ಮುಂಬೈ: ಲೇಖಕಿಯೊಬ್ಬರು ತಮ್ಮ ಕಥೆಗಳನ್ನು ಸಿನಿಮಾ ಮಾಡುವ ಭರವಸೆಯನ್ನು ಈಡೇರಿಸಲಿಲ್ಲ ಎಂದು ಬಾಲಿವುಡ್ ನಟ ರಣದೀಪ್ ಹೂಡ ಮತ್ತಿತರರಿಗೆ ಲೀಗಲ್ ನೋಟೀಸ್ ನೀಡಿದ್ದಾರೆ. ಸೂರತ್ನಲ್ಲಿ ಚಲನಚಿತ್ರ ಕಥೆಗಾರ್ತಿ ಮತ್ತು ಕವಿ ಎನ್ನಲಾದ ಪ್ರಿಯಾಂಕಾ ಶರ್ಮ ಎಂಬುವರು ಈ ನೋಟೀಸ್ ನೀಡಿದ್ದು, ಹೂಡ ಅವರಿಂದ 10 ಕೋಟಿ ರೂ. ಪರಿಹಾರದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ತಮ್ಮ 1200 ಹಾಡುಗಳನ್ನು ಮತ್ತು 40 ಕಥೆಗಳನ್ನು ರಣದೀಪ್ ಹೂಡ ಮತ್ತು ಅವರ ಕುಟುಂಬದ ಸದಸ್ಯರಿಗೆ, ರಣದೀಪ್ರ ಮ್ಯಾನೇಜರ್ ಪಾಂಚಾಲಿ ಚೌಧರಿಗೆ ಮತ್ತು ಮೇಕಪ್ ಕಲಾವಿದೆ ರೇಣುಕಾ ಪಿಳ್ಳೈಗೆ ಈಮೇಲ್ ಮತ್ತು ವಾಟ್ಸಾಪ್ ಮೂಲಕ ಕಳುಹಿಸಿರುವುದಾಗಿ ಆಕೆಯ ವಕೀಲರಾದ ರಜತ್ ಕಲ್ಸನ್ ನೋಟೀಸಿನಲ್ಲಿ ಹೇಳಿದ್ದಾರೆ. ಹೂಡ ತಮ್ಮ ಕಥೆಗಳನ್ನು ಸಿನಿಮಾ ಮಾಡಲು ಬಳಸುವುದಾಗಿ ಭರವಸೆ ನೀಡಿ ಈಡೇರಿಸಿಲ್ಲ. ನಂತರ ತಮ್ಮ ಬರಹಗಳನ್ನು ವಾಪಸ್ ಕೇಳಿದರೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಲೇಖಕಿ ಪ್ರಿಯಾಂಕಾ ಆರೋಪಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ನಿಮ್ಮ ಕನ್ನಡ ಪ್ರೀತಿಗೆ ಚಿರಋಣಿ: ಮಗಳ ವಿಡಿಯೋಗೆ ಕನ್ನಡ ಹಾಡು ಹಾಕಿದ ವಾರ್ನರ್ಗೆ ಕನ್ನಡಿಗರ ಸಲಾಂ
ಈ ಬಗ್ಗೆ ಪ್ರಿಯಾಂಕಾ ಶರ್ಮ ಅವರು ಹರಿಯಾಣ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ನ ರೇಂಜ್ ಕಮಿಷನರ್ಗೆ ದೂರು ನೀಡಿದ್ದಾರೆ ಎನ್ನಲಾಗಿದ್ದು, ಕಳೆದ 8 ವರ್ಷಗಳಿಂದ ತಮ್ಮನ್ನು ಈ ನಿಟ್ಟಿನಲ್ಲಿ ಶೋಷಿಸಿದ್ದಕ್ಕೆ ಪರಿಹಾರವಾಗಿ 10 ಕೋಟಿ ರೂಪಾಯಿ ನೀಡಬೇಕೆಂದು ನೋಟೀಸಿನಲ್ಲಿ ಹೇಳಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)