು ಅವಕಾಶ ಕೊಡಿ ಎಂದು ರೈತನೊಬ್ಬ ಕಿಚ್ಚಾ ಸುದೀಪ್ ಅವರ ಬಳಿ ವಿಶೇಷವಾಗಿ ಮನವಿ ಮಾಡಿದ್ದಾನೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ಎತ್ತಿನ ಗಾಡಿನಲ್ಲಿ ಬೆಂಗಳೂರಿಗೆ ಬಂದು ಕಿಚ್ಚ ಸುದೀಪ್ ಅವರ ಮನೆಯ ಎದುರಿನಲ್ಲಿ ಹೈಡ್ರಾಮಾ ಮಾಡಿದ್ದಾರೆ. ‘ನಮ್ಮ ನಡಿಗೆ ಬಿಗ್ ಬಾಸ್ ಕಡೆಗೆ. ಅವಿದ್ಯಾವಂತ ರೈತರಿಗೆ ಒಂದು ಅವಕಾಶ ಕೊಡಿ’ ಎಂಬ ಬ್ಯಾನರ್ ಅನ್ನು ಎತ್ತಿನ ಗಾಡಿಗೆ ಕಟ್ಟಿಕೊಂಡು ಅವರು ಬಂದಿದ್ದಾರೆ.
ರೈತ ತಾನೂ ಟಿ. ನರಸೀಪುರದಿಂದ ಬಂದಿರುವುದಾಗಿ ಈ ವ್ಯಕ್ತಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಸುದೀಪ್ ಮನೆಯ ಭದ್ರತಾ ಸಿಬ್ಬಂದಿ ಈ ರೈತನಿಗೆ ಬುದ್ಧಿ ಹೇಳಿ ವಾಪಸ್ ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತಾದ ವಿಡಿಯೋ ವೈರಲ್ ಆಗುತ್ತಿದೆ.
ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸಬೇಕು ಎಂಬ ಆಸೆ ಬಹುತೇಕರಿಗೆ ಇರುತ್ತದೆ. ಆದರೆ ಎಲ್ಲರಿಗೂ ಚಾನ್ಸ್ ಸಿಗುವುದಿಲ್ಲ. ಅವಕಾಶಕ್ಕಾಗಿ ಕೆಲವರು ಹಲವಾರು ಬಗೆಯ ಸರ್ಕಸ್ ಮಾಡುತ್ತಾರೆ. ವಿವಿಧ ರೀತಿಯಲ್ಲಿ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ.