ಹುಬ್ಬಳ್ಳಿ: ಮುಂದಿನ 25 ವರ್ಷಗಳಲ್ಲಿ ಭಾರತದ ಶೇ. 50ರಷ್ಟು ಜನಸಂಖ್ಯೆ ನಗರಗಳಲ್ಲಿ ಜೀವನ ಕಟ್ಟಿಕೊಳ್ಳಲಿದ್ದಾರೆ, ಇದಕ್ಕೆ ಪೂರಕವಾಗಿ ನಗರಗಳು ಮೂಲ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಹೊಂದಬೇಕಾದ ಅಗತ್ಯವಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಪ್ರಾಯಪಟ್ಟರು.
ಇಲ್ಲಿಯ ಚನ್ನಮ್ಮ ವೃತ್ತ ಬಳಿಯ ಹಳೇ ಬಸ್ ನಿಲ್ದಾಣ ಆವರಣದಲ್ಲಿ ಭಾನುವಾರ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಸ್ಮಾರ್ಟ್ ಸಿಟಿ ಅನುದಾದಡಿಯಲ್ಲಿ ಪುನರ್ ಅಭಿವೃದ್ಧಿಪಡಿಸಲಾದ ಬಸ್ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸರ್ಕಾರವು ಸ್ಮಾರ್ಟ್ ಸಿಟಿ ಅಡಿ ಹಲವಾರು ಕಾಮಗಾರಿಗಳನ್ನು ಕೈಗೊಂಡಿದೆ. ಆದರೆ, ನಿರ್ವಹಣೆಯೇ ಸ್ಥಳಿಯ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ. ಸಮರ್ಪಕ ನಿರ್ವಹಣೆ ಮಾಡದೇ ಹೋದರೆ ಅಭಿವೃದ್ಧಿ ಕೆಲಸಗಳು ಬಹಳ ದಿನ ಉಳಿಯುವುದಿಲ್ಲ. ಹಾಗಾಗಿ ಇದಕ್ಕೊಂದು ಸರಿಯಾದ ವ್ಯವಸ್ಥೆ ಮಾಡಬೇಕು. ಸ್ಥಳಿಯ ಆಡಳಿತ ಕೂಡ ಸ್ವಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೊಸೂರಲ್ಲಿ ಗೋಕುಲ ರಸ್ತೆ ಸಂದಿಸುವ ಸ್ಥಳದಲ್ಲಿ ಸುಂದರ ವೃತ್ತ ನಿರ್ಮಾಣ ಮಾಡಬೇಕಾಗಿದೆ. ಫ್ಲೈಓವರ್ ಕಾಮಗಾರಿಗೆ ವೇಗ ನೀಡಬೇಕು. ಹೊಸ ಆಲೋಚನೆಗಳನ್ನು ಅಧಿಕಾರಿಗಳು ಮಾಡಬೇಕು ಎಂದರು.
ಬಸ್ ನಿಲ್ದಾಣ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು, ಅಭಿವೃದ್ಧಿ ಕೆಲಸಗಳಿಗೆ ಎಲ್ಲರೂ ಪಕ್ಷಾತಿತವಾಗಿ ಕೆಲಸ ಮಾಡಬೇಕಿದೆ. ಭವಿಷ್ಯದ ನಗರಗಳ ಅಭಿವೃದ್ಧಿ ವಿಷಯದಲ್ಲಿ ಒಂದು ನಿರ್ವಹಣೆ ವ್ಯವಸ್ಥೆ ಇರಬೇಕು ಎಂಬುದಕ್ಕೆ ಸಹಮತವಿದೆ ಎಂದರು.
ದ್ವೀತಿಯ ಸ್ತರದ ನಗರಗಳಿಗೆ ಕೇಂದ್ರ ಸರ್ಕಾರ ಪ್ರತಿ ವರ್ಷ 200 ಕೋಟಿ ರೂ. ನೀಡುವ ಬದಲು 10 ವರ್ಷದ ಅನುದಾನ ಏಕಕಾಲಕ್ಕೆ ಕೊಟ್ಟರೆ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಬಹುದು. ಅಧಿಕಾರಿಗಳು ಕೂಡ ಸಾರ್ವಜನಿಕರ ಸಹಭಾಗಿತ್ವ ಪಡೆದುಕೊಂಡು ಯೋಜನೆಗಳನ್ನು ಜಾರಿ ಮಾಡಬೇಕು. ಬಿಆರ್ಟಿಎಸ್ ಜಾರಿ ವಿಚಾರದಲ್ಲಿ ಬಹಳಷ್ಟು ಲೋಪಗಳಾಗಿವೆ. ಈ ರೀತಿ ಮುಂಬರುವ ಯೋಜನೆಗಳಲ್ಲಿ ಆಗಬಾರದು ಎಂದು ಸಲಹೆ ನೀಡಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಬಸ್ ಟಿಕೆಟ್ ದರ ಕಡಿಮೆ ಇದೆ. ಹಾಗಾಗಿ ಟಿಕೆಟ್ ದರ ಹೆಚ್ಚಳ ಮಾಡಿರುವುದರಿಂದ ಉತ್ತಮ ನಿರ್ವಹಣೆಗೆ ಅನುಕೂಲವಾಗುತ್ತದೆ ಎಂದು ಸರ್ಮಥಿಸಿಕೊಂಡರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹಳೇ ಬಸ್ ನಿಲ್ದಾಣ ಹೊಸದಾಗಿ ನಿರ್ಮಾಣವಾಗಿದೆ. ಶಾಸಕನಾಗಿ ಸತತ ನಿಗಾ ವಹಿಸಿದ್ದರಿಂದ ಉದ್ಘಾಟನೆಗೆ ಇನ್ನಷ್ಟು ವಿಳಂಬವಾಗುವುದನ್ನು ತಪ್ಪಿಸಲಾಗಿದೆ. ಸುಂದರವಾಗಿರುವ ನಿಲ್ದಾಣವನ್ನು ಸಾರ್ವಜನಿಕರು ಸಂರಕ್ಷಣೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಆಟೋ ನಿಲ್ದಾಣ ಮಾಡಿಕೊಡಬೇಕು. ಕೇವಲ ಸಿಟಿ ಬಸ್ ಅಲ್ಲದೇ ಪರ ಊರುಗಳಿಗೆ ಹೋಗುವ ಬಸ್ಗಳು ಇಲ್ಲಿಗೆ ಬಂದು ಹೋಗುವ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸೂಚಿಸಿದರು.
ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಶಾಸಕರಾದ ಅರವಿಂದ ಬೆಲ್ಲದ, ಪ್ರದಿಪ ಶೆಟ್ಟರ, ಮೇಯರ್ ರಾಮಣ್ಣ ಬಡಿಗೇರ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಕೀರ ಸನದಿ, ಮಾಜಿ ಸಂಸದ ಐ.ಜಿ. ಸನದಿ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜೀಮಪೀರ್ ಖಾದ್ರಿ, ಪಾಲಿಕೆ ಸದಸ್ಯರಾದ ಮಂಗಳಮ್ಮ ಹಿರೇಮನಿ, ರಾಜಣ್ಣ ಕೊರವಿ, ಸಂತೋಷ ಚವ್ಹಾಣ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಬಿಆರ್ಟಿಎಸ್ ವ್ಯವಸ್ಥಾಪಕ ನಿರ್ದೇಶಕಿ ಸಾವಿತ್ರಿ ಕಡಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಪ್ರಾಧಿಕಾರದ ಆಯುಕ್ತ ಡಾ. ಸಂತೋಷಕುಮಾರ ಬಿರಾದಾರ, ಡಿಸಿಪಿ ಮಹಾನಿಂಗ ನಂದಗಾವಿ, ಇತರರು ಉಪಸ್ಥಿತರಿದ್ದರು.
ಮೌನೇಶ ಬಡಿಗೇರ ಮತ್ತು ತಂಡದವರು ನಾಡಗೀತೆ ಹಾಡಿದರು. ಸ್ಮಾರ್ಟ್ ಸಿಟಿ ಕಂಪನಿ ಎಂಡಿ ರುದ್ರೇಶ ಘಾಳಿ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ ಪಾಟೀಲ ವಂದಿಸಿದರು.