ನವದೆಹಲಿ: ಜೊಮ್ಯಾಟೋ ಮೂಲಕ ಫುಡ್ ಡೆಲಿವರಿ ಮಾಡುವವರು ಆಗಾಗ ಒಳ್ಳೆಯದಕ್ಕೋ ಕೆಟ್ಟದಕ್ಕೋ ಸುದ್ದಿಯಾಗುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಜೊಮ್ಯಾಟೋ ಡೆಲಿವರಿ ಯುವಕನೊಬ್ಬ ಸುದ್ದಿಯಾಗಿದ್ದಾನೆ. ಹೀಗೆ ಆತ ಸುದ್ದಿಯಾಗಿ ಗಮನ ಸೆಳೆಯಲು ಕಾರಣ ಆತನಿಗೆ ಗ್ರಾಹಕರಿಂದ ಕೊಡುಗೆಯಾಗಿ ಸಿಕ್ಕ ಬೈಕ್.
ಒಂದೇ ಒಂದು ಆರ್ಡರ್ ಡೆಲಿವರಿ ಕೊಟ್ಟಿದ್ದರಿಂದ ಈ ಜೊಮ್ಯಾಟೋ ಯುವಕನ ಬದುಕಿನ ದೊಡ್ಡ ಕಷ್ಟವೊಂದು ಪರಿಹಾರವಾಗಿದೆ. ಮಹಮದ್ ಅಖೀಲ್ ಎಂಬ ಈ ಡೆಲಿವರಿ ಯುವಕನಿಗೆ ಹೀಗೆ ದೊಡ್ಡ ಸಹಾಯವಾಗಿ ಬಂದಿರುವುದು ಜೊಮ್ಯಾಟೋ ಮೂಲಕ ಫುಡ್ ಆರ್ಡರ್ ಮಾಡಿದ್ದ ರುಬಿನ್ ಮುಖೇಶ್ ಎಂಬ ಗ್ರಾಹಕ.
ಹೈದರಾಬಾದ್ನ ಈ ಟೆಕಿ ರುಬಿನ್ ಮಹೇಶ್ ಜೂ. 14ರಂದು ಜೊಮ್ಯಾಟೋದಲ್ಲಿ ಆರ್ಡರ್ ಮಾಡಿದ್ದರು. ಆ ಆರ್ಡರ್ ಡೆಲಿವರಿಗೆ ಬಂದಿದ್ದ ಮಹಮದ್ ಅಖೀಲ್, ಕೆಳಕ್ಕೆ ಬಂದು ಅದನ್ನು ಪಡೆಯುವಂತೆ ಹೇಳಿದ್ದಾನೆ. ನಾನು ಆ ದಿನ ಕೆಳಕ್ಕೆ ಹೋಗಿ ಆರ್ಡರ್ ಪಡೆಯಲು ಹೋದಾಗ ಆ ವ್ಯಕ್ತಿ ಸೈಕಲ್ ಮೇಲೆ ಕೂತಿದ್ದ. ಅದರಲ್ಲೂ 20 ಕಿ.ಮೀ. ದೂರವನ್ನು ಆ ಮಳೆಯಲ್ಲಿ ಬರೀ 9 ನಿಮಿಷದಲ್ಲಿ ಸೈಕಲ್ನಲ್ಲೇ ಕ್ರಮಿಸಿಕೊಂಡು ಬಂದು ಡೆಲಿವರಿ ನೀಡಿದ್ದ. ಈತನಿಗೆ ನಾವೇನಾದರೂ ಸಹಾಯ ಮಾಡಲೇಬೇಕು ಎಂದು ಆಹಾರಪ್ರಿಯರು ಇರುವ ಫೇಸ್ಬುಕ್ ಗ್ರೂಪ್ ಒಂದರಲ್ಲಿ ಪೋಸ್ಟ್ ಮಾಡಿದ್ದೆ ಎಂದು ರುಬಿನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…
ರುಬಿನ್ ಪೋಸ್ಟ್ ನೋಡಿ ಅಖೀಲ್ ಕಷ್ಟಕ್ಕೆ ಮರುಗಿದ ಆಹಾರಪ್ರಿಯರು ಕೆಲವೇ ಗಂಟೆಗಳಲ್ಲಿ ಕ್ರೌಡ್ಫಂಡ್ ಮಾಡಿ 73,000 ರೂ. ಸಂಗ್ರಹಿಸಿದ್ದಾರೆ. ಅಖೀಲ್ಗೆ ಬೈಕ್ ಕೊಳ್ಳಲು 65,000 ರೂ. ಅಗತ್ಯವಿದ್ದಿದ್ದರೂ ಹೆಚ್ಚುವರಿಯಾಗಿಯೇ ಹಣ ಸಂಗ್ರಹವಾಗಿದ್ದು, ಅವರು ಜೂ. 18ರಂದು ಬೈಕ್ ಜತೆ ಹೆಲ್ಮೆಟ್, ಜರ್ಕಿನ್, ಸ್ಯಾನಿಟೈಸರ್ಗಳನ್ನೂ ಕೊಟ್ಟು ಉಪಕಾರ ಮಾಡಿದ್ದಾರೆ.
ಚಮ್ಮಾರರೊಬ್ಬರ ಪುತ್ರನಾಗಿರುವ ಅಖೀಲ್, ಬಿ.ಟೆಕ್ ಮೂರನೇ ವರ್ಷದ ವಿದ್ಯಾರ್ಥಿ. ನಾನು ಒಂದು ವರ್ಷದಿಂದ ಸೈಕಲ್ನಲ್ಲೇ ಜೊಮ್ಯಾಟೋ ಡೆಲಿವರಿ ಮಾಡುತ್ತಿದ್ದೇನೆ. ನನಗೆ ಈಗ ಬೈಕ್ ಸಿಕ್ಕಿರುವುದರಿಂದ ದಿನಕ್ಕೆ 20-25 ಪಾರ್ಸೆಲ್ ಡೆಲಿವರಿ ಮಾಡಬಹುದು. ಬೈಕ್ ಕೊಡಿಸಿದ ಎಲ್ಲರಿಗೂ ಧನ್ಯವಾದ ಎಂದು ಹೇಳಿದ್ದಾನೆ. ಅಂದಹಾಗೆ ಶಿಕ್ಷಣಕ್ಕೆ ಬೇಕಾದ ಖರ್ಚು ಹೊಂದಿಸಲು ಅಖೀಲ್ ಜೊಮ್ಯಾಟೋ ಡೆಲಿವರಿ ಕೆಲಸ ಮಾಡುತ್ತಿದ್ದಾನೆ. (ಏಜೆನ್ಸೀಸ್)
ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!
ಇದು ಲಸಿಕೆಗೂ ಸವಾಲೊಡ್ಡುವ ಕರೊನಾ ವೈರಸ್; ಚಿಂತೆ ಹೆಚ್ಚಿಸಿದೆ ಈ ಹೊಸ ವೇರಿಯಂಟ್!