ಬೆಳಗಾವಿ: ಹಲಾಲ್ ಪ್ರಮಾಣಪತ್ರ ನೀಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ರದ್ದು ಮಾಡಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಕಾರಿ ಕಚೇರಿ ಎದುರು ಶುಕ್ರವಾರ ಹಿಂದು ಜನ ಜಾಗೃತಿ ಸಮಿತಿ ಕಾರ್ಯಕರ್ತರು ಪ್ರತಿಭಟಿಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ಹಲಾಲ್ ಉತ್ಪನ್ನಗಳಿಂದ ಭಾರತ ಅರ್ಥ ವ್ಯವಸ್ಥೆ ಹಾಳಾಗುತ್ತಿದೆ. ಹಲಾಲ್ ಮತ್ತು ನಾನ್ ಹಲಾಲ್ ಎಂದು ವರ್ಗೀಕರಣ ಮಾಡಿ ಪೂರೈಕೆಯಾಗಬೇಕು. ಈ ಹಲಾಲ್ ಕಡ್ಡಾಯ ಎಂಬುದನ್ನು ಸರ್ಕಾರ ರದ್ದುಪಡಿಸಬೇಕು. ಹಲಾಲ್ ಎಂದು ಪ್ರಮಾಣೀಕೃತಗೊಂಡಿರುವ ಉತ್ಪನ್ನಗಳನ್ನು ಜನರು ಖರಿದಿಸದೆ ಅಂಥ ಉತ್ಪನ್ನಗಳನ್ನು ಬಹಿಷ್ಕರಿಸಬೇಕು. ಕೇಂದ್ರ ಸರ್ಕಾರ ಸಂಪೂರ್ಣವಾಗಿ ನಿಷೇಸಬೇಕು ಎಂದು ಆಗ್ರಹಿಸಿದರು.
ಭಾರತದಲ್ಲಿ ಹಿಂದು ಕಂಪನಿಗಳೂ ಸಹ ಹಲಾಲ್ ಸರ್ಟಿಫಿಕೇಟ್ ತೆಗೆದುಕೊಳ್ಳಬಾರದು. ಹಲಾಲ್, ಜಿಹಾದ್ ತಲೆದೋರದಂತೆ ನಾವು ನೋಡಿಕೊಳ್ಳಬೇಕಿದೆ. ಈ ವರ್ಷ ಹಲಾಲ್ ಮುಕ್ತ ದೀಪಾವಳಿ ಆಚರಿಸಲು ನಾವು ಕರೆ ನೀಡುತ್ತಿದ್ದು, ದೀಪಾವಳಿ ಆಚರಿಸುವ ಯಾವುದೇ ಹಿಂದೂ ಸಹ ಹಲಾಲ್ ಪ್ರಮಾಣಪತ್ರವಿರುವ ಯಾವ ವಸ್ತುವನ್ನು ದೀಪಾವಳಿಯಲ್ಲಿ ಬಳಸಬಾರದು ಎಂದು ವಿನಂತಿಸಿದರು.
ಹಲಾಲ್ ಉತ್ಪನ್ನಗಳ ಮಾರಾಟದಿಂದ ದೇಶದಲ್ಲಿ ಸಾವಿರಾರು ಕೋಟಿ ರೂ. ವಹಿವಾಟು ನಡೆಯುತ್ತಿದೆ. ಹಿಂದು ವ್ಯಾಪಾರಿಗಳು ವಹಿವಾಟು ನಡೆಸಿದ್ದಾರೆ. ಹಲಾಲ್ ಉತ್ಪನ್ನಗಳ ಮಾರಾಟದ ಮೂಲಕ ಸಂಗ್ರಹಿಸಲಾಗುವ ಕೋಟ್ಯಂತರ ರೂ.ಗಳನ್ನು ಕೆಲ ರಾಷ್ಟ್ರಗಳು ಉಗ್ರವಾದಕ್ಕೆ ಬಳಸುತ್ತಿವೆ. ಬಹುಸಂಖ್ಯಾತ ಸಮಾಜದ ಮೇಲೆ ಹಲಾಲ್ ಸಹಿತ ವ್ಯವಸ್ಥೆ ಹೇರುವುದು ಸರಿಯಲ್ಲ. ಇದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
ಹಿಂದು ಜನಜಾಗೃತಿ ಸಮಿತಿಯ ಋಷಿಕೇಶ ಗುಜ್ಜರ, ಮಾರುತಿ ಸುತಾರ, ರವಿ ಕೋಕಿತ್ಕರ, ಮಿಲನ್ ಪವಾರ, ವಿಜಯ ನಂದಗಡಕರ, ಅಕ್ಕಾತಾಯಿ ಸುತಾರ, ರವಿ ಕಾರಲಿಂಗ ಇತರರಿದ್ದರು.