ಚೆನ್ನೈ: ಮಿಚೌಂಗ್ ಚಂಡಮಾರುತ ಅಬ್ಬರದ ಪರಿಣಾಮ ಪ್ರವಾಹದಲ್ಲಿ ಸಿಲುಕಿದ್ದ ರಕ್ಷಣೆಗಾಗಿ ಎದುರು ನೋಡುತ್ತಿದ್ದ ಬಾಲಿವುಡ್ ನಟ ಆಮೀರ್ ಖಾನ್ ಮತ್ತು ಕಾಲಿವುಡ್ನ ವಿಷ್ಣು ವಿಶಾಲ್ ಅವರನ್ನು ಸುಮಾರು 24 ಗಂಟೆಗಳ ಬಳಿಕ ಅಗ್ನಿಶಾಮಕ ಸಿಬ್ಬಂದಿ ಮತ್ತು ರಕ್ಷಣಾ ತಂಡಗಳು ಡಿ.5ರಂದು ರಕ್ಷಣೆ ಮಾಡಿದವು. ಇದಾದ ಬಳಿಕ ಅವರ ಸಹಾಯಕ್ಕೆ ನೆರವಾಗಿದ್ದು ನಟ ಅಜಿತ್ ಕುಮಾರ್ ಎಂಬುದು ತಿಳಿದುಬಂದಿದೆ.
ಪ್ರವಾಹದಿಂದ ರಕ್ಷಣೆಯಾದ ಬಳಿಕ ಆಮೀರ್ ಮತ್ತು ವಿಶಾಲ್ ಸೇರಿದಂತೆ ಆ ಪ್ರದೇಶದಲ್ಲಿ ವಾಸವಿದ್ದ ಎಲ್ಲರಿಗೂ ನಟ ಅಜಿತ್ ಪ್ರಯಾಣದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ವಿಶಾಲ್ ಅವರೇ ಎಕ್ಸ್ ಖಾತೆಯ ಮೂಲಕ ತಿಳಿಸಿದ್ದಾರೆ.
ಆಮೀರ್ ಖಾನ್ ಅವರು ಕರ್ಪಕ್ಕಮ್ ಏರಿಯಾದಲ್ಲಿರುವ ವಿಶಾಲ್ ಮನೆಯಲ್ಲೇ ತಂಗಿದ್ದರು. ಮಿಚೌಂಗ್ ಚಂಡಮಾರುತ ಹಿನ್ನೆಲೆಯಲ್ಲಿ ಮನೆಯ ಸುತ್ತಲು ಜಲಾವೃತಗೊಂಡಿದ್ದರಿಂದ ಪ್ರವಾದಲ್ಲಿ ಸಿಲುಕಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ವಿಶಾಲ್ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಕರ್ಪಕ್ಕಮ್ನ ತಮ್ಮ ನಿವಾಸದ ಸುತ್ತಮುತ್ತಲಿನ ಏರಿಯಾ ನೀರಿನಿಂದ ಆವೃತವಾಗಿರುವುದನ್ನು ನೋಡಬಹುದು. ಅಲ್ಲದೆ, ನೀರಿನ ಮಟ್ಟ ಹೆಚ್ಚಾಗುತ್ತಿದ್ದು, ಯಾವುದೇ ವಿದ್ಯುತ್, ವೈಫೈ, ಫೋನ್ ಸಿಗ್ನಲ್ಗಳಿಲ್ಲ. ಟೆರೆಸ್ ಮೇಲೆ ಒಂದೇ ಒಂದು ಕೇಂದ್ರದಲ್ಲಿ ಸಿಗ್ನಲ್ ಸಿಗುತ್ತದೆ. ಅದನ್ನು ಬಿಟ್ಟು ಬೇರೇನು ಇಲ್ಲ. ರಕ್ಷಣೆ ಕೋರಿದ್ದೇವೆ ಎಂದು ಬರೆದುಕೊಂಡಿದ್ದರು.
24 ಗಂಟೆಗಳ ಬಳಿಕ ಆಮೀರ್, ವಿಶಾಲ್ ಮತ್ತು ಅವರ ಪತ್ನಿ ಜ್ವಾಲಾ ಗುಟ್ಟ ಹಾಗೂ ಅಲ್ಲಿ ವಾಸವಿದ್ದ 30ಕ್ಕೂ ಅಧಿಕ ಮಂದಿಯನ್ನು ರಕ್ಷಣೆ ಮಾಡಲಾಯಿತು. ಈ ವಿಚಾರ ನಟ ಅಜಿತ್ಗೆ ತಿಳಿಯುತ್ತಿದ್ದಂತೆ ಆಮೀರ್ ಮತ್ತು ವಿಶಾಲ್ ಅವರನ್ನು ಭೇಟಿಯಾದರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ವಿಶಾಲ್, ಶೇರ್ ಮಾಡಿಕೊಂಡಿದ್ದು, ಸ್ನೇಹಿತನ ಮೂಲಕ ನಮ್ಮ ಪರಿಸ್ಥಿತಿಯನ್ನು ತಿಳಿದುಕೊಂಡ ನಂತರ ಸದಾ ಸಹಾಯ ಹಸ್ತ ಚಾಚುವ ಅಜಿತ್ ಸರ್ ನಮ್ಮ ಸ್ಥಿತಿಯನ್ನು ಪರಿಶೀಲಿಸಲು ಖುದ್ದಾಗಿ ಬಂದರು ಮತ್ತು ನಮ್ಮ ವಿಲ್ಲಾ ಸಮುದಾಯದ ಸದಸ್ಯರಿಗೆ ಪ್ರಯಾಣ ವ್ಯವಸ್ಥೆಗೆ ಸಹಾಯ ಮಾಡಿದರು… ಲವ್ ಯು ಅಜಿತ್ ಸರ್ ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ ಚೆನ್ನೈನಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ತಾಯಿಯೊಂದಿಗೆ ಇರಲು ಆಮೀರ್ ಖಾನ್ ಕೆಲವು ತಿಂಗಳ ಹಿಂದೆ ಚೆನ್ನೈಗೆ ಸ್ಥಳಾಂತರಗೊಂಡಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ ಆಮೀರ್ ಖಾನ್ ಶೀಘ್ರದಲ್ಲೇ ಸಿತಾರೆ ಜಮೀನ್ ಪರ್ ಎಂಬ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ.
ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಮಿಚೌಂಗ್ ಚಂಡಮಾರುತ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, 17 ಮಂದಿಯ ಪ್ರಾಣ ಕಸಿದಿದೆ. ವರುಣನ ಅಬ್ಬರದ ಭಯ ಒಂದೆಡೆಯಾದರೆ, ಮನೆಗಳಿಗೆ ನೀರು ತುಂಬಿ ಜಲಚರಗಳ ದಾಂಗುಡಿ ಇಡುತ್ತಿರುವ ಭಯ ಇನ್ನೊಂದೆಡೆಯಾಗಿದೆ. ನಿನ್ನೆ ರಾತ್ರಿ ನಡುರಸ್ತೆಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಇದೀಗ ರಸ್ತೆಗಳಲ್ಲಿ ನೀರಿನ ಜತೆಗೆ ಮೀನುಗಳು ಸಹ ಕೊಚ್ಚಿಕೊಂಡು ಬರುತ್ತಿದ್ದು, ಜನರು ಮೀನುಗಳಿಗಾಗಿ ಮುಗಿಬಿದ್ದಿದ್ದಾರೆ. ಆದರೆ, ಚೆನ್ನೈ ಮಂದಿಗೆ ಹಾವುಗಳು ಭಯವೂ ಕಾಡುತ್ತಿದೆ. (ಏಜೆನ್ಸೀಸ್)
ಪ್ರವಾಹದ ನಡುವೆ ಚೆನ್ನೈ ಮಂದಿಗೆ ಕಾಡುತ್ತಿದೆ ಹಾವುಗಳ ಭಯ! ಮೊಸಳೆಯೂ ಪ್ರತ್ಯಕ್ಷ
ಅಬ್ಬಾ…ಚೆನ್ನೈನಲ್ಲಿ ಬಿರುಗಾಳಿ ಸಹಿತ ಮಳೆಯ ನಡುವೆ ರಸ್ತೆಯಲ್ಲಿ ದೊಡ್ಡ ಗಾತ್ರದ ಮೀನು ಹಿಡಿದ ವ್ಯಕ್ತಿ