ಪ್ರಸ್ತುತ ದಿನಗಳಲ್ಲಿ ಅಂಬೇಡ್ಕರ್ ಭವನಗಳು ಬುದ್ಧನ ಕೇಂದ್ರಗಳಾಗಿ ಧಮ್ಮ ದೀಕ್ಷೆ, ಅಂಬೇಡ್ಕರ್ ಸ್ಮರಣೆ ಮಾಡುವ ಕೆಲಸ ನಡೆಯಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಸಮೀಪದ ಚುಂಚರಾಯನಹುಂಡಿ ಗ್ರಾಮದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ, ಸಮುದಾಯ ಭವನ ಹಾಗೂ ಸಾವಿತ್ರಿಬಾಯಿ ಫುಲೆ ಜ್ಞಾನ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಅಂಬೇಡ್ಕರ್ ಅವರ ಜಯಂತಿಯನ್ನು ಭಾರತ ಸೇರಿದಂತೆ ಪ್ರಪಂಚಾದ್ಯಂತ ಆಚರಣೆ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದ ನಂತರ ಸಮಾಜದಲ್ಲಿ ಬದಲಾವಣೆ, ಪರಿವರ್ತನೆಯಾಗುತ್ತಿದೆ. ಅಂಬೇಡ್ಕರ್ ಕಂಡ ಹೋರಾಟದ ಕನಸು ನನಸಾಗುವ ದಿನಗಳು ಬರುತ್ತಿರುವ ಕುರಿತು ವಿಶ್ವಾಸ ಮೂಡಿದೆ ಎಂದು ತಿಳಿಸಿದರು.
ಐಶ್ವರ್ಯ, ಸಂಪತ್ತು ಇದ್ದರೂ ಸಾಮಾಜಿಕ ಸಮಾನತೆ ಇಲ್ಲದಿದ್ದರೆ ಪ್ರಯೋಜನವಿಲ್ಲ ಎನ್ನುವುದನ್ನು ಮನಗಂಡಿದ್ದ ಅಂಬೇಡ್ಕರ್ ಶಿಕ್ಷಣದಿಂದ ಸಮಾನತೆ ದೊರೆಯುವ ನಂಬಿಕೆ ಹೊಂದಿದ್ದರು. ಶಿಕ್ಷಣದಿಂದ ಜ್ಞಾನವಂತರು, ಮೇಧಾವಿಗಳು, ರಾಜಕಾರಣಿಗಳು, ಅಧಿಕಾರಿಗಳು, ಉದ್ಯೋಗಸ್ಥರಾಗಬಹುದೆಂದು ಹೇಳಿದ್ದರು. ಅದಕ್ಕಾಗಿಯೇ ನೂರು ವರ್ಷಗಳ ಹಿಂದೆ ಬೆಳಗಾವಿಯ ನಿಪ್ಪಾಣಿಯಲ್ಲಿ ರಮಾಬಾಯಿ ಅವರೊಂದಿಗೆ ಆಗಮಿಸಿ ಶಾಲೆಯನ್ನು ಉದ್ಘಾಟನೆ ಮಾಡಿರುವ ಕುರುಹು ಇಂದಿಗೂ ಇದೆ ಎಂದು ತಿಳಿಸಿದರು.
ಸಮುದಾಯ ಭವನಗಳ ಜತೆಗೆ ಲೈಬ್ರರಿಗಳನ್ನು ತೆರೆಯಬೇಕು. ಜ್ಞಾನಭಂಡಾರಗಳಾದರೆ ಉತ್ತಮವಾಗಲಿದೆ. ಅಂಬೇಡ್ಕರ್ ಬರೀ ಸಂವಿಧಾನ ತಜ್ಞರಲ್ಲ. ಶಿಕ್ಷಣ, ಕಾರ್ಮಿಕ, ನ್ಯಾಯ, ಕೃಷಿ, ಆರ್ಥಿಕ ತಜ್ಞರಾಗಿದ್ದರು. ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಸಮಗ್ರವಾಗಿ ಅಧ್ಯಯನ ನಡೆಸಿ ಸಂವಿಧಾನದ ಪುಸ್ತಕದಲ್ಲಿ ಅಡಕ ಮಾಡಿದ್ದರು. ದುರ್ಬಲರು, ಶೋಷಿತರು, ಮಹಿಳೆಯರಿಗೆ ಧ್ವನಿ ಸಿಗಲು ಕಾರಣರಾದರು ಎಂದು ಬಣ್ಣಿಸಿದರು.
