ಮಂಡ್ಯ: ನಮ್ಮ ಆಹಾರ ಪದ್ಧತಿಯಲ್ಲಿ ದೊಡ್ಡ ಮಟ್ಟದ ಬದಲಾವಣೆಯಾಗಿರುವುದು ಹೃದಯ ಕಾಯಿಲೆಗೆ ಆಹ್ವಾನ ನೀಡಿದಂತಾಗಿದೆ. ಬೇಕರಿ ತಿನಿಸುಗಳನ್ನು ತ್ಯಜಿಸಿ, ಹಣ್ಣು ತರಕಾರಿ, ರಾಗಿ ಹಾಗೂ ಸಿರಿಧಾನ್ಯಗಳ ಬಳಕೆಗೆ ಒತ್ತು ನೀಡಬೇಕು. ಪಾಲಿಸ್ ಅಕ್ಕಿಯನ್ನು ಬಿಟ್ಟು ತೌಡಿನಾಂಶವಿರುವ ಅಕ್ಕಿ ಬಳಕೆ ಮಾಡಬೇಕು ಎಂದು ಮೈಸೂರು ನಾರಾಯಣ ಹೃದಯಾಲಯದ ತಜ್ಞ ವೈದ್ಯ ಡಾ.ಆನಂದ್ ಲಿಂಗನ್ ಸಲಹೆ ನೀಡಿದರು.
ವಿಶ್ವ ಹೃದ್ರೋಗ ದಿನಾಚರಣೆ ಅಂಗವಾಗಿ ನಗರದ ಪ್ರೆಸ್ಕ್ಲಬ್ನಲ್ಲಿ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಬದಲಾದ ಮನುಷ್ಯನ ಜೀವನ ಶೈಲಿ, ಕಡಿಮೆ ದೈಹಿಕ ಶ್ರಮ ಹಾಗೂ ಅಶುದ್ಧ ಆಹಾರ ಪದಾರ್ಥಗಳ ಬಳಕೆಯಿಂದ ಹೃದಯ ಸಮಸ್ಯೆಗಳು ಹೆಚ್ಚಳವಾಗಿದೆ. ನವಜಾತ ಶಿಶುವಿನಿಂದ ಹಿಡಿದು ವಯೋವೃದ್ದರವರೆಗಿನ ಎಲ್ಲ ವಯಸ್ಕರಿಗೂ ಹೃದಯ ಕಾಯಿಲೆಯ ಸಂಭವವಿದೆ. ಆದ್ದರಿಂದ ಈ ಬಗ್ಗೆ ಜಾಗೃತಿ ವಹಿಸುವುದು ಅತ್ಯಗತ್ಯ ಎಂದರು.
ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಹೆಚ್ಚಳ, ರಕ್ತ ಕಾಯಿಲೆಯ ಉಲ್ಬಣ, ಧೂಮಪಾನ, ಅಗತ್ಯಕ್ಕಿಂತ ಹೆಚ್ಚು ತೂಕ ಹಾಗೂ ಅಶುದ್ಧ ಆಹಾರ ಸೇವನೆಯಿಂದ ಹೃದಯ ಕಾಯಿಲೆಯ ಪ್ರಮಾಣ ಹೆಚ್ಚಳವಾಗುತ್ತಿದೆ. ಸೂಕ್ತ ಚಿಕಿತ್ಸೆ ಹಾಗೂ ಪ್ರತಿನಿತ್ಯ ವ್ಯಾಯಾಮ ಮಾಡುವ ಹವ್ಯಾಸ ರೂಢಿಸಿಕೊಳ್ಳಬೇಕು. ಹೃದಯ ಕಾಯಿಲೆಯು ಮಹಿಳೆಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರನ್ನು ಕಾಡುತ್ತಿದೆ. ಆದ್ದರಿಂದ ಜೀವನ ಕ್ರಮಗಳು ಬದಲಾವಣೆಯಾಗಬೇಕು. ಮದ್ಯಪಾನ ಹಾಗೂ ಧೂಮಪಾನವನ್ನು ತ್ಯಜಿಸಿ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಪ್ರತಿನಿತ್ಯ ಕನಿಷ್ಟ 30 ನಿಮಿಷ ವಾಕಿಂಗ್, ಪ್ರಾಣಾಯಾಮ ರೂಢಿಸಿಕೊಳ್ಳಬೇಕು ಎಂದರು.
29ರಂದು ವಾಕಥಾನ್: ಪ್ರತಿ ವರ್ಷ ಸೆ.29ರಂದು ಹೃದಯದ ದಿನ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ನಾರಾಯಣ ಹೃದಯಾಲಯದ ಸಹಯೋಗದಲ್ಲಿ ಮೈಸೂರಿನಲ್ಲಿ ‘ವಾಕಥಾನ್’ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 7 ಗಂಟೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರಂಭವಾಗಲಿದೆ ಎಂದು ಹೇಳಿದರು.
ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಆದರ್ಶ ಇದ್ದರು.