ಕೊಳ್ಳೇಗಾಲ: ಮೇಲಿಂದ ಮೇಲೆ ಕೆಮ್ಮುತ್ತಿದ್ದವನನ್ನು ನೋಡಿದವರು ನಿನಗೆ ಕರೊನಾ ಬಂದಿದೆಯಾ? ಎಂದು ಪ್ರಶ್ನೆ ಮಾಡಿದರು..ಅದಕ್ಕೆ ಹೌದು ನನಗೂ ಬಂದಿದೆ, ನಮ್ಮಣ್ಣನಿಗೂ ಬಂದಿದೆ ಎಂದು ಕೆಮ್ಮುತ್ತಿದ್ದ ವ್ಯಕ್ತಿ ತಮಾಷೆಯ ಉತ್ತರ ಕೊಟ್ಟ..ಇದನ್ನು ಅಕ್ಕ-ಪಕ್ಕದಲ್ಲಿದ್ದವರು ಕೇಳಿಕೊಂಡಿದ್ದೇ ತಡ ಅಲ್ಲಿನ ಇಡೀ ವಾತಾವರಣವೇ ಬದಲಾಯಿತು..!
ಚಾಮರಾಜನಗರ ಜಿಲ್ಲೆಯ ಮುಡಿಗುಂಡದಲ್ಲಿರುವ ಸರ್ಕಾರಿ ರೇಷ್ಮೆ ಮಾರುಕಟ್ಟೆಗೆ ಕನಕಪುರದ ಅಚ್ಚಲು ಗ್ರಾಮದಿಂದ ಗೂಡು ತಂದಿದ್ದ ರೈತ ಕರೊನಾ ವಿಚಾರದಲ್ಲಿ ತಮಾಷೆ ಮಾಡಿದ್ದ. ಇದನ್ನು ಕೇಳಿಸಿಕೊಂಡ ಇಲ್ಲಿನ ರೀಲರ್ಸ್ಗಳು ತಕ್ಷಣ ಅಧಿಕಾರಿಗಳ ಗಮನಕ್ಕೆ ತಂದರು. ಕರೊನಾ ಇದೆ ಎಂದಿದ್ದ ರೈತನನ್ನು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಿದರು. ಕನಕಪುರದ ವೈದ್ಯಾಧಿಕಾರಿಗಳಿಗೂ ಕರೆ ಮಾಡಿ ಆತನ ಬಗ್ಗೆ ವಿಚಾರಿಸಿದರು.
ಇದನ್ನೂ ಓದಿ; ಜ್ವರ, ಕೆಮ್ಮು ಮಾತ್ರವಲ್ಲ, ಇವು ಕೂಡ ಕರೊನಾ ಲಕ್ಷಣಗಳು…! ಪರೀಕ್ಷಿಸಿಕೊಳ್ಳಿ…
ಸ್ಥಳಕ್ಕೆ ತಹಸೀಲ್ದಾರ್ ಕುನಾಲ್ ಆಗಮಿಸಿ ವಿಚಾರಣೆ ನಡೆಸಿದಾಗ ರೈತ ತಮಾಷೆಗೆ ಈ ರೀತಿ ಮಾತನಾಡಿರುವುದು ತಿಳಿದು ಬಂದ ನಂತರ ಆತನನ್ನು ವಾಪಸ್ ಊರಿಗೆ ಕಳುಹಿಸಿದ್ದಾರೆ. ರೈತ ಮತ್ತು ಆತನ ಕಡೆಯವರು ತಂದಿದ್ದ ರೇಷ್ಮೆ ಗೂಡನನ್ನು ಒಂದೆಡೆ ಪ್ರತ್ಯೇಕವಾಗಿ ಇಡಲಾಗಿದೆ.
ರೈತ ಕರೊನಾ ಬಂದಿರುವ ಬಗ್ಗೆ ತಾನೇ ಹೇಳಿಕೊಂಡಿದ್ದ. ಆತನನ್ನು ಅಧಿಕಾರಿಗಳು ಎಲ್ಲಿಗೆ ಕಳುಹಿಸಿದರು ಎಂದು ತಿಳಿದುಬಂದಿಲ್ಲ. ಅವನು ಮಾರಾಟ ಮಾಡಲು ತಂದಿದ್ದ ಗೂಡನ್ನು ಒಂದೆಡೆ ಇಡಲಾಗಿದೆ ಎಂದು ಭೀತಿಗೊಳಗಾಗಿರುವ ರೀಲರ್ಸ್ಗಳು ಮಾರುಕಟ್ಟೆ ಆವರಣದಲ್ಲಿ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಮಾರುಕಟ್ಟೆಯಲ್ಲಿ ಕರೊನಾತಂಕ ಆವರಿಸಿರೋದಂತೂ ಸತ್ಯ.