ಹನಗೋಡು: ನಾಗರಹೊಳೆ ಅರಣ್ಯ ಪ್ರದೇಶ ಸೇರಿದಂತೆ ಹನಗೋಡು ಸುತ್ತಮುತ್ತ ಮಂಗಳವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಬಿರುಗಾಳಿ ಸಹಿತ ಮಳೆಯಾಗಿದೆ.
ಈ ವ್ಯಾಪ್ತಿಯ ಒಂದು ಭಾಗದಲ್ಲಿ ಮಳೆಯಿಲ್ಲದೆ ಜೋಳ, ತಂಬಾಕು, ಶುಂಠಿ ನಾಟಿ ಮಾಡಿದ್ದ ರೈತರು ಕಂಗಾಲಾಗಿದ್ದರು. ಇದೀಗ ಉತ್ತಮ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಬೀರಿದೆ.
ಹನಗೋಡು ಬಸ್ ನಿಲ್ದಾಣದ ಬಳಿ ಸ್ವಾಮಿ ಎಂಬುವರು ಗೂಡ್ಸ್ ವಾಹನವನ್ನು ನಿಲ್ಲಿಸಿ ಪಕ್ಕದ ಅಂಗಡಿಯಲ್ಲಿ ಆಶ್ರಯ ಪಡೆದಿದ್ದರು. ಬಿರುಗಾಳಿಯ ರಭಸಕ್ಕೆ ಗೂಡ್ಸ್ ವಾಹನದ ಮೇಲೆ ಮರದ ಕೊಂಬೆ ಮುರಿದು ಬಿದ್ದು ವಾಹನ ಜಖಂಗೊಂಡಿದೆ. ಗ್ರಾಮದ ತಗ್ಗು ಪ್ರದೇಶದ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಸೋಮಪ್ಪ ಎಂಬುವರ ಆರ್ಸಿ ಸಿ ಮನೆ ಮೇಲೆ ಮಳೆಯ ನೀರು ಸಂಗ್ರಹವಾಗಿ ಕೊಳದಂತೆ ನಿಂತಿದೆ.
ಹಿಂಡಗುಡ್ಲು ಗ್ರಾಮದ ಶಿವಯ್ಯ ಎಂಬುವರ ಪುತ್ರ ರಾಜೇಶ್ ಮನೆ ಛಾವಣಿ ಶೀಟುಗಳು ಬಿರುಗಾಳಿಗೆ ಹಾರಿ ಹೋಗಿವೆ. ಪರಿಣಾಮ ಮನೆಯಲ್ಲಿದ್ದ ಧವಸ ಧಾನ್ಯ ಮಳೆ ನೀರಿನಲ್ಲಿ ನೆನೆದು ಹಾಳಾಗಿವೆ. ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ.