ಚಿಟಗುಪ್ಪ: ಗೋವಾ ವಿಮೋಚನಾ ಚಳವಳಿಯಲ್ಲಿ ಹುತ್ಮಾತರಾದ ಬೀದರ್ ಜಿಲ್ಲಾಚಿಟಗುಪ್ಪ ಪಟ್ಟಣದ ನಿವಾಸಿಯಾಗಿದ್ದ ಸ್ವತಂತ್ರ ಸೇನಾನಿ ಬಸವರಾಜ ಬಗದಲಕರ್ ಕುಟುಂಬಕ್ಕೆ ೧೦ ಲಕ್ಷ ರೂ. ಗೌರವಧನ ಮತ್ತು ಪ್ರಶಸ್ತಿ ಪತ್ರದೊಂದಿಗೆ ಸನ್ಮಾನ ದೊರೆತಿದೆ.
ಪಟಜಿ ನಗರದ ವಿಧಾನಸಭೆಯಲ್ಲಿ ಅಲ್ಲಿನ ಸರ್ಕಾರ ಡಿ.೧೮ರಂದು ಗೋವಾ ವಿಮೋಚನಾ ಚಳವಳಿ ಹುತಾತ್ಮರ ಸ್ಮರಣಾರ್ಥ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಿಟಗುಪ್ಪದ ಬಸವರಾಜ ಬಗದಲಕರ್ (ಹುಡಗಿ) ಪುತ್ರ, ಪುರಸಭೆ ಮಾಜಿ ಅಧ್ಯಕ್ಷರಾದ ಹಿರಿಯ ಸದಸ್ಯ ದಿಲೀಪಕುಮಾರ ಇತರ ಕುಟುಂಬಸ್ಥರಿಗೆ ತಲಾ ೧೦ ಲಕ್ಷ ಗೌರವಧನ ಹಾಗೂ ಪ್ರಶಸ್ತಿ ಪತ್ರವನ್ನು ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ ನೀಡಿ ಗೌರವಿಸಿದರು.
ಬೀದರ್ ತಾಲೂಕಿನ ಬಗದಲ್ ಗ್ರಾಮದ ಹುಡಗಿ ಮನೆತನದ ಬಸವರಾಜ ಬಗದಲಕರ್ ಚಿಟಗುಪ್ಪದಲ್ಲಿರುವ ಸಹೋದರ ಮಾವನ ಮನೆಯಲ್ಲಿ ಉಳಿದು ಸ್ವತಂತ್ರ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಗೋವಾ ವಿಮೋಚನೆಗಾಗಿ ಡಾ.ಮನೋಹರ ಲೋಹಿಯಾ ಕರೆಗೆ ಓಗೊಟ್ಟು ಚಳವಳಿಯಲ್ಲಿ ಧುಮುಕಿದ್ದ ಚಿಟಗುಪ್ಪದ ಬಸವರಾಜ ಸೇರಿ ನಾನಾ ಕಡೆಯ ೭೪ ಜನ ಹುತಾತ್ಮರಾಗಿದ್ದರು. ಅವರ ಸ್ಮರಣಾರ್ಥ ಕುಟುಂಬದವರಿಗೆ ಅಹ್ವಾನಿಸಿ ಸನ್ಮಾನ ಮಾಡಿದ್ದು ವಿಶೇಷ.
ಚಳವಳಿಯಲ್ಲಿ ಅನೇಕರ ತ್ಯಾಗ ಬಲಿದಾನದಿಂದ ನಾವಿಂದು ಸ್ವತಂತ್ರರಾಗಿದ್ದೇವೆ. ಹುತಾತ್ಮರಾದವರ ಕುಟುಂಬದವರು ಇದುವರೆಗೆ ಗೌರವಧನ ಅಥವಾ ಇತರ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿಲ್ಲ. ಆದರೆ ನಮ್ಮ ಸರ್ಕಾರ ಹುತಾತ್ಮರ ಗೌರವಾರ್ಥ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.
| ಡಾ.ಪ್ರಮೋದ ಸಾವಂತ ಗೋವಾ ಮುಖ್ಯಮಂತ್ರಿ
ದೇಶಕ್ಕಾಗಿ ತಂದೆ ಹುತಾತ್ಮರಾದ ನಂತರ ತಾಯಿ ಆಶಯದಂತೆ ಸರ್ಕಾರಕ್ಕೆ ಯಾವುದೇ ಸಹಾಯ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿಲ್ಲ. ಈಗ ಗೋವಾ ಸರ್ಕಾರ ಸ್ವಯಂ ಪ್ರೇರಣೆಯಿಂದ ಹುತಾತ್ಮ ಕುಟುಂಬದವರನ್ನು ಸನ್ಮಾನಿಸಿ ತಲಾ ೧೦ ಲಕ್ಷ ರೂ. ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಿರುವುದು ಸಂತಸ ತಂದಿದೆ.
| ದಿಲೀಪಕುಮಾರ ಬಗದಲಕರ್ ಹುತಾತ್ಮ ಬಸವರಾಜ ಪುತ್ರ ಹಾಗೂ ಪುರಸಭೆ ಹಿರಿಯ ಸದಸ್ಯ ಚಿಟಗುಪ್ಪ
ಸ್ವತಂತ್ರ ಸೇನಾನಿಗಳ ಸ್ಮಾರಕ ನಿರ್ಮಾಣವಾಗಲಿ: ಸ್ವತಂತ್ರ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಬಸವರಾಜ ಬಗದಲಕರ್ ಚಿಟಗುಪ್ಪದಲ್ಲಿನ ತನ್ನ ಮನೆಗೇ ಕನ್ನ ಹಾಕಿಸಿ ಬಂದ ಹಣವನ್ನು ಚಳವಳಿಯಲ್ಲಿ ಭಾಗಿಯಾದವರ ಖರ್ಚು-ವೆಚ್ಚಕ್ಕೆ ವಿನಿಯೋಗಿಸಿದ್ದರು. ಚಿಟಗುಪ್ಪ ಮತ್ತು ಬಗದಲ್ ಗ್ರಾಮದ ಮಧ್ಯಭಾಗದಲ್ಲಿ ಹುತಾತ್ಮ ಬಸವರಾಜ ಬಗದಲಕರ್(ಹುಡಗಿ) ವೃತ್ತವಿದೆ. ದೇಶಕ್ಕಾಗಿ ಮಡಿದ ಇಂಥ ಸ್ವತಂತ್ರ ಸೇನಾನಿಗಳ ಕುರಿತು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಕರ್ನಾಟಕ ಸರ್ಕಾರ ಸ್ಮಾರಕಗಳನ್ನು ನಿರ್ಮಿಸಬೇಕು ಎಂಬುದು ಹಿರಿಯ ನಾಗರಿಕರ ಒತ್ತಾಸೆಯಾಗಿದೆ.