More

    ಮತ್ತೆ ಎಡಪಂಥೀಯರ ಅಟ್ಟಹಾಸ!; ಚಕ್ರವರ್ತಿ ಸೂಲಿಬೆಲೆ ಅಂಕಣ

    ಮತ್ತೆ ಎಡಪಂಥೀಯರ ಅಟ್ಟಹಾಸ!; ಚಕ್ರವರ್ತಿ ಸೂಲಿಬೆಲೆ ಅಂಕಣಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರೊಂದಿಗೆ ಸಾಮಾಜಿಕ ಮಾಧ್ಯಮಗಳು ನಡೆದುಕೊಂಡಿರುವ ರೀತಿ ನಮ್ಮೆಲ್ಲರ ಪಾಲಿಗೆ ಬಲುದೊಡ್ಡ ಎಚ್ಚರಿಕೆ ಗಂಟೆ. ಸಾಮಾಜಿಕ ಜಾಲತಾಣಗಳು ಆರಂಭಗೊಂಡಾಗ ಹೊಸ ಕ್ರಾಂತಿಯ ಭರವಸೆ ಉಂಟಾಗಿದ್ದೆಲ್ಲವೂ ಈಗ ಸತ್ತಂತಾಗಿದೆ. ನಾವೀಗ ಮತ್ತದೇ ಹಳೆಯ ಮಾಧ್ಯಮಗಳ ಪರಿಕಲ್ಪನೆಗೆ ಬಂದು ನಿಂತುಬಿಟ್ಟಿದ್ದೇವೆ. ಎಡಪಂಥೀಯರ ಅಟ್ಟಹಾಸ ಮತ್ತೊಮ್ಮೆ ಜಗತ್ತನ್ನೆಲ್ಲ ಆವರಿಸಿಕೊಳ್ಳುವಂತೆ ಕಾಣುತ್ತಿದೆ. ಬಹುಶಃ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ 2024ರಲ್ಲಿ ನರೇಂದ್ರ ಮೋದಿಯವರನ್ನು ಇವರು ಹೀಗೆಯೇ ಬಹಿಷ್ಕರಿಸಿ, ಜನರನ್ನು ಮುಟ್ಟುವ ಅವಕಾಶಗಳಿಂದ ಅವರನ್ನು ವಂಚಿತಗೊಳಿಸಿದರೂ ಅಚ್ಚರಿ ಪಡಬೇಕಿಲ್ಲ!

    ಎಡಪಂಥೀಯರ ವಿಚಾರದಲ್ಲಿ ಇದು ಹೊಸ ಪ್ರಕ್ರಿಯೆ ಏನಲ್ಲ. ತಮ್ಮ ವಿಚಾರಧಾರೆಯೇ ಎಲ್ಲರನ್ನೂ ಆಳಬೇಕೆಂಬ ತುಡಿತ ಅವರಲ್ಲಿ ಬಹು ಹಿಂದಿನಿಂದಲೂ ಇದೆ ಅಥವಾ ಅವರಲ್ಲಿರೋದೇ ಅದು. ಭಿನ್ನ ವಿಚಾರಧಾರೆಯನ್ನು ಒಪು್ಪವ ಮಾತು ದೂರವಿರಲಿ, ಕೇಳುವ, ಸಹಿಸಿಕೊಳ್ಳುವ ತಾಳ್ಮೆಯೂ ಅವರಿಗಿಲ್ಲ. ಶತಾಯಗತಾಯ ತಮ್ಮ ವಾದವನ್ನು ಇತರರ ಮೇಲೆ ಹೇರುವುದಲ್ಲದೇ ಅನ್ಯರ ವಾದವನ್ನು ತುಳಿದು ನಿಂತುಬಿಡುವ ಕಲೆ ಅವರಿಗೆ ಕರಗತ. ಹಾಗೆ ವ್ಯಕ್ತಿಯೊಬ್ಬನ ದನಿಯನ್ನು ಅಡಗಿಸಲಾಗದಿದ್ದರೆ ಅವನನ್ನು ಕೊಂದೇಬಿಡಲು ಹೇಸದ ಕೆಟ್ಟ ಮಂದಿ ಅವರು! ಕೇರಳ ಇದಕ್ಕೆ ಪ್ರತ್ಯಕ್ಷ ಉದಾಹರಣೆ. ಜಗತ್ತಿನ ಕಮ್ಯುನಿಸ್ಟ್ ನಾಯಕರೆಲ್ಲರೂ ಈ ಹಾದಿಯನ್ನೇ ಅನುಸರಿಸಿದವರು. ರಷ್ಯಾದಲ್ಲಿ ವಿರೋಧಿಗಳ ನಾಶಮಾಡಲು ಇದರ ಪ್ರಯೋಗ ಮಾಡಿದಷ್ಟೇ ಸಲೀಸಾಗಿ ಚೀನಾದ ಕಮ್ಯುನಿಸ್ಟ್ ಪಡೆ ಇದನ್ನು ಪ್ರಯೋಗಿಸುತ್ತಿದೆ. ಇತ್ತೀಚೆಗೆ ಜ್ಯಾಕ್ ಮಾ ಕಾಣೆಯಾದುದನ್ನು ನೋಡಿದೆವಲ್ಲ. ಅವರ ಖ್ಯಾತಿಯನ್ನೂ ಟೀಕೆಯನ್ನೂ ಸಹಿಸಲಾಗದ ಕಮ್ಯುನಿಸ್ಟ್ ಪಕ್ಷ ಜ್ಯಾಕ್​ರನ್ನು ಏನು ಮಾಡಿತು ಎಂಬುದು ನಿಗೂಢವಾಗಿಯೇ ಇದೆ. ಸಹಸ್ರಾರು ಕೋಟಿ ರೂಪಾಯಿಗಳ ಒಡೆಯರಾಗಿರುವ ಜ್ಯಾಕ್ ಮಾ ಪಕ್ಷದ ವಿರುದ್ಧ ಮಾತನಾಡಿದರು ಎಂಬ ಒಂದೇ ಕಾರಣಕ್ಕೆ ಅವರನ್ನು ಭಿಕ್ಷೆ ಬೇಡುವ ಸ್ಥಿತಿಗೆ ತಂದುಬಿಡುತ್ತಾರೆಂದರೆ ಈ ಎಡಪಂಥೀಯರ ಅರಚಾಟ ಎಂಥದ್ದಿರಬೇಕು ಎಂದು ಊಹಿಸಿ.

