ಜೈಪುರ: ತಮ್ಮ ಮನೆಯ ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿದ್ದ ಹಸುವನ್ನು ಕಳುವು ಮಾಡಿದರ ಕುರಿತು ಪೊಲೀಸ್ ಠಾಣೆಗೆ ನಿರಂತರವಾಗಿ ಭೇಟಿ ನೀಡಿ ರೈತನೊಬ್ಬ ತನ್ನ ಆಕಳನ್ನು ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯೂ ರಾಜಸ್ಥಾನದ ಬಿಕಾನೇರ್ನಲ್ಲಿ ನಡೆದಿದ್ದು ಕಳ್ಳತನವಾಗಿದ್ದ ಹಸುವನ್ನು ವಾಪಸ್ ಪಡೆಯಲು ರೈತ ಇನ್ನಿಲ್ಲದ ಕಸರತ್ತು ಮಾಡಿರುವುದು ಇದೀಗ ದೊಡ್ಡ ಸುದ್ದಿಯಾಗಿದೆ.
ಹಸು ಕಳುವು
ತನ್ನ ಆಕಳು ಕಳುವಾಗಿದ್ದಕ್ಕೆ ಮೊದಲು ದುಲಾರಾಮ್(70) ಫೆಬ್ರವರಿ 11,2021ರರಂದು ದೂರು ನೀಡಿದಾಗ ಪೊಲೀಸರು ಸಕಾರಾತ್ಮಕವಾಗಿ ಸ್ಪಂದಿಸಿ FIR ದಾಖಲಿಸಿಕೊಂಡಿದ್ದಾರೆ. ದಿನ ಕಳೆದಂತೆ ರೈತನಿಗೆ ತನ್ನ ಹಸು ವಾಪಸ್ ಸಿಗುತ್ತದೆ ಎನ್ನುವ ಯಾವುದೇ ಲಕ್ಷಣಗಳು ಗೋಚರಿಸಲಿಲ್ಲ.
ಈ ಕುರಿತು ಪೊಲೀಸ್ ಠಾಣೆಗೆ ನಿರಂತರವಾಗಿ ಭೇಟಿ ನೀಡುತ್ತಿದ್ದ ರೈತನಿಗೆ ಪೊಲೀಸರು ಇಲ್ಲಸಲ್ಲದ ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಇದರಿಂದ ತೀವ್ರವಾಗಿ ಕುಪಿತಗೊಂಡ ರೈತ ನಂತರದ ದಿನಗಳಲ್ಲಿ ವಿಭಿನ್ನವಾಗಿ ಹೋರಾಡುವ ಮೂಲಕ ಯಶಸ್ವಿಯಾಗಿದ್ದಾನೆ.
ಒಮ್ಮೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬಿಕಾನೇರ್ಗೆ ಭೇಟಿ ನೀಡುತ್ತಿದ್ದಾರೆ ಎಂಬ ವಿಷಯ ತಿಳಿದ ರೈತ ಸಿಎಂ ಬರುವ ರಸ್ತೆಯಲ್ಲಿ ಇರುವ ಮೊಬೈಲ್ ಟವರ್ ಒಂದನ್ನು ಏರಿ ತನ್ನ ಬೇಡಿಕೆ ಈಡೇರುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಹಠ ಹಿಡಿದಿದ್ದಾನೆ.
ಹುಡುಕಿಕೊಟ್ಟ ಪೊಲೀಸರು
ಈ ವೇಳೆ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು ರೈತನ ಮನವೊಲಿಸಿ ಕಳುವಾಗಿರುವ ಆಕುಳನ್ನು ಹುಡುಕಿಕೊಡುವುದಾಗಿ ಭರವಸೆ ನೀಡಿದ್ದಾರೆ. ಆ ನಂತರ ಒಂದು ದಿನ ಕಳುವಾದ ಹಸುವಿನ ಜೊತೆ ಬಂದ ಪೊಲೀಸರು ಅದನ್ನು ಹಸ್ತಾಂತರಿಸಿ DNA ರಿಪೋರ್ಟ್ ಸಹ ನೀಡಿದ್ಧಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರೈತ ಕಳೆದ ಎರಡು ವರ್ಷಗಳಿಂದ ಹೋರಾಡುತ್ತಿದ್ದೇನೆ. ನಿತಂತರ ಪ್ರತಿಭಟನೆಗಳ ಫಲವಾಗಿ ಇಂದು ಜಯ ಸಿಕ್ಕಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.