ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಬಿಸಿಲ ಬೇಗೆ ಹೆಚ್ಚುತ್ತಿರುವ ಮಧ್ಯೆ ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚಾಗತೊಡಗಿದೆ. ಬಿಸಿಲ ದಾಹದಿಂದ ಪಾರಾಗಲು ಬಹುತೇಕ ಜನರು ಸೀಯಾಳವನ್ನು ಆಶ್ರಯಿಸುತ್ತಿದ್ದರೂ, ಸೀಯಾಳ ಮಾರುಕಟ್ಟೆಯಲ್ಲಿ ಲಭ್ಯವಾಗದ ಸ್ಥಿತಿಯಿದೆ. 35ರಿಂದ 45ರ ಅಂಚಿನಲ್ಲಿದ್ದ ಸೀಯಾಳದ ಬೆಲೆ ಇಂದು 60ರಿಂದ 70ರೂ.ವರೆಗೂ ತಲುಪಿದೆ. ತಮಿಳುನಾಡು, ಮಂಡ್ಯದಿಂದ ಕಾಸರಗೋಡು ಜಿಲ್ಲೆಗೆ ಹೆಚ್ಚಾಗಿ ಸೀಯಾಳ ಆಗಮಿಸುತ್ತಿದ್ದು, ಎರಡು ವಾರಗಳಿಂದ ಪೂರೈಕೆ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಧಾರಣೆಯೂ ಗಣನೀಯವಾಗಿ ಏರಿಕೆಯಾಗಿದೆ. ಸಣ್ಣ ಗಾತ್ರದ ಸೀಯಾಳವಷ್ಟೆ ಇಂದು ಮಾರುಕಟ್ಟೆಗೆ ತಲುಪುತ್ತಿದ್ದರೂ, ಬಿಸಿಲಿನ ಪ್ರಖರತೆ ಏರುತ್ತಿದ್ದಂತೆ ಮಾರುಕಟ್ಟೆಗೆ ಪೂರೈಕೆಯಾಗುತ್ತಿರುವ ಸೀಯಾಳದ ಪ್ರ ಮಾಣವೂ ಗಣನೀಯವಾಗಿ ಕುಸಿದಿದೆ.
60ರಿಂದ 70 ರೂ.ವರೆಗೂ ವಸೂಲಿ
ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ತಕ್ಕಷ್ಟು ಸೀಯಾಳ ಮಾರುಕಟ್ಟೆಗೆ ಪೂರೈಸಲಾಗದ ಸ್ಥಿತಿಯಿದೆ. ಇನ್ನೊಂದೆಡೆ ಒಣ ತೆಂಗಿನಕಾಯಿ, ಕೊಬ್ಬರಿ ಬೆಲೆಯೂ ಭಾರಿ ಪ್ರ ಮಾಣದಲ್ಲಿ ಏರಿಕೆಯಾಗಿದೆ. ಹಸಿ ತೆಂಗಿನಕಾಯಿಗೆ ಕಿಲೋ ಒಂದಕ್ಕೆ 60ರೂ. ವರೆಗೂ ವಸೂಲಿ ಮಾಡಲಾಗುತ್ತದೆ. ಸಣ್ಣ ಗಾತ್ರದ ಸೀಯಾಳಕ್ಕೂ ವ್ಯಾಪಾರಿಗಳು 60ರಿಂದ 70 ರೂ.ವರೆಗೂ ವಸೂಲಿ ಮಾಡುತ್ತಿದ್ದು, ಸೀಯಾಳ ಗ್ರಾಹಕರ ಕೈಸುಡುತ್ತಿದೆ.
ಮುಂಬೈಯತ್ತ ಲಾರಿಗಳು!
ತಮಿಳುನಾಡು ಮತ್ತು ಮಂಡ್ಯದಿಂದ ಕಾಸರಗೋಡಿಗೆ ಸೀಯಾಳ ಪೂರೈಕೆಯಾಗುತ್ತಿದ್ದು, ಬಿಸಿಲಿನ ಬೇಗೆ ಹೆಚ್ಚುತ್ತಿದ್ದಂತೆ ಅಲ್ಲಿನ ಬೇಡಿಕೆ ಪೂರೈಸಲೂ ಸಾಧ್ಯವಾಗದಿರುವುದರಿಂದ ಜಿಲ್ಲೆಗೆ ಪೂರೈಕೆ ಕಡಿಮೆಯಾಗಿದೆ. ಇನ್ನೊಂದೆಡೆ ಮುಂಬೈಯಂತಹ ಮಹಾನಗರದಲ್ಲಿ ಸೀಯಾಳಕ್ಕೆ ಭಾರಿ ಬೇಡಿಕೆಯಿದ್ದು, ಅಲ್ಲಿ 70ರಿಂದ 80ರೂ. ವರೆಗೂ ಬಿಕರಿಯಾಗುತ್ತಿರುವುದರಿಂದ ಏಜೆಂಟ್ಗಳು ಸೀಯಾಳ ಲಾರಿಗಳನ್ನು ಮುಂಬೈಯತ್ತ ಕಳುಹಿಸಿಕೊಡುತ್ತಿದ್ದಾರೆ ಎನ್ನಲಾಗಿದೆ.
ಎರಡು ವಾರಗಳಿಂದ ಸೀಯಾಳ ಮಾರುಕಟ್ಟೆಗೆ ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಜನರ ಬಳಕೆ ಜತೆಗೆ ದೈವ, ದೇವರ ಪೂಜಾದಿ ಕಾರ್ಯಕ್ರಮಗಳಿಗೂ ಸೀಯಾಳ ಬೇಕಾಗಿರುವುದರಿಂದ ಹೆಚ್ಚಿನ ಬೇಡಿಕೆಯಿದ್ದರೂ, ಪೂರೈಕೆಯಾಗದಿರುವುದರಿಂದ ಸಮಸ್ಯೆ ಎದುರಾಗಿದೆ. ಸಣ್ಣ ಗಾತ್ರದ ಸೀಯಾಳಕ್ಕೂ 50ರಿಂದ 60ರೂ. ದರದಲ್ಲಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.
ಗಣೇಶ್ ಸೀಯಾಳ ವ್ಯಾಪಾರಿ ಪೆರ್ಲ
ಹಣಕಾಸು ಸಾಕ್ಷರತೆ ಭವಿಷ್ಯಕ್ಕೆ ದಾರಿ : ವಿವಿಯಲ್ಲಿ ಪ್ರೊ.ಪ್ರಶಾಂತ ನಾಯಕ್ ಅಭಿಮತ
https://www.vijayavani.net/farewell-ceremony-for-hajj-pilgrims