ಬೆಂಗಳೂರು: ಖಾಸಗಿ ಸಂಸ್ಥೆಗಳಿಗೆ ಪ್ರಚಾರ ನೀಡಿ ಅಳವಡಿಸಲಾಗಿದ್ದ ಕರೊನಾ ಜಾಗೃತಿ ಫಲಕಗಳನ್ನು ತೆರವುಗೊಳಿಸಿರುವ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಪ್ರಕರಣವೇನು?
ಕೋವಿಡ್ ಜಾಗೃತಿಗಾಗಿ ನಿಗದಿತ ಪ್ರದೇಶಗಳಲ್ಲಿ ಹೋರ್ಡಿಂಗ್ಸ್ ಅಳವಡಿಸಲು ಅನುಮತಿ ಕೋರಿ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಜು.15ರಂದು ಪುರಸ್ಕರಿಸಿದ್ದ ಹೈಕೋರ್ಟ್, ಜಾಹೀರಾತು ಫಲಕಗಳಲ್ಲಿ ಪ್ಲಾಸ್ಟಿಕ್ ಬಳಸಬಾರದು. ಸೋಂಕು ನಿಯಂತ್ರಣ ಕ್ರಮಗಳ ಬಗ್ಗೆಯಷ್ಟೇ ಜಾಹೀರಾತು ನೀಡಬೇಕು. ಯಾವುದೇ ಪ್ರಾಯೋಜಕರ, ಖಾಸಗಿ ಉತ್ಪನ್ನ, ಸೇವೆಗಳ ಕುರಿತ ವಿವರ ಪ್ರದರ್ಶಿಸಬಾರದು ಎಂದು ಷರತ್ತು ವಿಧಿಸಿತ್ತು. ಆದರೆ, ಸರ್ಕಾರ ಅಳವಡಿಸಿರುವ ಕೋವಿಡ್ ಜಾಗೃತಿ ಜಾಹೀರಾತುಗಳಲ್ಲಿ ಖಾಸಗಿ ಸಂಸ್ಥೆಗಳ ಜಾಹೀರಾತು ಪ್ರದರ್ಶಿಸಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಸೆ.25ರಂದು ಹೈಕೋರ್ಟ್ ಅನುಮತಿ ಹಿಂಪಡೆದಿತ್ತು.
ಕೋವಿಡ್ ಜಾಗೃತಿ ಜಾಹೀರಾತು ಫಲಕ ಅಳವಡಿಸಲು ಅನುಮತಿ ನೀಡುವ ವೇಳೆ ಹೈಕೋರ್ಟ್ ವಿಧಿಸಿದ್ದ ಷರತ್ತುಗಳನ್ನು ಸರ್ಕಾರ ಉಲ್ಲಂಘಿಸಿದೆ ಎಂದು ಆರೋಪಿಸಿ ವಕೀಲ ಜಿ.ಆರ್. ಮೋಹನ್ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ಸಿಜೆ ಎ.ಎಸ್.ಓಕ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿತು.
ಖಾಸಗಿ ಜಾಹೀರಾತು ಅಳವಡಿಸಿದ ಕಾರಣ ಕರೊನಾ ಜಾಗೃತಿಗಾಗಿ ಹೋರ್ಡಿಂಗ್ಸ್ ಅಳವಡಿಸಲು ನೀಡಿದ್ದ ಅನುಮತಿ ಹಿಂಪಡೆದಿದ್ದ ಹೈಕೋರ್ಟ್, ಖಾಸಗಿ ಜಾಹೀರಾತುಗಳಿದ್ದ ಫಲಕಗಳನ್ನು ಶೀಘ್ರ ತೆರವುಗೊಳಿಸುವಂತೆ ನಿರ್ದೇಶಿಸಿತ್ತು. ಮಂಗಳವಾರದ ವಿಚಾರಣೆ ವೇಳೆ, ಈವರೆಗೆ ಎಷ್ಟು ಫಲಕಗಳನ್ನು ತೆರವುಗೊಳಿಸಲಾಗಿದೆ, ಇನ್ನೂ ಎಷ್ಟು ತೆರವುಗೊಳಿಸಬೇಕಿದೆ ಎಂಬ ವಿವರಗಳನ್ನೊಳಗೊಂಡ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.
ಇದನ್ನೂ ಓದಿ: “ಖುರಾನ್ ಮಾತ್ರ ಸರ್ಕಾರಿ ವೆಚ್ಚದಲ್ಲಿ ಕಲಿಸಲಾಗದು, ಮದರಸಾ ಮತ್ತು ಸಂಸ್ಕೃತ ಸ್ಕೂಲ್ಗಳನ್ನೂ ಮುಚ್ತೇವೆ”
ಬಿಬಿಎಂಪಿ ಪರ ವಕೀಲರು, ನಗರ ವ್ಯಾಪ್ತಿಯಲ್ಲಿ ಜಾಹೀರಾತು ಫಲಕ ಪ್ರದರ್ಶಿಸಿದ ಸಂಬಂಧ ಪಾಲಿಕೆಗೆ ಒಟ್ಟು 18,04,638 ರೂ. ತೆರಿಗೆ ಬರಬೇಕಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ: ವೃಷಭಾವತಿ ನದಿ ಪುನಶ್ಚೇತನ ಸರ್ಕಾರದ ಹೊಣೆ|ನೀರಿ ಸಂಸ್ಥೆ ನೇಮಕಕ್ಕೆ ಹೈಕೋರ್ಟ್ ಇಂಗಿತ
ತೆರಿಗೆ ಹಣವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಿ ಬಿಬಿಎಂಪಿಗೆ ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದ ಪೀಠ, ಜಾಹೀರಾತು ಫಲಕ ತೆರವುಗೊಳಿಸಿರುವ ಬಗ್ಗೆ ಸತ್ಯಾಸತ್ಯತೆ ಪರಿಶೀಲನೆ ನಡೆಸಿ ನ.2ಕ್ಕೆ ವರದಿ ಸಲ್ಲಿಸುವಂತೆ ಪಾಲಿಕೆಗೆ ಸೂಚಿಸಿ ನ.3ಕ್ಕೆ ವಿಚಾರಣೆ ಮುಂದೂಡಿತು.
17ರಂದು ಬಿಕಾಂ ಅಂತಿಮ ಸೆಮಿಸ್ಟರ್ ಪರೀಕ್ಷೆ : ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದಾಗಿದ್ದ ಪರೀಕ್ಷೆ