ಬೆಂಗಳೂರು: ಖಾಸಗಿ ಬ್ಯಾಂಕ್ ಅಧಿಕಾರಿಗೆ ಉದ್ಯಮಿ ಸೋಗಿನಲ್ಲಿ ಕರೆ ಮಾಡಿದ ಸೈಬರ್ ಕಳ್ಳ, ಬರೋಬ್ಬರಿ 43.44 ಲಕ್ಷ ರೂ. ಜಮೆ ಮಾಡಿಸಿಕೊಂಡು ವಂಚನೆ ಮಾಡಿದ್ದಾನೆ.
ಈ ಕುರಿತು ಖಾಸಗಿ ಬ್ಯಾಂಕ್ ನೌಕರ ಪಿ.ಎಸ್.ಪಾಟೀಲ್ ದೂರು ನೀಡಿದ್ದಾರೆ. ಇದರ ಅನ್ವಯ ಕೇಂದ್ರ ವಿಭಾಗ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅ.7ರಂದು ಸಂಜೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ರಾಮದುರೈ 3ಎಂ ಪ್ರೈ.ಲಿ. ಕಂಪನಿ ವ್ಯವಸ್ಥಾಪಕ ನಿರ್ದೇಶಕ ಎಂದು ಪರಿಚಯ ಮಾಡಿಕೊಂಡ. ನನ್ನ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ಇದೆ. ನನಗೆ ನಿಶ್ಚಿತ ಠೇವಣಿಯಿಂದ ಲಾಭ ಬರುತ್ತಿಲ್ಲ. ನಿಮ್ಮ ಬ್ಯಾಂಕ್ನಲ್ಲಿ ಖಾತೆ ತೆರೆಯಬೇಕಿದೆ. ಅದಕ್ಕಾಗಿ ನಮ್ಮ ಕಚೇರಿಗೆ ಬಂದು ಭೇಟಿ ಮಾಡಿದರೆ ಒಳಿತು ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಬ್ಯಾಂಕ್ ಅಧಿಕಾರಿ, ಮೊಬೈಲ್ ನಂಬರ್ ಶೇರ್ ಮಾಡಿಕೊಂಡು ಸುಮ್ಮನಾಗಿದ್ದಾರೆ. ಮತ್ತೆ ಸ್ವಲ್ಪ ಸಮಯ ಬಿಟ್ಟು ಕರೆಮಾಡಿದ ರಾಮದುರೈ, ವೆಂಡರ್ಗೆ ಪೇಮೆಂಟ್ ಮಾಡಬೇಕಿದೆ. ನನ್ನ ಖಾತೆಯಲ್ಲಿ ಹಣ ಇದೆ. ಆದರೆ, ಹಣ ಡ್ರಾ ಅಥವಾ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ನಾಳೆ ನನ್ನ ಭೇಟಿಗೆ ಬಂದಾಗ ನಿಮಗೆ ಚೆಕ್ ಕೊಡುತ್ತೆನೆ. ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳಿ. ಈ ತಕ್ಷಣ ವೆಂಡರ್ಗೆ ಹಣ ಕಳುಹಿಸುವಂತೆ ಮನವಿ ಮಾಡಿದ್ದಾರೆ. ಇದನ್ನು ನಂಬಿದ ಅಧಿಕಾರಿ, ಬ್ಯಾಂಕ್ ಖಾತೆಯಿಂದ ರಾಮದುರೈ ಕೊಟ್ಟ ಬ್ಯಾಂಕ್ ಖಾತೆಗೆ 43.44 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ.
ಮಾರನೇ ದಿನ ರಾಮದುರೈ ಭೇಟಿ ಮಾಡಲು ಕರೆ ಮಾಡಿದಾಗ ಸ್ವಿಚ್ ಆಫ್ ಆಯಿತು. ವಂಚನೆ ಮಾಡುವ ಉದ್ದೇಶಕ್ಕೆ ಹಣ ಪಡೆದಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ಅಧಿಕಾರಿ ದೂರು ನೀಡಿದ್ದಾರೆ. ಇದರ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರೈತಪ್ರತಿಭಟನೆ ಸ್ಥಳದಲ್ಲಿ ಯುವಕನ ಶವ; ಕೈಕಾಲು ತುಂಡರಿಸಿ ದೇಹವನ್ನು ನೇತುಹಾಕಿದ್ದರು!
ಬೇಯಿಸಿದ ಮೊಟ್ಟೆ ತಿಂದು ಪ್ರಾಣಬಿಟ್ಟ ಮಹಿಳೆ! ಮೊಟ್ಟೆ ಪ್ರಿಯರನ್ನ ಬೆಚ್ಚಿಬೀಳಿಸುತ್ತೆ ಈ ಘಟನೆ