ರಾಯಚೂರು: ಆರ್ಥಿಕ ದುರ್ಬಲ ವರ್ಗದವರಿಗೆ ನೀಡಲಾಗುತ್ತಿರುವ ಶೇ.10 ಮೀಸಲಾತಿ ಪಡೆಯಲು ಅಗತ್ಯವಿರುವ ಇಡಬ್ಲುೃಎಸ್ ಪ್ರಮಾಣ ಪತ್ರ ನೀಡಲು ಕ್ರಮಕೈಗೊಳ್ಳುವಂತೆ ಬ್ರಾಹ್ಮಣ ಆರ್ಗನೈಜೇಷನ್ ಆಫ್ ಇಂಡಿಯಾ ಒತ್ತಾಯಿಸಿದೆ.
ಸಂಘಟನೆ ನಿಯೋಗ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಗುರುವಾರ ಮನವಿ ಸಲ್ಲಿಸಿ, ಕೇಂದ್ರ ಸರ್ಕಾರ ಆರ್ಥಿಕ ದುರ್ಬಲವರ್ಗದವರಿಗೆ ಶೇ.10 ಮೀಸಲಾತಿ ಜಾರಿಗೊಳಿಸಿದ್ದರೂ ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸಲು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ದೂರಿದರು.
ಆರ್ಥಿಕ ದುರ್ಬಲರಿಗೂ ಮೀಸಲಾತಿ ಸೌಲಭ್ಯ ದೊರೆತು ಮುಖ್ಯವಾಹಿನಿಗೆ ಬರಬೇಕು ಎನ್ನುವ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಶಿಕ್ಷಣ, ಉದ್ಯೋಗದಲ್ಲಿ ಶೇ.10 ಮೀಸಲಾತಿ ಘೋಷಣೆ ಮಾಡಿದ್ದಾರೆ. ಇದರಿಂದ ಹಲವು ಸಮುದಾಯಗಳ ಆರ್ಥಿಕ ದುರ್ಬಲರಿಗೆ ಅನುಕೂಲವಾಗಲಿದೆ. ಆದರೆ ರಾಜ್ಯ ಸರ್ಕಾರ ಮೀಸಲಾತಿ ಸೌಲಭ್ಯ ಜಾರಿಗೊಳಿಸದೆ ವಿಳಂಬ ಧೋರಣೆ ಅನುಸರಿಸುತ್ತಿದೆ. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳದಿದ್ದರೆ ಮುಂಬರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ನಿಯೋಗದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಹನುಮೇಶ ಮಾನ್ವಿಕರ್, ಪದಾಧಿಕಾರಿಗಳಾದ ಸುರೇಶ, ಆನಂದ ಕುಲಕರ್ಣಿ, ಸೇತುಮಾಧವ್, ಉದಯ, ವೀರೇಂದ್ರ, ಎಂ.ಎಂ.ಜೋಷಿ, ನಾರಾಯಣ, ವಿ.ಕೆ.ಆನಂದ ಇದ್ದರು.