More

    ಧರ್ಮದ ಸತ್ವಪರೀಕ್ಷೆ ಎದುರಿಸಿ ಮಹಾತ್ಮರಾಗಿ

    ಧರ್ಮದ ಸತ್ವಪರೀಕ್ಷೆ ಎದುರಿಸಿ ಮಹಾತ್ಮರಾಗಿಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಯಕ್ಷಗಾನದ ಕಥಾ ಹಂದರ ಹೇಗಿತ್ತೆಂದರೆ : ಒಬ್ಬ ರಾಜನು ಉತ್ತಮ ರೀತಿಯಲ್ಲಿ ಪ್ರಜೆಗಳನ್ನು ಪರಿಪಾಲಿಸುತ್ತಾ ರಾಜ್ಯವನ್ನು ಮುನ್ನಡೆಸುತ್ತಿದ್ದ. ಒಂದೊಮ್ಮೆ ನಾರದ ಮಹರ್ಷಿಗಳು ಆ ರಾಜನ ಬಳಿ ಬಂದು ಆತನನ್ನು ಉದ್ದೇಶಿಸಿ, ‘ಮಹಾರಾಜ, ನೀನೇನೋ ನಿನ್ನಷ್ಟಕ್ಕೆ ರಾಜ್ಯಭಾರ ಮಾಡುತ್ತಾ ಇದ್ದೀಯೇ ಹೌದು. ಆದರೆ, ನಿನ್ನ ತಂದೆಯನ್ನು ಕೊಂದು, ಇಲ್ಲಿನ ಸಂಪತ್ತನ್ನು ದೋಚಿಕೊಂಡು ಹೋದ ನೆರೆಯ ರಾಜ್ಯದ ರಾಜನು ತನ್ನ ಸೈನ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದ್ದಾನೆ. ನಿನ್ನ ತಂದೆಯನ್ನು ಕೊಂದಾತ ಅಲ್ಲದೆ ಇಲ್ಲಿಯ ಸಂಪತ್ತನ್ನು ದೋಚಿದವನಾಗಿದ್ದಾನೆ’ ಎಂದಾಗ, ‘ನಾರದರೇ, ನನಗೆ ಯಾವ ಕೋಪವೂ ಇಲ್ಲ. ಆತನ ಮೇಲೇಕೆ ಯುದ್ಧ ಮಾಡಲಿ?’ ಎನ್ನುತ್ತಾನೆ.

    ನಾರದರು, ‘ನಿನ್ನ ತಂದೆಯನ್ನು ಹತ್ಯೆ ಮಾಡಿದವರ ಬಗ್ಗೆ ಸೇಡು ತೀರಿಸಿಕೊಳ್ಳಬೇಕೆಂದು ಅನ್ನಿಸಿಲ್ಲವೇ? ಕೈ ಬಿಟ್ಟು ಹೋದ ಸಂಪತ್ತನ್ನು ಮರಳಿ ಪಡೆಯಬೇಕೆಂಬ ಇಚ್ಛೆ ಒಂದಿಷ್ಟೂ ಇಲ್ಲವೇ? ಅಥವಾ ಆ ರಾಜನಿಗೆ ಹೆದರಿ ಕುಳಿತಿರುವೇಯೋ. ಆದರೆ, ನೀನಿಲ್ಲಿ ನಿನ್ನಷ್ಟಕೇ ಇದ್ದೀಯಾ?’ ಎಂದೆನ್ನುತ್ತಾರೆ. ಆಗ ರಾಜನಿಗೂ ನಾರದರ ಮಾತು ಹೌದೆನಿಸುತ್ತದೆ. ‘ಅದಕ್ಕೀಗ ನಾನೇನು ಮಾಡಬೇಕು ಎಂದು ತಿಳಿಸಿ’ ಎಂದಾಗ ನಾರದರು ಸಲಹೆ ಕೊಡುತ್ತಾರೆ. ‘ನೀನು ಆ ರಾಜ್ಯದ ಮೇಲೆ ದಾಳಿ ಮಾಡು, ರಾಜನನ್ನು ನಾಶ ಮಾಡಿ, ರಾಜ್ಯವನ್ನು ವಶಪಡಿಸಿಕೋ. ಅತ್ಯಂತ ಸುಂದರಿಯಾದ ರಾಣಿಯನ್ನು ಕೂಡ ನಿನ್ನವಳನ್ನಾಗಿ ಮಾಡಿಕೋ’ ಎಂದಾಗ, ‘ರಾಜ್ಯವನ್ನು ಬೇಕಾದರೆ ವಶ ಮಾಡಿಕೊಳ್ಳಬಹುದು. ಆದರೆ, ವಿಧವೆ ರಾಣಿಯನ್ನು ಹೇಗೆ ವಶ ಮಾಡಲಿ, ಮೈಲಿಗೆಯಾಗುವುದಿಲ್ಲವೇ’ ಎಂದೆನ್ನುತ್ತಾನೆ.

