ನವದೆಹಲಿ: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿ ಹೊಸ ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದೆ.
ಇನ್ನು ಸರ್ಕಾರ ರಚನೆ ಸರ್ಕಸ್ ದೆಹಲಿ ತಲುಪಿದ್ದು ಮುಖ್ಯಮಂತ್ರಿ ಆಯ್ಕೆ ವಿಚಾರ ಕಾಂಗ್ರೆಸ್ ಹೈ ಕಮಾಂಡಿಗೆ ಕಗ್ಗಂಟ್ಟಾಗಿ ಪರಿಣಮಿಸಿದೆ.
ಪಟ್ಟು ಸಡಿಲಿಸದ ನಾಯಕರು
ಇನ್ನು ಕಾಂಗ್ರೆಸ್ ಸರ್ಕಾರ ರಚಿಸಲಿರುವ ಬೆನ್ನಲ್ಲೇ ಮುಖ್ಯಮಂತ್ರಿ ರೇಸ್ನಲ್ಲಿ ರಾಜ್ಯ ನಾಯಕರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಮುಖವಾಗಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ.
ಇನ್ನು ಕಾಂಗ್ರೆಸ್ ಹೈಕಮಾಂಡ್ ಈ ಇಬ್ಬರು ನಾಯಕರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದು ಈ ಇಬ್ಬರು ನಾಯಕರು ತಮ್ಮ ಪಟ್ಟು ಸಡಿಲಿಸದಂತೆ ಕಾಣುತ್ತಿದ್ದಾರೆ.
ನನಗೆ ಏನೂ ಬೇಡ
ಇನ್ನು ಕಾಂಗ್ರೆಸ್ ಹೈಕಮಾಂಡ್ ಬಳಿ ಮಾತನಾಡಿರುವ ಡಿಕೆಶಿ ನನಗೆ ಮೊದಲ ಎರಡು ವರ್ಷ ಸಿಎಂ ಸ್ಥಾನ ಕೊಡುವುದಾದರೆ ಕೊಡಿ. ಇಲ್ಲವಾದರೆ ನನಗೆ ಏನೂ ಬೇಡ ಎಂದು ಗುಡುಗಿದ್ದಾರೆ.
ಶಾಸಕ ಸ್ಥಾನವೂ ಬೇಡ. ನನ್ನ ಪಾಡಿಗೆ ನಾನಿರುವೆ. ನಾನು ವ್ಯವಹಾರಸ್ಥ, ವ್ಯವಹಾರ ಮಾಡಿಕೊಂಡಿರುವೆ ಎಂದು ಹೈಕಮಾಂಡ್ ಬಳಿ ಡಿಕೆಶಿ ಖಡಕ್ ಆಗಿ ಮಾತನಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಹಿಂದುತ್ವ ಧರ್ಮವಲ್ಲ, ಬಜರಂಗದಳ ಗೂಂಡಾಗಳ ಗುಂಪು: ದಿಗ್ವಿಜಯ್ ಸಿಂಗ್
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಡಿ.ಕೆ. ಸುರೇಶ್ ನಮ್ಮಣ್ಣ ಯಾವುದೇ ಕಾರಣಕ್ಕೂ ಜಗ್ಗಲ್ಲ ಹಿಂದೇನೂ ಜಗ್ಗಿಲ್ಲ ಈಗಲೂ ಅಷ್ಟೇ ಎಂದು ತಮ್ಮ ಸಹೋದರನ ಪರ ಬ್ಯಾಟ್ ಬೀಸಿದ್ದಾರೆ.
ಪ್ರತ್ಯೇಕ ಸಭೆ
ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಖ್ಯಮಂತ್ರಿ ಆಕಾಂಕ್ಷಿಗಳ ಜೊತೆ ಪ್ರತ್ಯೇಕವಾಗಿ ಸಭೆ ನಡೆಸುವ ಮೂಲಕ ಇಬ್ಬರು ನಾಯಕರ ಮನವೊಲಿಸಲು ಯತ್ನಿಸಿದ್ದಾರೆ. ಆದರೆ, ಇವರಿಬ್ಬರು ಯಾವುದೇ ಕಾರಣಕ್ಕೂ ಜಗ್ಗುವ ಮಾತಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಸಂಜೆ 5:00 ಘಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿ.ಕೆ. ಶಿವಕುಮಾರ್ ಹಾಗಗೂ 6:00 ಘಂಟೆಗೆ ಸಿದ್ದರಾಮಯ್ಯ ಜೊತೆ ಪ್ರತ್ಯೇಕವಾಗಿ ಚರ್ಚೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.