ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ
ಯಕ್ಷಗಾನ ನಮ್ಮ ಮಣ್ಣಿನ ಕಲೆ. ಈ ಕಲೆಯಲ್ಲಿ ಹೆಸರು ಮಾಡಿದ ಅನೇಕ ಮಹನೀಯರಿದ್ದಾರೆ. ನಮ್ಮ ನಡುವೆಯೇ ಇದ್ದು ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡುತ್ತಿರುವ ಮತ್ತು ಯಕ್ಷಗಾನ ಕಲೆಯಲ್ಲಿ ತೊಡಗಿಸಿಕೊಂಡಿರುವ ಮಹನೀಯರಿಗೆ ಪ್ರಶಸ್ತಿ ನೀಡುತ್ತಿರುವುದು ಖುಷಿಯ ಸಂಗತಿ ಎಂದು ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.
ಬಸ್ರೂರು ಯಕ್ಷಮಿತ್ರರು ವತಿಯಿಂದ ಬಸ್ರೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 62ನೇ ತಾಳಮದ್ದಲೆ ಸಂದರ್ಭ ಯಕ್ಷಮಿತ್ರ- 2024 ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಭಾಕರ ಐತಾಳ ಬಸ್ರೂರು ಮತ್ತು ಶಂಕರ ಪೂಜಾರಿ ಆನಗಳ್ಳಿ ಅವರಿಗೆ ಯಕ್ಷಮಿತ್ರ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಯಕ್ಷಗಾನ ರಂಗದಲ್ಲಿ ರಜತ ಮಹೋತ್ಸವವನ್ನು ಆಚರಿಸಿಕೊಂಡ ಜನ್ಸಾಲೆ ರಾಘವೇಂದ್ರ ಆಚಾರ್ಯ ಮತ್ತು ಪ್ರಸಾದ್ ಪೂಜಾರಿ ಭಟ್ಕಳ ಅವರನ್ನು ಸನ್ಮಾನಿಸಲಾಯಿತು.
ಪ್ರಸಂಗಕರ್ತ ಬಸವರಾಜ ಶೆಟ್ಟಿಗಾರ್, ಬಸ್ರೂರು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಜಯಸೂರ್ಯ ಪೂಜಾರಿ, ಸಾಮಾಜಿಕ ಕಾರ್ಯಕರ್ತ ಕೃಷ್ಣ ಕಳಂಜಿ, ಸುರೇಶ್ ನಾಯಕ್, ಮಂಜು ಮೆಂಡನ್ ಉಪಸ್ಥಿತರಿದ್ದರು.
ದಿವಾಕರ ಶೆಟ್ಟಿ ಸ್ವಾಗತಿಸಿ, ವಿಭಾ ಬಸ್ರೂರು ಕಾರ್ಯಕ್ರಮ ನಿರೂಪಿಸಿದರು. ರವೀಂದ್ರ ಜಿ., ಸುಧಾಕರ ಆಚಾರ್, ಅಶೋಕ್ ಬಿ.ಕೆ. ಸಹಕರಿಸಿದರು. ಅಶೋಕ್ ಕೆರೆಕಟ್ಟೆ ವಂದಿಸಿದರು. ಅಗಲಿದ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.