    ‘ವಿಧವೆಯನ್ನು ಮದುವೆಯಾಗುವ ವಿಚಾರ ಬರುವುದಿಲ್ಲ. ಹೇಗೂ ನೀನು ಆ ರಾಜನನ್ನು ನಾಶ ಮಾಡಿ ಸಿಂಹಾಸನ ಏರುತ್ತಿ. ನೀನೇರುವ ಆ ಸಿಂಹಾಸನ ಹೇಗೆ ನಿನಗೆ ಮೈಲಿಗೆಯಾಗುವುದಿಲ್ಲವೋ, ಹಾಗೆಯೆಯೇ ಈ ಹಿಂದೆ ಆ ಸಿಂಹಾಸನ ಏರುತ್ತಿದ್ದ ಆತನ ರಾಣಿಯೂ ನಿನಗೆ ಮೈಲಿಗೆಯಾಗಲಾರಳು’ ಎಂಬ ಮಾತನ್ನು ಹೇಳುತ್ತಾರೆ.

    ಹೀಗೆ ಮಾತು ಕತೆ ಸಾಗುತ್ತದೆ. ನಾರದ ಮಾತುಗಳಿಂದ ಉತ್ಸುಕನಾದ ರಾಜ ಯುದ್ಧದ ಸಿದ್ಧತೆ ಮಾಡಿಕೊಂಡು ವೈರಿ ರಾಜನ ವಿರುದ್ಧ ದಂಡೆತ್ತಿ ಹೋಗುತ್ತಾನೆ. ವೈರಿ ರಾಜನು ತನ್ನ ಬಳಿ ಯುದ್ಧಕ್ಕೆ ಬಂದ ರಾಜನನ್ನು ಕುರಿತು, ‘ನೀನು ಯಾಕೆ ನನ್ನ ಮೇಲೆ ಯುದ್ಧಕ್ಕೆ ಬಂದೆ? ನನಗೂ-ನಿನಗೂ ಯಾವುದೇ ದ್ವೇಷಗಳಿಲ್ಲ’ ಎಂದಾಗ. ‘ನಿನ್ನ ತಂದೆ ನನ್ನ ತಂದೆಯನ್ನು ಕೊಂದಿದ್ದಾನೆ. ಮಾತ್ರವಲ್ಲದೆ, ನಮ್ಮ ರಾಜ್ಯದ ಸಂಪತ್ತನ್ನು ದೋಚಿದ್ದಾನೆ’ ಎಂದುತ್ತರಿಸುತ್ತಾನೆ.

    ಆಗ ವೈರಿ ರಾಜನು, ‘ಅದ್ಯಾವುದೂ ನನಗೀಗ ಸಂಬಂಧಿಸಿದ್ದಲ್ಲ. ಈಗ ನೀನು ಅನಾವಶ್ಯಕವಾಗಿ ಯುದ್ಧಕ್ಕೆ ಬಂದರೆ ಸುಮ್ಮನಿರಲಾರೆ? ನಿನ್ನನ್ನು ಎದುರಿಸಿಯೇ ಎದುರಿಸುತ್ತೇನೆ’ ಎಂದು ಹೇಳಿ ಯುದ್ಧಕ್ಕೆ ತೊಡಗುತ್ತಾರೆ. ಆಗ ವೈರಿ ರಾಜನು ಸಾವನ್ನಪ್ಪುತ್ತಾನೆ.

    ಮರಣ ಹೊಂದಿದ ರಾಜನ ಪತ್ನಿ ದುಃಖಿಸುತ್ತಿರುತ್ತಾಳೆ. ಯಾಕಾಗಿ ಬದುಕಲಿ? ಯಾರಿಗಾಗಿ ಬದುಕಲಿ? ನಾನು ಅನಾಥೆಯಾದೆ ಎಂದು ಕಣ್ಣೀರುಡುತ್ತಾಳೆ. ಆಗ ನಾರದರು ಪ್ರತ್ಯಕ್ಷವಾಗಿ, ‘ನೀನು ಅಳಬೇಡ. ನೀನು ವಿಜಯಿಯಾದ ರಾಜನನ್ನು ಮದುವೆಯಾಗು. ನಿನಗೆ ಒಳಿತೇ ಆಗುತ್ತದೆ’ ಎಂದು ಹೇಳಿ ಮಾಯವಾಗುತ್ತಾರೆ.

