ವಿಜಯವಾಣಿ ಸುದ್ದಿಜಾಲ ಗದಗ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅನುಭವಿ ರಾಜಕಾರಣಿಗಳು. ರಾಜಕೀಯವಾಗಿ ಬೊಮ್ಮಾಯಿ ಅಪಾರ ಅನುಭವ ಹೊಂದಿದ್ದಾರೆ. ಶಾಸಕರಾಗಿ, ವಿಪ ಸದಸ್ಯರಾಗಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅವರ ಗೆಲವ ನಿಶ್ಚಿತ ಎಂದು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ, ಮಾಜಿ ಸಚಿವ ಆಲ್ಕೊಡ ಹನುಮಂತಪ್ಪ ಹೇಳಿದರು
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ಶಿಗ್ಗಾಂವ ತಾಲೂಕನ್ನು ಮಾದರಿ ತಾಲೂಕಾಗಿ ಮಾಡಿದ್ದಾರೆ. ಈ ಬಾರಿ ಅವರು ಲೋಕಸಭೆಯಲ್ಲಿ ಗೆದ್ದು ಹಾವೇರಿ-ಗದಗ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾವಿ ಮಾಡಲಿದ್ದಾರೆ. ಈಗಿರುವ ಕಾಂಗ್ರೆಸ್ ಸರ್ಕಾರಕ್ಕೂ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೂ ಬಹಳ ವ್ಯತ್ಯಾಸ ಇದೆ. ರೈತರಿಗೆ ಕಿಸಾನ್ ಸಮ್ಮಾನ ಯೋಜನೆ ಜಾರಿಗೆ ತಂದು ರೈತರ ಹಿತ ಕಾಪಾಡಿದ್ದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ಯೋಜನೆ ಸ್ಥಗಿತಗೋಳಿಸಿ ರೈತರಿಗೆ ಅನ್ಯಾಯ ಮಾಡಿದೆ. ಇಂತಹ ನಿಷ್ಕ್ರಿಯ ಸರ್ಕಾರದಿಂದ ಜನರು ಭರವಸೆ ಇಟ್ಟುಕೊಳ್ಳುವುದಿಲ್ಲ. ನಗರದ ಕುಡಿಯುವ ನೀರಿನ ಭವಣೆ ನೀಗಿಸಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯ ಆಗುತ್ತಿಲ್ಲ. ಅಧಿಕಾರಕ್ಕೆ ಬಂದು 24ಗಂಟೆಯಲ್ಲಿ ಮುಸಲ್ಮಾನರಿಗೆ ಶೇ. 4 ಮೀಸಲಾತಿ ನೀಡುತ್ತೇವೆ ಎಂದು ಕಅಂಗ್ರೆಸ್ ಹೇಳಿತ್ತು. ಇನ್ನೂ ಮೀಸಲಾತಿ ನೀಡಿಲ್ಲ. ಕಾಂಗ್ರೆಸ್ ಪಕ್ಷ ದಲಿತ ಮುಖಂಡರನ್ನು ನಿರಂತರವಾಗಿ ತುಳಿಯುತ್ತ ಬಂದಿದೆ. ಹಾವೇರಿ -ಗದಗ ಮತಕ್ಷೇತ್ರದಲ್ಲಿ ದಲಿತ ಮುಖಂಡರನ್ನು ಬೆಳೆಯಲು ಬಿಟ್ಟಿಲ್ಲ ಎಂದು ಆರೋಪಿಸಿದರು.
ಗ್ಯಾರಂಟಿ ಹೆಸರಿನಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಕಾಂಗ್ರೆಸ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶ ಒಡೆಯುವ ಕೆಲಸ ನಡೆಯುತ್ತದೆ. ಮತದಾರರು ಇಂತವರನ್ನು ದೂರವಿಡಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜು ಕುರಡಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಎಪ್ ಮುಧೋಳ, ಬಿಜೆಪಿ ಶಹರ ಘಟಕದ ಅಧ್ಯಕ್ಷ ಅನಿಲ ಅಬ್ಬಿಗೇರಿ, ಬಸವರಾಜ ಅಪ್ಪಣ್ಣನವರ, ಬಿಜೆಪಿ ಹಿರಿಯ ಮುಖಂಡ ಎಂ. ಎಸ್. ಕರೀಗೌಡ್ರ, ಅಶೋಕ ಸಂಕಣ್ಣನವರ, ವೀರಣ್ಣ ಬಾಳಿಕಾಯಿ, ಜೆಡಿಎಸ್ ಮಹಿಳಾ ಜಿಲ್ಲಾಧ್ಯಕ್ಷೆ ಮಂಜುಳಾ ಮೇಟಿ ಸೇರಿದಂತೆ ಇತರರು ಇದ್ದರು.