ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ವಿಶ್ವ ಜೇನುನೊಣ ದಿನಾಚರಣೆ ಅಂಗವಾಗಿ ಮೂಡುಬಿದಿರೆ ಆಳ್ವಾಸ್ ಕಾಲೇಜಿನ(ಸ್ವಾಯತ್ತ) ಸ್ನಾತಕೋತ್ತರ ಪ್ರಾಣಿಶಾಸ್ತ್ರ ವಿಭಾಗದ ಜೇನುನೊಣ ಕೃಷಿ ಸರ್ಟಿಫಿಕೆಟ್ ಕೋರ್ಸ್ ವಿದ್ಯಾರ್ಥಿಗಳು ಜೇನುಸಾಕಣೆ ಪ್ರಾಯೋಗಿಕ ತರಬೇತಿಗಾಗಿ ಸಂಪಿಗೆ ಬಳಿಯ ಜೇನು ಸಾಕಣೆ ಘಟಕಕ್ಕೆ ಭೇಟಿ ನೀಡಿದರು.
ಸಂಪಿಗೆಯ ರೋಶುಸ್ ಹನಿ ಫಾರ್ಮ್ ಜೇನು ಸಾಕಣೆದಾರ, ತರಬೇತುದಾರ ರೋಶನ್ ಲಾರೆನ್ಸ್ ಫರ್ನಾಂಡಿಸ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಪ್ರಕೃತಿಯಲ್ಲಿ ಮನುಷ್ಯನಿಲ್ಲವಾದರೂ ಭೂಮಿ ಉಳಿದಿತು. ಆದರೆ ಜೇನುನೊಣಗಳಿಲ್ಲದೆ ಭೂಮಿಯನ್ನು ಊಹಿಸಲು ಸಾಧ್ಯವಿಲ್ಲ. ಪ್ರಕೃತಿಯಲ್ಲಾಗುವ ಶೇ.80 ಪರಾಗಸ್ಪರ್ಶ ಜೇನುನೊಣಗಳಿಂದ ನಡೆಯುತ್ತದೆ. ಆದ್ದರಿಂದ ಭೂಮಿಯ ಮೇಲೆ ಜೇನು ಜಾತಿಯೇ ಶ್ರೇಷ್ಠ ಎಂದರು.
ಜೇನುನೊಣಗಳ ಸಾಕಣೆ, ಜೇನುನೊಣ ಘಟಕದ ಸ್ಥಾಪನೆ, ಗಂಡು ಮತ್ತು ಹೆಣ್ಣು ಜೇನುನೊಣಗಳ ನಡುವಿನ ವ್ಯತ್ಯಾಸ, ಅವುಗಳ ಜೀವಿತಾವಧಿ ಮತ್ತು ಜೇನು ಸಾಕಣೆ ಅಗತ್ಯ ಅಂಶಗಳಾದ ಜೇನು ಸಾಕಣೆ ಪೆಟ್ಟಿಗೆ, ಪ್ರವೇಶ ದ್ವಾರ ಕಡಿತಗೊಳಿಸುವ ಸಾಧನ ಇತ್ಯಾದಿಗಳ ಬಗ್ಗೆ ಆಳವಾದ ಒಳನೋಟಗಳನ್ನು ಒದಗಿಸಿದರು.
ವಿದ್ಯಾರ್ಥಿಗಳು ಜೇನು ತೆಗೆಯುವ ಪ್ರಕ್ರಿಯೆಯನ್ನು ಕೈಯಿಂದ ತಯಾರಿಸಿದ ಜೇನುತುಪ್ಪ ತೆಗೆಯುವ ಯಂತ್ರವನ್ನು ಬಳಸಿ ವೀಕ್ಷಿಸಿದರು. ಜೇನು ಗೂಡುಗಳು ಮತ್ತು ಜೇನು ಕುಟುಂಬ ಖರೀದಿಸುವ ಬಗ್ಗೆ ಮಾರ್ಗದರ್ಶನ ನೀಡಲಾಯಿತು.
ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ.ರಶ್ಮಿ, ಉಪನ್ಯಾಸಕರಾದ ಮಾನಸ ಭಟ್, ಮನು ಡಿ.ಎಲ್., ರಶ್ಮಿತಾ ಅಮೀನ್, ವಿನೇಶ್ ಪೂಜಾರಿ ಉಪಸ್ಥಿತರಿದ್ದರು.
ಜೇನು ಸಾಕಣೆ ವೃತ್ತಿ ಪ್ರಾರಂಭಿಸಲು ಹೆಚ್ಚಿನ ಬಂಡವಾಳವೂ ಅಗತ್ಯವಿಲ್ಲ. ಪ್ರಾಥಮಿಕವಾಗಿ 2-3 ಪೆಟ್ಟಿಗೆ ಮೂಲಕ ಆರಂಭಿಸಿ, ಕ್ರಮೇಣ ಅನುಭವದ ಆಧಾರದ ಮೇಲೆ ಘಟಕವನ್ನು ವಿಸ್ತರಿಸಬಹುದು. ಸರ್ಕಾರದಿಂದಲೂ ಹಲವಾರು ತರಬೇತಿ ಶಿಬಿರಗಳು, ಅನುದಾನಗಳು ಮತ್ತು ಬ್ಯಾಂಕ್ ಸಾಲ ಸೌಲಭ್ಯಗಳು ಲಭ್ಯವಿವೆ. ಜೇನು ಸಾಕಣೆಯ ತರಬೇತಿ ಪಡೆದವರು ಈ ಕ್ಷೇತ್ರದಲ್ಲಿ ಉದ್ಯಮಶೀಲರಾಗಬಹುದು.
ರೋಶನ್ ಲಾರೆನ್ಸ್ ಫರ್ನಾಂಡಿಸ್
ಅಂಬ್ಲಮೊಗರು ಸರ್ಕಾರಿ ಭೂಮಿ ಅತಿಕ್ರಮಣ ವಿರುದ್ಧ ದರಣಿ: ಸುಕುಮಾರ್ ತೊಕ್ಕೊಟ್ಟು ಹೇಳಿಕೆ : ತಹಸೀಲ್ದಾರ್ ಪಾತ್ರ ಶಂಕೆ
https://www.vijayavani.net/thanksgiving-meeting-2