ಬೆಳಗಾವಿ: ಕರೊನಾ ವೈರಸ್ ಸೋಂಕು ಹರಡುವ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆ ಮಾಡಿದ್ದರೂ ಎಪಿಎಂಸಿ ಮಾರುಕಟ್ಟೆಗೆ ಜನರು ಹರಿದು ಬರುತ್ತಿದ್ದು ಬೆಳಗಾವಿ ಈಗ ಬೆ-ಲಗಾಮ್ ಎಂಬಂತಾಗಿದೆ.
ಶುಕ್ರವಾರ ಬೆಳಗ್ಗೆಯೇ ಎಪಿಎಂಸಿ ಮಾರುಕಟ್ಟೆಯಲ್ಲಿ ಅಪಾರ ಮಂದಿ ಜನರು ಸೇರಿದ್ದರು. ಕರೊನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ ಆಗಿರುವುದರಿಂದ ಮಾರುಕಟ್ಟೆಯಲ್ಲಿ ಅಧಿಕ ಜನರು ಸೇರಿರುವುದು ಜಿಲ್ಲಾಡಳಿತಕ್ಕೆ ತಲೆ ನೋವು ತಂದಿದೆ.
ಜನರನ್ನು ಚದುರಿಸಲು ಪೊಲೀಸರು ಎಷ್ಟೇ ಪ್ರಯತ್ನ ಮಾಡುತ್ತಿದ್ದರೂ ಜನ ಮಾರುಕಟ್ಟೆ ಬರುತ್ತಿರುವುದು ಮಾತ್ರ ನಿಂತಿಲ್ಲ. ಬೆಳಗಾವಿ ಪೊಲೀಸ್ ಆಯುಕ್ತರೇ ಮನವಿ ಮಾಡಿಕೊಂಡರು ಜನರು ಹೊರಗಡೆ ಬರುತ್ತಿದ್ದಾರೆ.
ಲಾಠಿ ಪ್ರಹಾರ: ಖಡೇ ಬಜಾರ್, ಬೋಗರವೆಸ್, ಗೋವಾವೆಸ್, ಚನ್ನಮ್ಮವೃತ್ತಗಳಲ್ಲಿ ಗುಂಪು ಗೂಡಿದ್ದ ಜನರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದರು.
ಬೆಳಗಾವಿಯಲ್ಲಿ ಸಾರ್ವಜನಿಕರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಮನವಿಗೆ ಸ್ಪಂದಿಸಿ ಜನರು ಮನೆ ಸೇರಿಕೊಳ್ಳದಿದ್ದರೆ ಲಾಠಿ ಪ್ರಹಾರ ನಡೆಸುವುದು ಸೇರಿದಂತೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.