    ಈ ಎಲ್ಲ ಸಂಭಾಷಣೆಗಳು ಪಾತ್ರಧಾರಿಗಳ ಮೂಲಕ ಅಭಿವ್ಯಕ್ತಿಪಡಿಸಿದ್ದು, ಯಕ್ಷಗಾನ ಪ್ರಸಂಗ ಬರೆದ ಸಾಹಿತಿ. ಸಂಭಾಷಣೆ ಅಥವಾ ಪ್ರಸಂಗದ ವಿಚಾರಗಳ ಬಗ್ಗೆ ಯಾವ ಆಧಾರವಿದೆ? ಅಥವಾ ಯಾವ ಪುರಾಣದಲ್ಲಿ ಉಲ್ಲೇಖಿತವಾಗಿದೆ ಎಂದು ಯಾರಾದರೂ ಹೇಳಬಹುದು. ಮುಖ್ಯವಾಗಿ ಗಮನಿಸಬೇಕೆಂದರೆ ಕೆಲವು ಯಕ್ಷಗಾನದ ಕತೆಗಳು ಪುರಾಣ, ಆಧಾರದ ಮೇಲೆ ರಚಿತವಾಗಿರುವುದಿಲ್ಲ. ವೀರ ರಸಕ್ಕೆ ಹೆಚ್ಚು ಒತ್ತು ಕೊಡುವುದರಿಂದ ಪಾತ್ರಗಳು ಕಳೆಗಟ್ಟುವಂತೆ ಮಾಡಲು ಸಾಹಿತಿಗಳು ಕತೆಗಳನ್ನು ರೂಪಿಸುತ್ತಾರೆ. ಧರ್ಮ-ಅಧರ್ಮಗಳ ನಡುವಿನ ಕತೆಯಾಗಿದ್ದು, ಅಂತಿಮವಾಗಿ ದುಷ್ಟರು ನಾಶ ಹೊಂದಿ ಶಿಷ್ಟರ ಜಯವಾಗುತ್ತದೆ. ಧರ್ಮವು ಉಳಿಯುತ್ತದೆ ಎಂಬ ಸಂದೇಶ ನೀಡುವಂತಹ ಕತೆಗಳಾಗಿರುತ್ತವೆ.

    ಮೇಲಿನ ಕತೆ ಹಾಗೂ ಸುತ್ತ-ಮುತ್ತಲಿನ ಪರಿಸರದಲ್ಲಿನ ಕೆಲವೊಂದು ಘಟನೆಗಳನ್ನು ಗಮನಿಸುವಾಗ ನನಗನ್ನಿಸಿದ್ದು, ಎಷ್ಟೋ ಸಲ ಯಾರು ಸತ್ಯ, ಧರ್ಮ, ನ್ಯಾಯ, ನೀತಿ ಮಾರ್ಗದ ಮೂಲಕ ಬದುಕನ್ನು ನಡೆಸುತ್ತಾರೋ ಅವರಿಗೆ ಹೆಚ್ಚು ಕಷ್ಟ-ನಷ್ಟ, ದುಃಖ, ತಾಪತ್ರಯಗಳು ಉಂಟಾಗುವುದು ಹಾಗೂ ಧರ್ವಿುಷ್ಟರಿಗೆಯೇ ಏಕೆ ಅಷ್ಟೊಂದು ಸಂಕಷ್ಟಗಳು ಎದುರಾಗುತ್ತವೆ ಎಂದು. ಇದಕ್ಕೆ ಹಲವಾರು ಬಗೆಯ ಉತ್ತರಗಳನ್ನು ನೀಡಬಹುದು. ಇಂತಹ ಪರೀಕ್ಷೆಗಳ ಮೂಲಕ ಯಾರು ಧರ್ವಿುಷ್ಠರು ಯಾರು ಅಧರ್ಮದಲ್ಲಿ ನಡೆಯುವವರು ಎಂದು ತಿಳಿಯಬಹುದಾಗಿದೆ. ಚಿನ್ನಕ್ಕೆ ಪಾಲಿಶ್ ನೀಡಿದಾಗ ಹೇಗೆ ಹೊಳಪನ್ನು ಹೆಚ್ಚಿಸಿಕೊಳ್ಳುತ್ತದೆಯೋ ಹಾಗೆ ಧರ್ವಿುಷ್ಠರಿಗೇ ಹೆಚ್ಚು ಕಷ್ಟಗಳನ್ನು ಒಡ್ಡಿ, ಪರೀಕ್ಷೆಗೆ ಒಳಪಡಿಸುವ ಮೂಲಕ ಅವರಲ್ಲಿನ ಧರ್ವಿುಷ್ಠತೆಯು ರಾರಾಜಿಸುವಂತೆ ಮಾಡುವುದಾಗಿದೆ ಎಂದೆನ್ನಬಹುದು.

