ಹನಗೋಡು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾರ್ವಜನಿಕರಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸೂರಿಲ್ಲದ ನಿರ್ಗತಿಕರಿಗೆ ಮನೆ ನಿರ್ಮಿಸಿಕೊಡುವ ವಾತ್ಸಲ್ಯ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ ತಿಳಿಸಿದರು.
ಹನಗೋಡು ಹೋಬಳಿಯ ಹೊಸಕೋಟೆ ಗ್ರಾಮದ ವೃದ್ಧೆ ಸಿದ್ದಮ್ಮ ಅವರಿಗೆ ಧರ್ಮಸ್ಥಳ ವಾತ್ಸಲ್ಯ ಯೋಜನೆಯಡಿಯಲ್ಲಿ ನಿರ್ಮಿಸಿರುವ ಮನೆಯನ್ನು ಬಧವಾರ ಹಸ್ತಾಂತರ ಮಾಡಿ ಮಾತನಾಡಿದರು. ಸಮಾಜದಲ್ಲಿ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಅದೆಷ್ಟೋ ಕುಟುಂಬಗಳ ವೃದ್ಧರು, ವಿಧವೆಯರು, ಅಂಗವಿಕಲರು, ರೋಗಿಗಳು ಹಾಗೂ ಬಡವರ ಪಾಲಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶಾಕಿರಣವಾಗಿದೆ. ವಾತ್ಸಲ್ಯ ಯೋಜನೆಯಡಿ ಪ್ರತಿ ಗ್ರಾಮದಲ್ಲಿ ಸಮೀಕ್ಷೆ ನಡೆಸಿ ಅಲ್ಲಿರುವ ಅಸಹಾಯಕರನ್ನು ಗುರುತಿಸಿ ಅಂತಹವರಿಗೆ ಸಂಘದಿಂದ ಆಹಾರದ ಕಿಟ್, ಚಾಪೆ, ದಿಂಬು, ಬೆಡ್ಶೀಟ್, ಪಾತ್ರೆ ಒಳಗೊಂಡ ವಾತ್ಸಲ್ಯ ಕಿಟ್ ಅನ್ನು ವರ್ಷದಲ್ಲಿ ಎರಡು ಸಲ ವಿತರಿಸಲಾಗುತ್ತದೆ. ಅವರ ಯೋಗಕ್ಷೇಮ ವಿಚಾರಿಸಲು ಪೋಷಕರನ್ನು ಆಯ್ಕೆ ಮಾಡಿ ಜವಾಬ್ದಾರಿ ನೀಡುವ ಜತೆಗೆ, ಅಗತ್ಯವಿರುವವರಿಗೆ ಹೊಸದಾಗಿ ಮನೆ ನಿರ್ಮಾಣ, ಮನೆ ದುರಸ್ತಿ, ಶೌಚಗೃಹ, ಸ್ನಾನಗೃಹ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡಲಾಗುತ್ತದೆ. ಈ ಭಾಗದಲ್ಲಿ 4 ವಾತ್ಸಲ್ಯ ಮನೆಗಳ ನಿರ್ಮಾಣ ಸೇರಿದಂತೆ ಹಲವು ಮನೆಗಳ ದುರಸ್ತಿ, ಶೌಚಗೃಹ, ಸ್ನಾನಗೃಹಗಳ ನಿರ್ಮಾಣಕ್ಕೆ ಸಹಾಯಹಸ್ತ ನೀಡಲಾಗಿದೆ ಎಂದು ತಿಳಿಸಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ಮುರಳೀಧರ್ ಮಾತನಾಡಿ, ಜಿಲ್ಲೆಯಲ್ಲಿ ಹಲವು ಕುಟುಂಬಗಳಿಗೆ ಪ್ರತಿ ತಿಂಗಳು ಮಾಸಾಶನ ವಿತರಣೆ ಶಿಕ್ಷಣದಿಂದ ವಂಚಿತರಾಗಿರುವ ಬಡ ಕುಟುಂಬಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ, ವೃದ್ಧಾಪ್ಯ ವೇತನ, ಅಂಗವಿಕಲರಿಗೆ ಸೌಲಭ್ಯ, ಆಯುಷ್ಮಾನ್ ಕಾರ್ಡ್, ಆರೋಗ್ಯ ಕಾರ್ಡ್ ಸೇರಿ ಸರ್ಕಾರದ ಇತರ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿ ನಾರಾಯಣಶೆಟ್ಟಿ, ಜಿಲ್ಲಾ ಜನಜಾಗೃತಿ ಸದಸ್ಯ ದಾ.ರಾ. ಮಹೇಶ್, ಪ್ರಾದೇಶಿಕ ವಿಭಾಗದ ಜ್ಞಾನ ವಿಕಾಸ ಯೋಜನಾಧಿಕಾರಿ ಮೂಕಾಂಬಿಕಾ, ಜ್ಞಾನ ವಿಕಾಸ ಸಮನ್ವಯಧಿಕಾರಿ ರೂಪಾ, ಮೇಲ್ವಿಚಾರಕಿ ಶೋಭಾ, ಗ್ರಾಮದ ಯಜಮಾನರಾದ ಮಂಜುನಾಥ್, ರುದ್ರಯ್ಯ ಇತರರು ಇದ್ದರು.