    ಇದನ್ನೂ ಓದಿ: ಕರೊನಾ ಲಸಿಕೆ ಪಡೆದ ಹತ್ತೇ ದಿನಗಳಲ್ಲಿ ಸತ್ತ!; ಸಾವಿಗೆ ಕಾರಣ ವಿಷ ಎಂದಿತ್ತು ಮರಣೋತ್ತರ ಪರೀಕ್ಷೆಯಲ್ಲಿ…

    ಹಾಗಂತ ಇದು ಹೊರದೇಶಗಳಲ್ಲಿ ಮಾತ್ರವೇನಲ್ಲ, ಭಾರತದಲ್ಲೂ ಇದರ ಅಬ್ಬರ ನೋಡಿದ್ದೇವೆ, ಅನುಭವಿಸಿದ್ದೇವೆ. 2002ರ ಗುಜರಾತಿನ ದಂಗೆಗಳು ನಿಮಗೆಲ್ಲ ನೆನಪಿರಬೇಕು. ಅಂದಿನ ತಥಾಕಥಿತ ಮಾಧ್ಯಮಗಳೆಲ್ಲ ಇಂದು ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ವಿರುದ್ಧ ಹೇಗೆ ತಿರುಗಿಬಿದ್ದವೆಂದರೆ ಕೆಲವೊಮ್ಮೆ ಸತ್ಯವನ್ನು ಮರೆಮಾಚಿ ಮತ್ತೂ ಕೆಲವೊಮ್ಮೆ ಸತ್ಯವನ್ನು ತಿರುಚಿ ವರದಿ ಬರೆದವು. ಸಂದರ್ಶನಗಳಲ್ಲಿ ಕಸಿವಿಸಿ ಉಂಟುಮಾಡುವ ಪ್ರಶ್ನೆ ಕೇಳಬೇಕೆಂದೇ ಮೋದಿಯವರ ಮೇಲೆ ದಾಳಿ ಮಾಡುವ ಪ್ರಯತ್ನವನ್ನೂ ಮಾಡಿದವು. ಇವುಗಳಿಂದ ಬೇಸತ್ತ ನರೇಂದ್ರ ಮೋದಿ ಈ ಪತ್ರಿಕೆಗಳಿಗೆ ಸಂದರ್ಶನ ಕೊಡುವುದನ್ನೂ, ವರದಿ ಕಳಿಸುವುದನ್ನೂ ಬಿಟ್ಟೇಬಿಟ್ಟರು. ನೇರವಾಗಿ ಜನರ ಸಂಪರ್ಕ ಇರಿಸಿಕೊಳ್ಳುವುದರತ್ತ ಗಮನ ಹರಿಸಿದರು. ಪರಿಣಾಮ ಈ ಎಲ್ಲ ಮಾಧ್ಯಮಗಳ ವಿಪರೀತ ಪ್ರಚಾರದ ನಂತರವೂ ಮೋದಿ ಗೆದ್ದುಬಂದರು. ಅವರಿಗೆ ನೆಲಮಟ್ಟದ ಸಂಪರ್ಕವೇ ಇವರೆಲ್ಲರನ್ನೂ ಮಟ್ಟಹಾಕುವ ತಂತ್ರವೆಂದು ಚೆನ್ನಾಗಿ ಗೊತ್ತಿತ್ತು. ನೆನಪಿಡಿ, ಎಡಪಂಥೀಯರು ಕೈ ಬೆರಳೆಣಿಕೆಯಷ್ಟು ಮಾತ್ರ. ಆದರೆ ಅವರ ಸದ್ದು ಮುಗಿಲು ಮುಟ್ಟುವಷ್ಟು. ಏಕೆಂದರೆ ಆಯಕಟ್ಟಿನ ಜಾಗದಲ್ಲಿ ಬಲವಾಗಿ ಬೇರೂರಿಬಿಟ್ಟಿದ್ದಾರೆ. ಅವರು ಸ್ಥಾಪಿಸಿರುವ ನಮೂನೆಗಳನ್ನು ಕಿತ್ತೆಸೆದು ಹೊಸತೇನನ್ನೋ ನಿರ್ವಿುಸುವುದು ಎಲ್ಲರಿಗೂ ಸಾಧ್ಯವಾಗದ ಮಾತು. ಹೀಗಾಗಿಯೇ ‘ಮಂದಿರ ಉಳಿಸಿ’ ಎಂಬ ಹೆಸರಿನಲ್ಲಿ ಹತ್ತುಸಾವಿರ ಜನ ಸೇರಿದ್ದರೂ ಮುಖಪುಟದಲ್ಲಿ ಸುದ್ದಿಯಾಗದ ವಿಚಾರ ‘ದನದಮಾಂಸ ತಿನ್ನುವೆ’ ಎಂದು 20 ಮಂದಿ ಹೇಳಿದರೂ ದೊಡ್ಡ ಪ್ರಚಾರ ಪಡೆದುಬಿಡುತ್ತದೆ. ಈ ಎಡವಾದಿಗಳ ಜಾಲ ಅಷ್ಟು ಬಲವಾಗಿದೆ. ಇನ್ನು, ಫೇಸ್​ಬುಕ್, ಟ್ವಿಟರ್​ಗಳು ಆಗಮಿಸಿದಾಗ ಬಹಳ ಮಂದಿ ಆ ದಿಕ್ಕಿನತ್ತ ಲಕ್ಷ್ಯ ಕೊಟ್ಟಿರಲಿಲ್ಲ. ಮೊಬೈಲ್ ಬಳಕೆಯಲ್ಲಿ ಹಿಂದುಳಿದಿರುವ ಭಾರತಕ್ಕೆ ಇದು ಸವಾಲಾಗಲಾರದು ಎಂದೇ ಎಲ್ಲರೂ ಭಾವಿಸಿದ್ದರು. ಆ ಹೊತ್ತಲ್ಲೂ ಇವುಗಳ ಸಾಮರ್ಥ್ಯವನ್ನು ಗುರುತಿಸಿದ್ದು ನರೇಂದ್ರ ಮೋದಿಯವರೇ.

    2014ರ ಚುನಾವಣೆಯಲ್ಲಿ ಅವರು ಸಾಮಾಜಿಕ ಜಾಲತಾಣಗಳನ್ನು ಬಳಸಿದ ಪರಿ ಕಾಂಗ್ರೆಸ್ ಪರಿಹಾಸ್ಯ ಮಾಡುವಂತೆ ಮಾಡಿದರೆ, ಜಾಗತಿಕ ನಾಯಕರಲ್ಲಿ ಅಚ್ಚರಿ ಉಂಟುಮಾಡಿತು. ಮೋದಿಯವರ ಪ್ರಭಾವದಿಂದಾಗಿಯೇ ಭಾಜಪದ ಐಟಿಸೆಲ್ ಎಲ್ಲರಿಗಿಂತಲೂ ಮೊದಲು ಮತ್ತು ಎಲ್ಲರಿಗಿಂತಲೂ ಸದೃಢವಾಗಿ ನಿರ್ವಣಗೊಂಡಿತು. ಮುಂದೆ ಇದರ ಮಹತ್ವವನ್ನು ಅರಿತ ಕಾಂಗ್ರೆಸ್ ಬಿಡಿ, ಜೆಡಿಎಸ್ ಕೂಡ ಸಾಮಾಜಿಕ ಜಾಲತಾಣಗಳ ಕುರಿತಂತೆ ಸಭೆಯನ್ನು ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿತು. ಸೆಲೆಬ್ರಿಟಿಗಳೆನಿಸಿಕೊಂಡವರೆಲ್ಲರೂ ಇವುಗಳ ಮೂಲಕವೇ ಪ್ರಚಾರ ಪಡೆದುಕೊಳ್ಳುವ ಗೀಳಿಗೆ ಬಿದ್ದ ನಂತರವಂತೂ ಭಾರತದಲ್ಲಿ ಸಾಮಾಜಿಕ ಜಾಲತಾಣಗಳದ್ದೇ ಪಾರುಪತ್ಯ ಆರಂಭವಾಯ್ತು. ಈ ಮಾಧ್ಯಮದ ವೈಶಿಷ್ಟ್ಯವೇನೆಂದರೆ ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಅವನೇ ವರದಿಗಾರ, ಅವನೇ ಸಂಪಾದಕ, ಕೊನೆಗೆ ಅಗತ್ಯಬಿದ್ದರೆ ಅವನೇ ಓದುಗ. ಇದನ್ನು ರೂಪಿಸಿದವರ ಬುದ್ಧಿಮತ್ತೆ ಹೇಗಿತ್ತೆಂದರೆ ಪರಿವಾರಗಳು, ಮಿತ್ರರನ್ನು ಜೊತೆಗೂಡಿಸುವ ಪ್ರಯತ್ನವೆಂದು ಆರಂಭವಾಗಿ ಕೊನೆಗೆ ಅನುಯಾಯಿಗಳನ್ನು ಸೃಷ್ಟಿಸುವವರೆಗೂ ವ್ಯಾಪಕವಾಗಿ ಬೆಳೆದುಬಿಟ್ಟಿತು. ಇವರು ರಚಿಸಿದ ಆಲ್ಗರಿದಮ್ಳು ಜನರನ್ನು