ಲಖನೌ: ಪಾಕಿಸ್ತಾನದ ಸೀಮಾ ಹೈದರ್, ಭಾರತದ ಅಂಜು ಫಾತಿಮಾ ತಮ್ಮ ಪ್ರಿಯಕರನಿಗಾಗಿ ದೇಶದ ಗಡಿ ದಾಟಿದ ಪ್ರೇಮಕಥೆಗಳು ಮಾಸುವ ಮುನ್ನವೇ ಅದೇ ರೀತಿಯ ಪ್ರೇಮ ಪ್ರಕರಣವೊಂದು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕಳೆದ ಕೆಲ ತಿಂಗಳುಗಳಿಂದ ಗಡಿಯಾಚೆಗಿನ ಪ್ರೇಮಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಲಿಸ್ಟ್ ಗೆ ಇದೀಗ ಹೊಸ ಕಥೆ ಸೇರ್ಪಡೆಯಾಗಿದೆ.
ಬಾಂಗ್ಲಾದೇಶದ ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗುವಿನ ಜೊತೆ ಗಡಿ ದಾಟಿ ಭಾರತಕ್ಕೆ ಬಂದಿದ್ದಾರೆ. ಇಲ್ಲಿ ಬಂದ ನಂತರ ಆಕೆಯ ಪತಿಯ ಸ್ಟೋರಿ ಕೇಳಿ ಮಹಿಳೆ ಕಂಗಾಲಾಗಿದ್ದು, ವಿಡಿಯೋ ಮಾಡಿ ಅಳಲು ತೋಡಿಕೊಂಡಿದ್ದಾರೆ.
ಪ್ರಕರಣದ ಹಿನ್ನಲೆ
ಉತ್ತರಪ್ರದೇಶದ ನೊಯ್ಡಾದ ನಿವಾಸಿ ಸೌರಭ್ ಕಾಂತ್ ತಿವಾರಿ 2017ರಲ್ಲಿ ಕೆಲಸದ ನಿಮಿತ್ತ ಬಾಂಗ್ಲಾದೇಶಕ್ಕೆ ತೆರಳಿದ್ದ. ಕೆಲ ವರ್ಷಗಳ ನಂತರ ಸಾನ್ಯ ಅಖ್ತರ್ ಎಂಬುವವರನ್ನು ಈತ ಮದುವೆಯಾಗಿದ್ದು, ಮಗು ಜನಿಸಿದ ಕೆಲ ತಿಂಗಳುಗಳ ಬಳಿಕ ಸೌರಭ್ ಭಾರತಕ್ಕೆ ವಾಪಸ್ ಆಗಿದ್ದು, ಬಾಂಗ್ಲಾದೇಶದತ್ತ ಹೋಗಿಲ್ಲ.
ಇದನ್ನೂ ಓದಿ: ಹೆಣ್ಣುಮಕ್ಕಳ ರಕ್ಷಣೆಗೆ ಎನ್ಕೌಂಟರ್ ಅಗತ್ಯವೆಂದ ಬಿಜೆಪಿ ಶಾಸಕ
ವರ್ಷಗಳು ಕಳೆದರು ತನ್ನ ಪತಿ ಬಾರದೇ ಇರುವುದರಿಂದ ಅನುಮಾನಗೊಂಡ ಮಹಿಳೆ ಆತನನ್ನು ಹುಡುಕಿಕೊಂಡು ನೊಯ್ಡಾಗೆ ಬಂದಿದ್ದು, ಇಲ್ಲಿ ಆಕೆ ಪತಿಗೆ ಈಗಾಗಲೇ ಬೇರೊಂದು ಮದುವೆಯಾಗಿರುವುದನ್ನು ಕಂಡು ಕಂಗಾಲಾಗಿದ್ದಾಳೆ. ಬಳಿಕ ಈ ಬಗ್ಗೆ ಆತನ ಬಳಿ ಮಾತನಾಡಿದಾಗ ತನ್ನೊಂದಿಗೆ ಸಂಸಾರ ನಡೆಸಲು ಇಷ್ಟವಿಲ್ಲ ಎಂದು ಸೌರಭ್ ಮಹಿಳೆಗೆ ಹೇಳಿ ಕಳುಹಿಸಿದ್ದಾನೆ. ಪತಿಯ ಹೇಳಿಕೆಯಿಂದ ತೀವ್ರ ಅಘಾತಕ್ಕೊಳಗಾದ ಮಹಿಳೆ ತನಗೆ ನ್ಯಾಯಕೊಡಿಸುವಂತೆ ಆಗ್ರಹಿಸಿ ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಮಹಿಳೆಯ ದೂರಿನಲ್ಲೇನಿದೆ?
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿಯೊಬ್ಬರು ಢಾಕಾ ಮೂಲದ ಮಹಿಳೆ ಸಾನ್ಯ ಅಖ್ತರ್ ಸೌರಭ್ ಕಾಂತ್ ತಿವಾರಿ ಎಂಬ ವ್ಯಕ್ತಿಯು ತನ್ನನ್ನು ಏಪ್ರಿಲ್ 14 2021ರಂದು ವಿವಾಹವಾಗಿದ್ದರು ಎಂದು ಹೇಳಿದ್ದಾರೆ. ಮಹಿಳೆ ಮತ್ತು ಸೌರಭ್ಗೆ ಒಬ್ಬ ಮಗ ಕೂಡ ಇದ್ದಾನೆ. ಆದರೆ ಸೌರಭ್ ಈಗಾಗಲೇ ಮದುವೆಯಾಗಿದ್ದು, ಈ ವಿಚಾರವನ್ನು ತನ್ನಿಂದ ಮುಚ್ಚಿಟ್ಟಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.