ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಯೋಗರಾಜ್ ಭಟ್ ನಿರ್ದೇಶಿಸುತ್ತಿರುವ ದೇಸೀ ಕಲೆ ಕುಸ್ತಿ ಕುರಿತ ಸಿನಿಮಾ ‘ಗರಡಿ’. ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಇತ್ತೀಚೆಗಷ್ಟೆ ಚಿತ್ರತಂಡ ಮೂರನೇ ಸಾಂಗ್ ರಿಲೀಸ್ ಮಾಡಿದೆ. ‘ದಯಮಾಡಿ ಉರಿಸಬೇಡ ಬಡವನ ಹೃದಯ’ ಎಂದು ಸಾಗುವ ಈ ಹಾಡಿಗೆ ಖುದ್ದು ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ವಿ. ಹರಿಕೃಷ್ಣ ಸಂಗೀತದಲ್ಲಿ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಹಾಡಿನ ಬಗ್ಗೆ ಯೋಗರಾಜ್ ಭಟ್, ‘ಎರಡನೇ ಲಾಕ್ಡೌನ್ ಸಮಯದಲ್ಲೇ ಈ ಹಾಡು ಬರೆದಿದ್ದೆ. ಬಾದಾಮಿ, ಬೆಂಗಳೂರು ಸೇರಿ ಹಲವೆಡೆ ಈ ಹಾಡಿನ ಚಿತ್ರೀಕರಣ ಮಾಡಿದ್ದೇವೆ. ಹಾಡಿನ ಮೊದಲ ಸಾಲೇ ಎಲ್ಲರ ಮನಸ್ಸಿಗೆ ಉತ್ತರಿವಾಗುತ್ತದೆ’ ಎಂದರು.
ಇದನ್ನೂ ಓದಿ : ಮಲೆನಾಡಿನಲ್ಲಿ ನಡೆಯುವ ನಿಗೂಢ ಘಟನೆಗಳ ಸುತ್ತ…; ‘ಶಾಖಾಹಾರಿ’ ರಂಗಾಯಣ ರಘು
ನಿರ್ಮಾಪಕ, ನಟ ಬಿ.ಸಿ. ಪಾಟೀಲ್, ‘ಈ ಹಾಡು ಕೇಳಿ ನನಗೆ ‘ಮುಂಗಾರು ಮಳೆ’ ಚಿತ್ರದ ‘ಅನಿಸುತಿದೆ ಯಾಕೋ ಇಂದು’ ಸಾಂಗ್ ನೆನಪಾಯಿತು. ಈ ಸಾಂಗ್ ಅಷ್ಟು ಚೆನ್ನಾಗಿ ಮೂಡಿಬಂದಿದೆ. ನವೆಂಬರ್ 1ರಂದು ರಾಣೆಬೆನ್ನೂರಿನಲ್ಲಿ ಅದ್ದೂರಿ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ನಟ ದರ್ಶನ್ ಕಾರ್ಯಕ್ರಮಕ್ಕೆ ಬರಲಿದ್ದಾರೆ. ನ. 10ರಂದು ಸಿನಿಮಾ ರಿಲೀಸ್’ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ‘ಕೃಷ್ಣಂ ಪ್ರಣಯ ಸಖಿ’ ನಾಯಕಿ ಶರಣ್ಯಾ ಶೆಟ್ಟಿ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ.
ನಾಯಕ ಯಶಸ್ ಸೂರ್ಯ, ‘ಈ ಹಾಡಿಗಾಗಿ ನಾನು ಸಾಕಷ್ಟು ಶ್ರಮಪಟ್ಟಿದ್ದೇನೆ. ಇದನ್ನು ನನಗಾಗಿಯೇ ಬರೆದಂತಿದೆ. ದರ್ಶನ್ ಸರ್ ಕೂಡ ಈ ಸಾಂಗ್ ಕೇಳಿ ಇಷ್ಟಪಟ್ಟಿದ್ದರು’ ಎಂದರು. ಯಶಸ್ ಸೂರ್ಯಗೆ ಚಿತ್ರದಲ್ಲಿ ಸೋನಲ್ ಮೊಂತೇರೊ ನಾಯಕಿಯಾಗಿದ್ದು, ಬಿ.ಸಿ.ಪಾಟೀಲ್, ನಿಶ್ವಿಕಾ ನಾಯ್ಡು, ಧರ್ಮಣ್ಣ, ರವಿಶಂಕರ್, ಪೃಥ್ವಿ ಶಾಮನೂರು ಪ್ರಮುಖ ತಾರಾಗಣದಲ್ಲಿದ್ದಾರೆ.