ಹೇಗೆ ಹಿಡಿದಿಟ್ಟವೆಂದರೆ ಮೊಬೈಲ್ ತೆರೆದಾಗಲೆಲ್ಲ ಒಮ್ಮೆ ನೋಟಿಫಿಕೇಶನ್ ನೋಡಲೇಬೇಕೆಂಬ ಗೀಳಿಗೆ ಜನ ಬೀಳುವಂತಾಯ್ತು. ಸಾಮಾಜಿಕ ಮಾಧ್ಯಮಗಳು ಬಲಗೊಂಡವು. ಸಹಜವಾಗಿಯೇ ಬಲಪಂಥೀಯರ ಮತ್ತು ಸತ್ಯವನ್ನಾಡುವವರ ಸಂಖ್ಯೆ ಜೋರಾಗಿದ್ದುದರಿಂದ ಸುಳ್ಳುಗಾರರ, ದೇಶಕಂಟಕರ ಅಂಗಡಿ ಹೆಚ್ಚು-ಕಡಿಮೆ ಮುಚ್ಚಿಯೇಬಿಟ್ಟಿತು. ನೋಡನೋಡುತ್ತಲೇ ಎಡಪಂಥೀಯ ವಿಚಾರಧಾರೆಗಳಿಗೆ ಇದ್ದ ಏಕಸ್ವಾಮ್ಯ ಮುರಿದುಬಿತ್ತು. ರಾಮನ ಅಸ್ತಿತ್ವದ ಬಗ್ಗೆ ಪ್ರಶ್ನೆ ಮಾಡುತ್ತಿದ್ದವರೇ ರಾಮಮಂದಿರದ ನಿರ್ವಣದ ಕುರಿತ ವರದಿ ಪ್ರಕಟಿಸುವಂತಾಯ್ತು. ಇದು ನಿಜವಾದ ಬದಲಾವಣೆ. ಇವಕ್ಕೆಲ್ಲ ಕಾರಣವಾಗಿದ್ದು ಸಾಮಾಜಿಕ ಮಾಧ್ಯಮಗಳೇ. ಇದನ್ನು ಸಹಿಸಲಾಗದ ಎಡಪಂಥೀಯರು ಕೈ-ಕೈ ಹಿಸುಕಿಕೊಂಡರು. ಆಗ ಅವರು ಆರಿಸಿಕೊಂಡ ಮಾರ್ಗವೇ ಈ ಮಾಧ್ಯಮಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನ. ನಿಧಾನವಾಗಿ ಫೇಸ್​ಬುಕ್ಕಿನ, ಟ್ವಿಟರ್​ಗಳ ಪ್ರಮುಖ ಸ್ಥಾನಗಳನ್ನೆಲ್ಲ ಅವರೇ ಆಕ್ರಮಿಸಿಕೊಂಡುಬಿಟ್ಟರು. ಬರುಬರುತ್ತ ಬಲಪಂಥೀಯ ವಿಚಾರಧಾರೆಗಳನ್ನು ಪ್ರತಿಪಾದಿಸುತ್ತಿದ್ದವರ ಹ್ಯಾಂಡಲ್​ಗಳು ಕಾಣೆಯಾಗಲಾರಂಭಿಸಿದವು. ಅವರ ವಿಚಾರಗಳನ್ನು ಜನಕ್ಕೆ ಮುಟ್ಟದಂತೆ ಮಾಡುವಲ್ಲಿ ಬಲುದೊಡ್ಡ ಪಾತ್ರ ವಹಿಸಲಾರಂಭಿಸಿದವು.