    ಪುರಾಣದ ನಳ-ದಮಯಂತಿಯರ ಕತೆ, ಸತ್ಯ ಹರಿಶ್ಚಂದ್ರನ ಕತೆ, ಏಸು ಕ್ರಿಸ್ತಮಾತ್ರವಲ್ಲದೆ ಪ್ರಸಿದ್ಧ ರಾಮಾಯಣ, ಮಹಾಭಾರತದಲ್ಲೂ ಧರ್ವಿುಷ್ಠರಿಗೆ ಸಾಕಷ್ಟು ತೊಂದರೆಗಳು, ಕಷ್ಟ ಅನುಭವಿಸಿದ್ದ ರೀತಿಯನ್ನು ಕಾಣಬಹುದಾಗಿದೆ. ರಾಮಾಯಣದಲ್ಲಿ ಶ್ರೀರಾಮಚಂದ್ರನು ಯಾವುದೇ ತಪ್ಪು ಮಾಡದಿದ್ದರೂ ತನ್ನ ತಂದೆಯ ಆಜ್ಞೆಯಂತೆ ವನವಾಸಕ್ಕೆ ತೆರಳಬೇಕಾಯಿತು. ಮಹಾಭಾರತದಲ್ಲಿ ತನ್ನಷ್ಟಕ್ಕೇ ತಾನಿದ್ದು, ಧರ್ಮಯುತವಾದ ಬದುಕನ್ನು ನಡೆಸುತ್ತಿದ್ದ ಧರ್ಮರಾಯನು ಕೂಡ ದ್ಯೂತದಲ್ಲಿ ಸೋತು ತನ್ನ ಸಹೋದರರೊಂದಿಗೆ ಕಾಡು-ಮೇಡುಗಳಲ್ಲಿ ಅಲೆಯುವಂತಾಯಿತು. ಈ ಎರಡೂ ಘಟನೆಗಳಲ್ಲಿ ಕೂಡ ಧರ್ವಿುಷ್ಠರು ಅಧರ್ಮವನ್ನು ಮಾಡದೆಯೂ ಭ್ರಷ್ಟರಾಗುತ್ತಾರೆ ಎಂಬುದನ್ನು ಗಮನಿಸಬಹುದಾಗಿದೆ.

    ಆದರೆ, ಧರ್ವಿುಷ್ಠರಿಗೆ ಎಂದೆಂದಿಗೂ ಭಗವಂತನ ಅನುಗ್ರಹವಿದೆಯೆಂದು ಮರೆಯಬಾರದು. ಧರ್ಮದ ನಡವಳಿಕೆಯಿಂದಲೇ ಶ್ರೀ ರಾಮನು ಭಗವಂತನ ಸ್ಥಾನವನ್ನು ಅಲಂಕರಿಸುತ್ತಾನೆ ಎಂಬುದು ರಾಮಾಯಣದಲ್ಲಿ ಉಲ್ಲೇಖಿತವಾಗಿದೆ. ಅಂತೆಯೇ ಮಹಾಭಾರತದಲ್ಲಿ ಸಾಕ್ಷಾತ್ ಭಗವಾನ್ ಶ್ರೀ ಕೃಷ್ಣನೆ ಧರ್ವಿುಷ್ಠರ ಬೆನ್ನೆಲುಬಾಗಿ ನಿಂತು ರಕ್ಷಣೆ ನೀಡುತ್ತಾನೆ. ಈ ಎರಡೂ ಕತೆಗಳಲ್ಲಿ ಅವರ ಸ್ವಯಂ ಶಕ್ತಿಯ ಜತೆಗೆ ಧರ್ಮದ ಬೆಂಬಲ ಹಾಗೂ ಭಗವಂತನ ಅನುಗ್ರಹವೂ ಇರುವುದನ್ನು ಗಮನಿಸಬಹುದು.