ಗ್ರಾಪಂನಿಂದ ಪ್ರಧಾನಿ ತನಕವೂ ಒಂದೇ ಮತದ ಹಕ್ಕನ್ನು ಕಲ್ಪಿಸಿದರು. ಸಂವಿಧಾನದ ಆಶಯಗಳನ್ನು ಜಾರಿಗೆ ತರಬೇಕಾದರೆ ಅಧಿಕಾರದಲ್ಲಿ ಕುಳಿತುಕೊಳ್ಳುವವರು ಮುಖ್ಯವೆಂದು ಹೇಳಿ ಮತದ ಪ್ರಾಮುಖ್ಯತೆ ನೀಡಿದರು. ನಾನು ಎಳೆದು ತಂದ ತೇರನ್ನು ಮುಂದಕ್ಕೆ ಎಳೆಯಬೇಕು ಹೊರತು ಹಿಂದಕ್ಕೆ ನೂಕುವಂತೆ ಮಾಡಬೇಡಿ ಎಂದು ಹೇಳಿದ ಮಾತನ್ನು ಅರಿಯಬೇಕು ಎಂದರು.
ಅಂಬೇಡ್ಕರ್ ಪ್ರತಿಮೆ, ಪುತ್ಥಳಿ ಪ್ರತಿಷ್ಠಾಪಿಸುವಾಗ ಎಲ್ಲೋ ಒಂದು ಕಡೆ ತಂದು ಇಡುತ್ತಾರೆ. ಏನಾದರೂ ವ್ಯತ್ಯಾಸವಾದ ಮೇಲೆ ತೊಂದರೆಯಾಗಲಿದೆ. ಎಲ್ಲ ಸಮಾಜದಲ್ಲಿ ಕಿಡಿಗೇಡಿಗಳು ಇರುತ್ತಾರೆ. ಹಾಗಾಗಿ, ನಾವು ಪುತ್ಥಳಿ ಇಡುವಾಗ ಉತ್ತಮ ಜಾಗದಲ್ಲಿ ಇಡಬೇಕು ಎಂದು ಸಲಹೆ ನೀಡಿದರು.
ಸಹಕಾರ ಕ್ಷೇತ್ರದ ಬಗ್ಗೆ ಮಾತನಾಡಿದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಕೆಲವರು ನನ್ನ ವಿರುದ್ಧ ಪ್ರತಿಭಟನೆ ಮಾಡಿದರು. ನೇರವಾಗಿ ಬಂದು ನನ್ನನ್ನು ಕೇಳಿದ್ದರೆ ಹೇಳುತ್ತಿದ್ದೆ. ಆದರೆ, ಕೆಲವರು ವಿರೋಧಿಸಿದರು. ನಾನು ಸೊಸೈಟಿ ಕಾರ್ಯದರ್ಶಿಯಾಗಿದ್ದಾಗ ಚೆಲುವಯ್ಯನನ್ನು ನಿರ್ದೇಶಕನನ್ನಾಗಿ ಮಾಡಿದ್ದೆ. ರಟ್ನಹಳ್ಳಿಯ ದಲಿತ ಸಮುದಾಯದ ಮನೆಯ ಜಗುಲಿಯಲ್ಲಿ ಮಲಗಿ ಎಲ್ಲರಿಗೂ ಸಾಗುವಳಿ ಕೊಡುವಂತೆ ಮಾಡಿದ್ದೆ. ನಾನು ಬರೀ ಭಾಷಣ ಬಿಗಿದು ಹೋಗುವವನಲ್ಲ. ನಾನೇನು ಮಾಡಿದ್ದೇನೆಂದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದರು.
ಉದ್ಯಮಿ ಬೆಳವಾಡಿ ಶಿವಕುಮಾರ್, ಜಿಪಂ ಮಾಜಿ ಸದಸ್ಯೆ ರೂಪಾ ಲೋಕೇಶ್, ತಾಪಂ ಮಾಜಿ ಸದಸ್ಯ ಸುರೇಶ್ ಕುಮಾರ್, ಚಿಕ್ಕೀರಯ್ಯ, ಮುಖಂಡರಾದ ಡಾ.ಮೂರ್ತಿ, ರವಿ, ರಘು, ಲೋಕೇಶ್, ಶಿವಕುಮಾರ್, ಸುರೇಶ್, ಮಹದೇವಯ್ಯ, ವೆಂಕಟರಮಣ ಇತರರಿದ್ದರು.