    2019ರ ಚುನಾವಣೆಯ ವೇಳೆಗೆ ಪ್ರಖರ ಮೋದಿ ಬೆಂಬಲಿಗರಾಗಿದ್ದ ಅನೇಕರ ಅನುಯಾಯಿಗಳ ಸಂಖ್ಯೆ ಏಕಾಏಕಿ ಕಡಿಮೆಯಾಗಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದವು. ಕೇಂದ್ರ ಕ್ಯಾಬಿನೆಟ್ ಟ್ವಿಟರ್​ನ ಮುಖ್ಯಸ್ಥರನ್ನು ಕರೆದು ಉಗಿದಿದ್ದೂ ಆಗಿತ್ತು. ಮಧ್ಯೆ ಒಮ್ಮೆ ಮೋದಿ ತಾನು ಟ್ವಿಟರ್ ಬಳಸುವುದಿಲ್ಲ ಎಂದಾಗ ಹೊಸ ಭಾರತೀಯ ಕಲ್ಪನೆಯ ಸಾಮಾಜಿಕ ಮಾಧ್ಯಮವೊಂದು ಬರಲಿದೆಯೇನೋ ಎಂದೇ ಎಲ್ಲರೂ ನಂಬಿದ್ದರು. ಆದರೆ ಹಾಗಾಗಲಿಲ್ಲ. ಹೆಚ್ಚು ಹೆಚ್ಚು ಜನ ಈ ಮಾಧ್ಯಮಗಳಿಗೆ ಜೋಡಣೆಯಾಗುತ್ತಿದ್ದಂತೆ ಇವುಗಳನ್ನು ನಡೆಸುವ ಕಂಪನಿಗಳು ಬೀಗಿ ಮೆರೆಯುತ್ತಿವೆ.

    ಇದನ್ನೂ ಓದಿ: 2020ನೇ ವರ್ಷದಲ್ಲಿ ಹಾಲು ಮಾರಿ ಈಕೆ ಸಂಪಾದಿಸಿದ ಹಣದ ಮೊತ್ತ ಕೇಳಿದ್ರೆ ಬೆಕ್ಕಸ ಬೆರಗಾಗುತ್ತೀರಿ!

    ಟ್ರಂಪ್ ವಿಚಾರದಲ್ಲಿ ಇದು ಅಕ್ಷರಶಃ ಸಾಬೀತಾಯ್ತು. ಮೊದ-ಮೊದಲು ಅವರ ಟ್ವೀಟ್​ಗಳನ್ನು ಶಾಡೊಬ್ಯಾನ್ ಮಾಡಿ ಹಿಂಬಾಲಕರಿಗೆ ತಲುಪದಂತೆ ಮಾಡುತ್ತಿದ್ದ ಟ್ವಿಟರ್ ನಂತರ ಒಂದು ಹೆಜ್ಜೆ ಮುಂದೆ ಹೋಗಿ ಟ್ರಂಪ್ ಬರೆದದ್ದಕ್ಕೆಲ್ಲ ಸತ್ಯವೋ ಸುಳ್ಳೋ ಎಂದು ನಿರ್ಧರಿಸುವ ಫ್ಯಾಕ್ಟ್ ಚೆಕಿಂಗ್ ವರದಿಗಳನ್ನು ಜೋಡಿಸಿ ಅವಹೇಳನ ಮಾಡಿತು. ಇದು ಟ್ರಂಪ್ ಅವರಿಗಷ್ಟೇ ಅಲ್ಲದೆ, ಅವರ ಬೆಂಬಲಿಗರನ್ನೂ ಈ ವ್ಯವಸ್ಥೆಯೊಳಗೆ ತಂದು ಟ್ರಂಪ್​ರನ್ನು ಕೆಟ್ಟದ್ದಾಗಿ ಬಿಂಬಿಸುವ ಎಲ್ಲ ಪ್ರಯತ್ನಗಳನ್ನೂ ಮಾಡಿತು. ಒಂದು ಹಂತದಲ್ಲಂತೂ ಯಾವ ಅತಿರೇಕಕ್ಕೆ ಹೋಗಿತ್ತೆಂದರೆ ಟ್ರಂಪ್ ಟ್ವೀಟ್​ಗಳನ್ನು ಮುಲಾಜಿಲ್ಲದೇ ಟ್ವಿಟರ್ ತಾನೇ ತೆಗೆದುಹಾಕಿಬಿಡುತ್ತಿತ್ತು. ತನ್ನ ಆಲೋಚನೆಗಳಿಗೆ ಸರಿಹೊಂದುವ ಟ್ವೀಟ್​ಗಳನ್ನು ಮಾತ್ರ ಉಳಿಸಿ ಮೆರೆಯುತ್ತಿತ್ತು ಟ್ವಿಟರ್. ಮೊನ್ನೆ ಅಮೆರಿಕದಲ್ಲಿ ಗಲಾಟೆಯಾದ ಮೇಲಂತೂ ಟ್ರಂಪ್​ರನ್ನು ಮೊದಲು 12 ದಿನಗಳ ಕಾಲ ನಿಯಂತ್ರಿಸಿ ನಂತರ ಸಂಪೂರ್ಣ ಅಕೌಂಟನ್ನೇ ತೆಗೆದುಹಾಕುವ ನಿರ್ಣಯ ಪ್ರಕಟಿಸಿತು.