    ಏಸು ಕ್ರಿಸ್ತನಿಗೆ ಯಾಕೆ ಅಷ್ಟು ಹಿಂಸೆಯಾಯಿತು? ಆತನನ್ನು ಯಾಕೆ ವಿರೋಧಿಸಿದರು?

    ಆಡಳಿತಶಾಹಿ, ಪುರೋಹಿತಶಾಹಿಗಳು ಆತನ ವಿಚಾರಗಳನ್ನು ದಮನ ಮಾಡಲು ಯಾಕೆ ಪ್ರಯತ್ನಿಸಿದರು ಎಂದರೆ ಆತ ಧರ್ವಿುಷ್ಠನೆಂಬ ಒಂದೇ ಒಂದು ಕಾರಣಕ್ಕಾಗಿ. ಆತ ಧರ್ಮಮಾರ್ಗದಿಂದ ನಮ್ಮನ್ನೆಲ್ಲ ಸರ್ವನಾಶ ಮಾಡುತ್ತಾನೆ, ನಮ್ಮ ವ್ಯವಸ್ಥೆಗಳಿಗೆ ಅಡ್ಡಗಾಲು ಹಾಕುತ್ತಾನೆ, ಜನರನ್ನು ತನ್ನತ್ತ ಸೆಳೆದು ನಮ್ಮಿಂದ ದೂರ ಮಾಡುತ್ತಾನೆ, ಹಾಗಾಗಿ, ಆತನನ್ನು ಧರ್ಮಭ್ರಷ್ಟನನ್ನಾಗಿ ಮಾಡಿದರೆ ನಮಗೆ ಯಾವ ತೊಂದರೆಯೂ ಇಲ್ಲ ಎಂದು ತಿಳಿದು ಆತನನ್ನು ನಾಶ ಮಾಡಲು ಮುಂದಾ ಗುತ್ತಾರೆ. ಆತನನ್ನು ಶಿಲುಬೆಗೆ ಏರಿಸಿ, ಮೊಳೆ ಹೊಡೆದು ನಾನಾ ತರಹದ ಹಿಂಸೆಗಳನ್ನು ನೀಡುತ್ತಾರೆ. ಆತನ ಭಕ್ತರು, ಅನುಯಾಯಿಗಳು ಎಷ್ಟು ಬೇಡಿಕೊಂಡರೂ ಕಷ್ಟದಿಂದ ಪಾರಾಗಲು ಕ್ರಿಸ್ತನಿಗೆ ಸಾಧ್ಯವಾಗಲೇ ಇಲ್ಲ.

    ಸುಮಾರು 2500ವರ್ಷಗಳ ಹಿಂದೆ ಪಾರ್ಶ್ವನಾಥ ತೀರ್ಥಂಕರರು ಧ್ಯಾನ, ತಪಸ್ಸು ಮಾಡುತ್ತಿದ್ದಾಗ ಅವರ ಪೂರ್ವಜನ್ಮದ ಶತ್ರು ಕಮಠ ಎನ್ನುವವನು ಅವರಿಗೆ ಸಾಕಷ್ಟು ಉಪಟಳ ನೀಡುತ್ತಾನೆ. ಅಂದರೆ ತಾಳ್ಮೆ, ಸಹನೆ ಮತ್ತು ಶಾಂತಿಯಿಂದ ಇದ್ದು ಪ್ರತಿಕ್ರಿಯೆ ಅಥವಾ ಪ್ರತಿರೋಧ ನೀಡದ ಪಾರ್ಶ್ವನಾಥರು ತೀರ್ಥಂಕರರಾದರು. ಯಾಕೆಂದರೆ ತಪಸ್ಸು ಮಾಡಿ ಯಶಸ್ವಿಯಾದರೆ, ಪ್ರಖ್ಯಾತನಾಗುತ್ತಾನೆ, ಧರ್ಮವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾನೆ ಎಂದು ಭಾವಿಸಿ ತೊಂದರೆ ಕೊಡುತ್ತಾನೆ. ಕಿವಿಗೆ ಮೊಳೆಯನ್ನು ಬಡಿಯುವುದು, ಕೆಂಡದ ಮಳೆ ಸುರಿಸುವುದು ಮುಂತಾದ ಸಂಕಷ್ಟಗಳನ್ನು ನೀಡುತ್ತಾರೆ. ಈ ಸಂದರ್ಭದಲ್ಲಿ ಧರಣೇಂದ್ರ ಮತ್ತು ಪದ್ಮಾವತಿ ಎಂಬ ಇಬ್ಬರು ದೇವತೆಗಳು ಅವರಿಗೆ ಉಪಸರ್ಗವನ್ನು, ಕಷ್ಟವನ್ನು ಎದುರಿಸುವ, ಸಹಿಸುವ ಶಕ್ತಿಯನ್ನು ನೀಡುತ್ತಾರೆ. ತ್ಯಾಗ ಮತ್ತು ಅಹಿಂಸೆಗೆ ಒತ್ತು ನೀಡಿದ್ದ ಭಗವಾನ್ ಮಹಾವೀರರಿಗೂ ಧರ್ವಚರಣೆಯ ಸಂದರ್ಭದಲ್ಲಿ ಕಷ್ಟ ತಪ್ಪಿರಲಿಲ್ಲ.

    ಇದೇ ರೀತಿ ಮಹಮ್ಮದ್ ಪೈಗಂಬರ್ ಅವರನ್ನು ಕೂಡ ನಾಶ ಮಾಡಬೇಕೆಂದು ಬೆನ್ನುಹತ್ತಲಾಗಿತ್ತು. ಒಂದೊಮ್ಮೆ ವಿರೋಧಿಗಳು ಅವರನ್ನು ಬೆನ್ನುಹತ್ತಿದ್ದಾಗ ಅವರಿಂದ ತಪ್ಪಿಸಿಕೊಳ್ಳಲು ಅವರು ಕತ್ತಲಿನಿಂದ ಆವೃತವಾದ ಗುಹೆಯ ಒಳಹೋಗುತ್ತಾರೆ. ವಿರೋಧಿಗಳು ಅವರನ್ನು ಹುಡುಕುತ್ತಾ ಗುಹೆಯ ಎದುರಿಗೆಯೇ ಬರುತ್ತಾರೆ. ಗುಹೆಯ ಒಳಗೆಲ್ಲ ಕತ್ತಲು ತುಂಬಿತ್ತು. ಒಳ ಹೋಗಲು ಭಯವನ್ನು ಹುಟ್ಟಿಸುತ್ತಿತ್ತು. ಇನ್ನೇನು ಒಳ ಹೋಗುವ ಅಂದಾಜಿನಲ್ಲಿದ್ದಾಗ ಗುಂಪಿನಲ್ಲಿ ಒಬ್ಬಾತ ಹೇಳಿದ, ‘ನಿಲ್ಲಿ. ಈ ಗುಹೆಯ ಒಳಗಡೆ ಯಾರೂ ಹೋಗಿಲ್ಲ. ಯಾಕೆಂದರೆ ಗುಹೆಯ ಬಾಗಿಲಲ್ಲಿ ಜೇಡ ಬಲೆ ಕಟ್ಟಿದೆ. ಒಂದು ವೇಳೆ ಯಾರಾದರೂ ಒಳ ಹೋಗಿದ್ದಿದ್ದರೆ ಜೇಡರ ಬಲೆ ಇರುತ್ತಿರಲಿಲ್ಲ ಅಲ್ಲವೇ’ ಎಂದಾಗ, ಎಲ್ಲವರೂ ಹೌದೆಂದು ತಿಳಿಸಿ ಅಲ್ಲಿಂದ ಹಿಂದಿರುಗುತ್ತಾರೆ. ಇಲ್ಲೊಂದು ಅದ್ಭುತ ಘಟನೆ ಜರುಗುತ್ತದೆ ಏನೆಂದರೆ ಪೈಗಂಬರರು ಒಳ ಹೋದೊಡನೆ ವೇಗವಾಗಿ ಬಲೆ ಹೆಣೆಯುವ ಜೇಡವೊಂದು ಸೈನಿಕರು ಬರುವುದರೊಳಗಾಗಿ ಗುಹೆಯ ಬಾಗಿಲಿಗೆ ಬಲೆ ಹೆಣೆದು ಬಿಟ್ಟಿತ್ತು. ಹಾಗಾಗಿ, ಅವರು ವಿರೋಧಿಗಳ ಕೈಗೆ ಸಿಗದೆ ಪಾರಾಗಿದ್ದರು. ಇಂತಹ ಅನೇಕ ಘಟನೆಗಳು ಎಲ್ಲ ಮಹಾತ್ಮರ, ಧರ್ವಿುಷ್ಟ ಮತ್ತು ಪುಣ್ಯಾತ್ಮರ ಜೀವನಗಳಲ್ಲಿ ಘಟಿಸಿವೆ. ಅವರೆಲ್ಲರ ಬದುಕಿನಲ್ಲಿ ಯಾಕಾಗಿ ಇಂತಹ ಆಕಸ್ಮಿಕ ಘಟನೆಗಳು, ನಂಬಲು ಅಸಾಧ್ಯವಾದಂತಹ ಸನ್ನಿವೇಶಗಳು ನಡೆದವು ಎಂದೆನಿಸುತ್ತದೆ. ಯಾರು ಧರ್ವಿುಷ್ಠರಾಗಿರುತ್ತಾರೋ, ಎಷ್ಟೇ ಕಷ್ಟ-ನಷ್ಟಗಳಾದರೂ ಧರ್ಮಮಾರ್ಗ ಬಿಟ್ಟು ನಡೆಯುವುದಿಲ್ಲವೋ ಅವರೆಲ್ಲರ ರಕ್ಷಣೆಗೆ ಭಗವಂತ ಒಂದಲ್ಲ ಒಂದು ರೀತಿಯಲ್ಲಿ ಬಂದೇ ಬರುತ್ತಾನೆ ಎಂದು ಭಾವಿಸಬಹುದು. ಅದಕ್ಕಾಗಿ ಬದುಕಿನಲ್ಲಿ ಕಷ್ಟ-ನಷ್ಟಗಳು ಬಂದಾಗ ಸಹಿಷ್ಣುತೆ ಬೆಳೆಸಿಕೊಳ್ಳಬೇಕಾಗುತ್ತದೆ.

    ಮಹಾತ್ಮ ಗಾಂಧೀಜೀಯವರು ಜೈನಾಚಾರ್ಯರಿಂದ ಪ್ರೇರಿತರಾಗಿದ್ದರಂತೆ. ತಮ್ಮ ಹಠವಾದಿ ನಿಲುವು, ಒಪ್ಪಿಕೊಂಡ ಆದರ್ಶಗಳಲ್ಲಿ ಹೊಂದಾಣಿಕೆ ಮಾಡಕೊಳ್ಳದಿರುವುದು, ಅತಿ ಸಾಮಾನ್ಯ ಬಡವನಾದ ದೇಶದ ಸಾಮಾನ್ಯ ಪ್ರಜೆಯಂತೆ ತ್ಯಾಗ ಜೀವನ, ಸರಳ ಜೀವನ ನಡೆಸಿದ್ದು ಅದರ ಸ್ಥಿರತೆಯನ್ನು ಸಾರುತ್ತದೆ. ಅವರಿಗೆ ಶರಣಾದ ಬ್ರಿಟಿಷರು ಹಾಗೂ ಅವರ ವಿರೋಧಿಗಳು ಈ ಧರ್ಮದ ನಡೆಗೆ ಗೌರವಕೊಟ್ಟು ಹೆದರಿದರು.

    ಧಮೋ ರಕ್ಷತಿ ರಕ್ಷಿತಃ ಎನ್ನುವಂತೆ ಧರ್ಮದ ನಡೆ ನಿರ್ಭೀತಿಗೆ ಕಾರಣಾವಾಯಿತು. ಶತ್ರುಗಳ ಅಥವಾ ದ್ವೇಷಿಸುವವರ ಮೇಲೆ ಜಯ ಸಾಧಿಸಿತು ಅಲ್ಲವೇ?

    ಧರ್ಮ-ಅಧರ್ಮದ ಬಗ್ಗೆ ಬಹಳ ಸೂಕ್ಷ್ಮ ಹಾಗೂ ಎಚ್ಚರಿಕೆಯಿಂದ ಆಲೋಚನೆ ಮಾಡಬೇಕಾಗುತ್ತದೆ. ಧರ್ವಿುಷ್ಠರನ್ನು ಭ್ರಷ್ಟರನ್ನಾಗಿಸುವ ಅಧರ್ವಿುಗಳು ಯಾರು? ಅವರ ಉದ್ದೇಶವೇನು? ಎಂದು ಯೋಚನೆ ಮಾಡಬೇಕಾಗುತ್ತದೆ. ಅಧರ್ವಿುಗಳು ಎಷ್ಟೇ ಪ್ರಯತ್ನಪಟ್ಟರೂ ಧರ್ಮಕ್ಕೆ ಸೋಲಿಲ್ಲ, ಸಾವಿಲ್ಲ ಎಂಬುದನ್ನು ಈ ಮೊದಲು ಹೇಳಿದಂತಹ ವಿಚಾರಗಳೆಲ್ಲ ಸಾರಿ ಸಾರಿ ಹೇಳುತ್ತವೆ. ಅವನ್ನು ನಾವು ಸದಾ ನೆನಪಿನಲ್ಲಿಡಬೇಕು.

    ಇಂದಿನ ದಿನಗಳಲ್ಲಿ ಹಣವಂತರು, ಅಧಿಕಾರದಲ್ಲಿದ್ದವರು, ಪ್ರಭಾವಿಗಳು ಹೀಗೆ ಅನೇಕರು ಏನು ಮಾಡಿದರೂ ಸರಿ ಎಂಬ ಭಾವನೆ ಇರುವಂತಿದೆ. ಬಡವರು, ಅಶಕ್ತರು, ದೀನರು, ಅಬಲರು ಸಣ್ಣ ತಪ್ಪು ಮಾಡಿದರೂ ದೊಡ್ಡ ತಪ್ಪು ಮಾಡಿದ್ದಾರೆ ಎಂಬ ರೀತಿಯಲ್ಲಿ ಬಿಂಬಿತವಾಗುವುದು ಇದೆ. ಇಂತಹ ಅನೇಕ ವಿಚಾರಗಳನ್ನು ದಿನನಿತ್ಯ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಕಾಣುತ್ತಿದ್ದೇವೆ. ಧರ್ಮದಲ್ಲಿ ಇರುವವರು ಸಣ್ಣ-ತಪ್ಪು ಮಾಡಿದರೂ ಘೊರ ತಪ್ಪು ಮಾಡಿದ್ದಾರೆ ಎಂದು ಬಿಂಬಿತವಾಗುತ್ತದೆ. ಅದೇ ನಿತ್ಯ ಅಧರ್ಮವನ್ನೇ, ಅನಾಚಾರವನ್ನೇ ಮಾಡುವವರೂ ಏನೇ ಮಾಡಿದರೂ ಅದನ್ನು ಪರಿಗಣನೆ ಮಾಡುವುದಿಲ್ಲ, ಯಾಕೆಂದರೆ ಅದು ಅವರದ್ದು ಇದ್ದಿದ್ದೇ ಎಂದು ಭಾವಿಸಿ ಸುಮ್ಮನಾಗುತ್ತಾರೆ. ಆದರೆ, ಚಿಂತಿಸಬೇಕಿಲ್ಲ. ಅಧರ್ಮವು ಗೆದ್ದಿರುವುದನ್ನು ಇತಿಹಾಸದಲ್ಲಿ ಇದುವರೆಗೂ ಕಾಣಲಾರೆವು. ಇನ್ನು ಮುಂದೆಯೂ ಅಧರ್ಮವು ಗೆಲ್ಲದು. ಧರ್ಮವನ್ನು ಮತ್ತಷ್ಟು ಶಕ್ತಿಯುತವನ್ನಾಗಿಸಲು, ಪ್ರಬಲಗೊಳಿಸಲು ಅಧರ್ಮವು ಗೆದ್ದಂತೆ ಭಾಸವಾಗುವುದು. ಕಷ್ಟ, ನಷ್ಟ, ದುಃಖ-ದುಮ್ಮಾನಗಳು ಎದುರಾಗುವುದು. ಕಲ್ಲೊಂದು ಹೆಚ್ಚು ಹೆಚ್ಚು ಉಳಿ ಪೆಟ್ಟುಗಳನ್ನು ತಿಂದು ಸುಂದರ ಶಿಲ್ಪವಾಗಿ ರೂಪುಗೊಳ್ಳುವಂತೆ ಹೆಚ್ಚು-ಹೆಚ್ಚು ಕಷ್ಟ-ನಷ್ಟ ಹೊಂದಿದವರು ಕೂಡ ಒಂದಲ್ಲ ಒಂದು ದಿನ ಧರ್ವಿುಷ್ಠರಾಗಿ, ಮಹಾತ್ಮರಾಗಿ, ಪುಣ್ಯವಂತರಾಗಿ ಸುಖವಾದ ಜೀವನ ನಡೆಸುವ ಕಾಲ ಬಂದೇ ಬರುವುದು. ಅಲ್ಲಿಯವರೆಗೂ ಸಹನೆಯಿಂದ ಸತ್ಪಥದಲ್ಲಿ ಮುನ್ನಡೆಯುತ್ತಿರಬೇಕು.

    (ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts