ಬೆಂಗಳೂರು: ಕರೊನಾ ಸಂಕಷ್ಟದ ಸಮಯದಲ್ಲೂ ಕೆಲ ಪರೀಕ್ಷೆಗಳು ನಡೆಯುತ್ತಿವೆ. ಕಳೆದ ಶೈಕ್ಷಣಿಕ ವರ್ಷ ಮುಗಿದಿದ್ದು, ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ಮುಗಿದಿದೆ. ಇದೀಗ ಪರೀಕ್ಷೆ ಆರಂಭವಾದರೆ ಮತ್ತೆ ಬಸ್ಪಾಸ್ ಮಾಡಿಸಿಕೊಳ್ಳಬೇಕೆ? ಅಥವಾ ಹಣ ಕೊಟ್ಟು ನಿತ್ಯ ಟಿಕೆಟ್ ಪಡೆದು ಕಾಲೇಜಿಗೆ ಹೋಗಬೇಕೇ? ಎಂಬ ಗೊಂದಲ ಬಹುತೇಕ ವಿದ್ಯಾರ್ಥಿಗಳಲ್ಲಿತ್ತು. ಇದೀಗ ಈ ಗೊಂದಲಕ್ಕೆ ಕೆಎಸ್ಆರ್ಟಿಸಿ ತೆರೆ ಎಳೆದಿದೆ.
ವೃತ್ತಿಪರ, ಪದವಿ, ಸ್ನಾತಕೋತ್ತರ ಪರೀಕ್ಷೆ ಬರೆಯುವವರಿಗೆ ಕಳೆದ ಶೈಕ್ಷಣಿಕ ಸಾಲಿನ ಬಸ್ ಪಾಸ್ ತೋರಿಸಿ ಉಚಿತ ಪ್ರಯಾಣಕ್ಕೆ ಕೆಎಸ್ಆರ್ಟಿಸಿ ಅವಕಾಶ ಕಲ್ಪಿಸಿದೆ. ಇದನ್ನೂ ಓದಿರಿ ಸಚಿವ ಸಿ.ಟಿ.ರವಿಗೆ ಖಡಕ್ ವಾರ್ನಿಂಗ್ ಕೊಟ್ಟ ಎಚ್ಡಿಕೆ !
ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಈ ಸಂಬಂಧ ಸಾರಿಗೆ ಸಚಿವರಿಗೆ ಪತ್ರ ಬರೆದು, ಸೆಪ್ಟೆಂಬರ್ನಲ್ಲಿ ರಾಜ್ಯದ ಕಾನೂನು ವಿಶ್ವವಿದ್ಯಾಲಯ, ತಾಂತ್ರಿಕ ವಿಶ್ವವಿದ್ಯಾಲಯ, ವೃತ್ತಿಪರ ಹಾಗೂ ಸ್ನಾತಕೋತ್ತರ ಪರೀಕ್ಷೆಗಳು ನಡೆಯಲಿವೆ. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಸಾರಿಗೆ ನಿಗಮಗಳಿಂದ ಬಸ್ ಪಾಸ್ ವಿತರಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಹಾಗೂ ನಗರ ಸಾರಿಗೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು.
ಈ ಮನವಿಯನ್ನಾಧರಿಸಿ ಉಪಮುಖ್ಯಮಂತ್ರಿಯೂ ಆದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಕಳೆದ ವರ್ಷದ ಬಸ್ ಪಾಸ್ ತೋರಿಸಿ, ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಕೆಎಸ್ಆರ್ಟಿಸಿ, ಕಳೆದ ವರ್ಷದ ಬಸ್ಪಾಸ್ ಮೂಲಕ ಉಚಿತ ಪ್ರಯಾಣಿಸಬಹುದು ಎಂದು ಆದೇಶ ಹೊರಡಿಸಿದೆ.
ಕರೊನಾ ಸೋಂಕಿನ ಛಾಯೆ ರಾಜ್ಯ ಸಾರಿಗೆ ಸಂಸ್ಥೆಗೂ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಹೀಗಾಗಿ ನಾಲ್ಕು ನಿಗಮಗಳೂ ನಷ್ಟದಲ್ಲಿದೆ. ಅಲ್ಲದೆ ಈ ಬಾರಿ ವಿದ್ಯಾರ್ಥಿಗಳಿಗೆ ಉಚಿತ ಅಥವಾ ರಿಯಾಯಿತಿ ಬಸ್ಪಾಸ್ಗಳನ್ನು ವಿತರಿಸಿದಲ್ಲಿ ಅದರ ಮೊತ್ತವನ್ನು ವಿದ್ಯಾರ್ಥಿ ಅಥವಾ ಸಂಸ್ಥೆಯಿಂದಲೇ ಭರಿಸತಕ್ಕದ್ದು ಎಂದು ಸರ್ಕಾರ ಆದೇಶಿಸಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅಸ್ತು ಎಂದ ಕೆಎಸ್ಆರ್ಟಿಸಿ ನಿರ್ಧಾರವನ್ನು ಪರೀಕ್ಷಾರ್ಥಿಗಳು ಸ್ವಾಗತಿಸಿದ್ದಾರೆ.
ಈ ಬಾರಿ ವಿದ್ಯಾರ್ಥಿಗಳಿಗೆ ಇರಲ್ಲ ರಿಯಾಯ್ತಿ ಬಸ್ಪಾಸ್; ಹಣ ಕೊಡಲ್ಲ ಎಂದು ಸರ್ಕಾರದ ಆದೇಶ
ಕೆಪಿಸಿಸಿ ಕಚೇರಿಗೆ ಅರಮನೆ ಟಚ್, ವಾಸ್ತುದೋಷ ರಿಪೇರಿಗೆ ಬಾಗಿಲನ್ನೇ ಬದಲಿಸಿದ ಡಿಕೆಶಿ