    ಫೇಸ್​ಬುಕ್ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಅತ್ತ ಯುಟ್ಯೂಬ್ ಕೂಡ ಇದೇ ರೀತಿ ತನಗೆ ಬೇಕಾದ್ದನ್ನು ಉಳಿಸುವ, ಬೇಡವಾದದ್ದನ್ನು ಕಿತ್ತು ಬಿಸಾಡುವ ಧಾಷ್ಟರ್್ಯ ತೋರುತ್ತಿದೆ. ಇತ್ತೀಚೆಗೆ ಗೂಗಲ್ ಡ್ರೖೆವ್ ಕರೊನಾ ಕುರಿತಂತೆ ಸಾಕ್ಷ್ಯಚಿತ್ರವೊಂದನ್ನು ಇದೇ ರೀತಿ ತೆಗೆದುಹಾಕಿತು. ಇಬ್ಬರ ನಡುವಿನ ಸಂಭಾಷಣೆಯನ್ನು ಹೀಗೆಯೇ ತೆಗೆದುಹಾಕುವ ಸ್ವಾತಂತ್ರ್ಯ ಜಿ-ಮೇಲ್​ಗೂ ಇದೆ. ಅಂದರೆ ಇವರೆಲ್ಲರೂ ನಮ್ಮ ಅಂತರಂಗದ ಕೋಣೆಯೊಳಗೆ ಇಣುಕಿ ನೋಡುತ್ತಿರುತ್ತಾರೆ ಎಂದಾಯ್ತು. ಜೊತೆಗೆ ತಮಗೆ ಸರಿಕಾಣಿಸಿದ್ದನ್ನು ಮಾತ್ರ ಪ್ರಕಟಿಸುವ ಈ ಹಿಂದಿನ ಮಾಧ್ಯಮಗಳಂತೆ ಇವರ ವರ್ತನೆಯಿದೆ. ಅದರರ್ಥ ಇವರು ಸಂಪಾದಕರು, ಉಳಿದವರೆಲ್ಲ ಬರಹಗಾರರು ಅಂತ. ಅಂದಮೇಲೆ ಇವರನ್ನೂ ನಾವೊಂದು ಪತ್ರಿಕೆ ಎಂದೇ ಭಾವಿಸಿ ಅದಕ್ಕೆ ಅನ್ವಯವಾಗುವ ಎಲ್ಲ ಕಾನೂನುಗಳನ್ನು ಇವರ ಮೇಲೂ ಏಕೆ ಅನ್ವಯಿಸಬಾರದು? ಆದ್ದರಿಂದಲೇ ಆದಷ್ಟು ಬೇಗ ಈ ಜಾಲತಾಣಗಳ ಮೇಲೆ ನಿಯಂತ್ರಣ ಹೇರುವ ಅಗತ್ಯವಿದೆ.

    ಹೇಗೆ ಲೇಖನವೊಂದನ್ನು ಪ್ರಕಟಿಸಿದರೆ ಜವಾಬ್ದಾರಿಯನ್ನು ಪತ್ರಿಕೆಯೂ ಹೊರಬೇಕೋ ಹಾಗೆಯೇ ಸುಳ್ಳು ಪ್ರಕಟಗೊಂಡರೆ ಅದರ ಜವಾಬ್ದಾರಿಯನ್ನು ಈ ಜಾಲತಾಣಗಳ ಪ್ರಮುಖರೇ ಹೊರಬೇಕೆನ್ನುವ ಕಾನೂನು ತರಬೇಕಿದೆ. ಜಾಲತಾಣಗಳು ಸತ್ಯ, ಸುಳ್ಳು ಯಾವುದೆಂದು ನಿರ್ಧರಿಸುವ ಹೊಣೆಗಾರಿಕೆಯನ್ನು ತಾವೇ ಹೊತ್ತ ಮೇಲೆ ಇದು ಅವರದ್ದೇ ಜವಾಬ್ದಾರಿಯಲ್ಲವೇನು? ಅಕಸ್ಮಾತ್ ಅದು ಸಾಧ್ಯವಾಗಲಿಲ್ಲವೆಂದಾದರೆ ಚೀನಿಗರು ಮಾಡಿರುವಂತೆ ನಮ್ಮದ್ದೇ ಆದ ಸಾಮಾಜಿಕ ಮಾಧ್ಯಮವನ್ನು ನಾವೂ ಸೃಷ್ಟಿಸಿಕೊಳ್ಳಬೇಕಿದೆ. ನಮಗಿನ್ನೂ ನಾಲ್ಕು ವರ್ಷ ಬಾಕಿ ಇದೆ. ಟ್ರಂಪ್ ನಮಗೆ ಬಲುದೊಡ್ಡ ಪಾಠವಾಗಲಿದ್ದಾರೆ. ಕಷ್ಟಪಟ್ಟು ಕಳೆದ ಆರೇಳು ವರ್ಷಗಳಿಂದ ಕಟ್ಟಿದ್ದನ್ನು ನಾಲ್ಕಾರು ಕಂಪನಿಗಳ ಮಾಲೀಕರು ಹಾಳುಗೆಡವಲು ನಾವು ಬಿಡಬಾರದೆಂದರೆ ಈಗಲೇ ಜಾಗೃತರಾಗಬೇಕಾದ ಅವಶ್ಯಕತೆ ಇದೆ!

    ಭಾರತದ್ದೊಂದು ಶಕ್ತಿ ನಿಜಕ್ಕೂ ಅಪರೂಪದ್ದು. ಅದರಲ್ಲೂ ವಿಶೇಷವಾಗಿ ನರೇಂದ್ರ ಮೋದಿ ಅದನ್ನು ಚೆನ್ನಾಗಿ ಗುರುತಿಸಿ ಪೋಷಿಸಿದ್ದಾರೆ. ಇಲ್ಲಿ ಜನ ಫೇಸ್​ಬುಕ್ ಮತ್ತು ಟ್ವಿಟರ್​ಗಳಿಗಿಂತ ಹೆಚ್ಚಾಗಿ ಅರಳಿಕಟ್ಟೆಯ ಮೇಲೆ ಕುಂತು ಮಾತಾಡುತ್ತಾರೆ. ಹೇರ್​ಕಟಿಂಗ್ ಸಲೂನುಗಳಲ್ಲಿ ಟ್ವಿಟರ್​ಗಿಂತಲೂ ಹೆಚ್ಚು ಸಮರ್ಥವಾದ ಚರ್ಚೆಗಳು ನಡೆಯುತ್ತವೆ. ನಮ್ಮಲ್ಲಿ ಜನ ಒಬ್ಬರಿಗೊಬ್ಬರು ಹೆಚ್ಚು ಬಂಧಿತವಾಗಿದ್ದಾರೆ. ಹೀಗಾಗಿ ಅವರ ಹೃದಯವನ್ನು ಮುಟ್ಟುವ, ತಟ್ಟುವ ವಿಷಯಗಳು ಬೇರೆಯೇ ಇವೆ. ಆದ್ದರಿಂದಲೇ ಇಲ್ಲಿ ಸಾಮಾಜಿಕ ಜಾಲತಾಣಗಳಿಗಿಂತಲೂ ಜೋರಾಗಿ ಪಿಸುಮಾತು ಹಬ್ಬಿಬಿಡುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೇರೆಲ್ಲ ಶಕ್ತಿಗಿಂತಲೂ ವಿಚಾರವನ್ನು ಒಬ್ಬರಿಂದ ಒಬ್ಬರಿಗೆ ಹರಡಿಸುವ ಅವರ ವಿಶಿಷ್ಟ ಜಾಲದ ಕುರಿತಂತೆ ಇಂದಿರಾ ಗಾಂಧಿ ಹೆದರುತ್ತಿದ್ದರಂತೆ. ಅದನ್ನು ಅವರು ‘ವಿಸ್ಪರಿಂಗ್ ಕ್ಯಾಂಪೈನ್’ ಎಂದೇ ಕರೆಯುತ್ತಿದ್ದರು. ಮೋದಿಗೆ ಇದು ಚೆನ್ನಾಗಿ ಅರಿವಿರುವುದರಿಂದಲೇ ಇವುಗಳ ಮೇಲೆ ನಿರ್ಭರವಾಗದೇ ತಮ್ಮದ್ದೇ ಆದ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದಾರೆ. ‘ಮನ್ ಕಿ ಬಾತ್’ ಅದರದ್ದೇ ಒಂದು ರೂಪ. ಚುನಾವಣೆ ಸಂದರ್ಭದಲ್ಲಿ ತಮ್ಮದ್ದೇ ಆದ ಒಂದು ಚಾನೆಲ್ ಅನ್ನು ಅವರು ಆರಂಭಿಸಿಬಿಡೋದು ಯಾರಿಗೂ ಗೊತ್ತಿಲ್ಲದ ಸಂಗತಿಯೇನಲ್ಲ. ಅಲ್ಲದೆ, ತಮ್ಮ ವಿಭಿನ್ನ ಚಟುವಟಿಕೆಗಳ ಮೂಲಕ ಜನಸಾಮಾನ್ಯರೊಂದಿಗಿನ ಸಂಬಂಧವನ್ನು ನಿರಂತರವಾಗಿ ಅವರು ಜಾಗೃತವಾಗಿರಿಸಿಕೊಳ್ಳುತ್ತಾರೆ. ಇಲ್ಲವಾದಲ್ಲಿ ಫೇಸ್​ಬುಕ್, ಟ್ವಿಟರ್, ವಾಟ್ಸ್​ಆಪ್, ಇನ್​ಸ್ಟಾಗ್ರಾಂ ಇವುಗಳೆಲ್ಲದರೊಟ್ಟಿಗೆ ಸೇರಿ ಕಾಂಗ್ರೆಸ್ಸು, ಕಮ್ಯುನಿಸ್ಟರು, ಮುಸ್ಲೀಂಲೀಗ್ ಮತ್ತಿತರ ಸಣ್ಣ-ಪುಟ್ಟ ಪಾರ್ಟಿಗಳೂ ಸೇರಿ ನಡೆಸಿದ್ದ ಸಿಎಎ ವಿರುದ್ಧದ ಪ್ರತಿಭಟನೆ ಎಂಬ ಪಿತೂರಿಗೆ ಮೋದಿ ಬಲಿಯಾಗಿಬಿಡಬೇಕಿತ್ತು.

    ಈಗ ರೈತರ ಹೋರಾಟವೂ ಹಾಗೆಯೇ. ಪಾಕಿಸ್ತಾನ, ಚೀನಾ, ಕೆನಡಾಗಳಿಂದ ನಿರಂತರ ಹಣ ಪೂರೈಕೆಯಾಗುತ್ತಿದ್ದರೂ ಮಾಧ್ಯಮಗಳಲ್ಲಿ ಎಡಪಂಥೀಯರ ಬೆಂಬಲದ ಅನೇಕ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮಾಧ್ಯಮಗಳು ಮೋದಿ ವಿರುದ್ಧವೇ ನಿಂತಿದ್ದವು. ಟ್ವಿಟರ್​ನ ಭಾರತೀಯ ಮುಖ್ಯಸ್ಥ ಮತ್ತು ಅಂತಾರಾಷ್ಟ್ರೀಯ ಮುಖ್ಯಸ್ಥರೂ ಮೋದಿಗೆ ಸೋಲುಂಟು ಮಾಡಲು ಹೆಣಗಾಡುತ್ತಿದ್ದರೂ ಕೂದಲು ಕೊಂಕಲೂ ಸಾಧ್ಯವಾಗದಿರುವುದು ಜನಸಾಮಾನ್ಯರೊಂದಿಗೆ ಅವರು ಬಲವಾಗಿ ಬೆಸೆದುಕೊಂಡಿದ್ದಾರೆಂಬ ಕಾರಣಕ್ಕೇ. ಎಲ್ಲಿಯವರೆಗೂ ಈ ಜಾಲ ಬಲವಾಗಿರುತ್ತದೋ ಅಲ್ಲಿಯವರೆಗೂ ಸಾಮಾಜಿಕ ಜಾಲತಾಣಗಳು ಕೂದಲೂ ಕೊಂಕಿಸಲಾರವು. ಅಂದರೆ ನಾವೀಗ ಮನುಷ್ಯ-ಮನುಷ್ಯರ ನಡುವಿನ ಈ ಬಾಂಧವ್ಯವನ್ನು ಹೆಚ್ಚಿಸಬೇಕಿದೆ. ಇವರೆಲ್ಲ ಸೇರಿ ಭಾರತದ ವಿರುದ್ಧ ರೂಪಿಸುತ್ತಿರುವ ಷಡ್ಯಂತ್ರದಲ್ಲಿ ನಾವು ಗೆಲ್ಲಬೇಕಿದೆ. ಸಮಯ ಬಂದಿದೆ. ಸಿದ್ಧರಾಗೋಣ.

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಮಧ್ಯರಾತ್ರಿಯಲ್ಲಿ ನೀರು ಕುಡಿಯಲೆದ್ದಿದ್ದ ಅಮ್ಮನಿಗಾಯ್ತು ದಿಗಿಲು​; ರಾತ್ರಿ ಮಲಗಿದ್ದ ಮಗ-ಸೊಸೆ ಅಲ್ಲಿರಲಿಲ್ಲ..!

    ಶಾಲೆಗೆ ತಡವಾಗುತ್ತೆ ಎಂದು ಬಾಲಕನೊಬ್ಬ ಹೇಳಿದ್ದಕ್ಕೆ ಬದಲಾಗೇ ಬಿಡ್ತು ಬಸ್​ ಟೈಮಿಂಗ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts