ಕೆಲವು ವರ್ಷಗಳ ಹಿಂದೆ ‘ಎಳೆಯರು ನಾವು ಗೆಳೆಯರು’ ಎಂಬ ಚಿತ್ರದ ಮೂಲಕ ನಿರ್ದೇಶಕರಾದ ನಟ ವಿಕ್ರಮ್ ಸೂರಿ, ಇದೀಗ ಸದ್ದಿಲ್ಲದೆಯೇ ಇನ್ನೊಂದು ಚಿತ್ರ ಶುರು ಮಾಡಿದ್ದಾರೆ. ಅದೇ ‘ಚೌಕಾಬಾರ’. ಬಹುಶಃ ಲಾಕ್ಡೌನ್ ಇಲ್ಲದಿದ್ದರೆ, ಈ ಚಿತ್ರ ಮುಗಿದು ಬಿಡುಗಡೆಯಾಗುತ್ತಿತ್ತೋ ಏನೋ? ಆದರೆ, ಲಾಕ್ಡೌನ್ನಿಂದ ನಿಂತಿದ್ದ ಚಿತ್ರದ ಕೆಲಸಗಳು, ಇದೀಗ ಪುನಃ ಪ್ರಾರಂಭವಾಗಿವೆ.
ಮೊದಲಿಗೆ ಈ ಚಿತ್ರದ ಹಾಡುಗಳ ರೆಕಾರ್ಡಿಂಗ್ ಕೆಲಸ ಮುಗಿದಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಹೆಸರಾಂತ ಕವಿಗಳಾದ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಡಾ.ಬಿ.ಆರ್. ಲಕ್ಷ್ಮಣ್ ರಾವ್ ಬರೆದಿದ್ದು, ಇನ್ನೊಂದು ಹಾಡನ್ನು ವಿಕ್ರಮ್ ಸೂರಿ ಹಾಗೂ ಹರೀಶ್ ಭಟ್ ಜತೆಯಾಗಿ ರಚಿಸಿದ್ದಾರೆ. ಚೈತ್ರ, ವ್ಯಾಸರಾಜ್ ಸೋಸಲೆ, ಸಿಧಾರ್ಥ್ಬೆಳ್ಮನು, ನಕುಲ್ ಅಭಯಂಕರ್ ಹಾಗು ರಮ್ಯಾ ಭಟ್ ಹಾಡುಗಳನ್ನು ಹಾಡಿದ್ದಾರೆ. ಸಂಗೀತ ನಿರ್ದೇಶನ ಅಶ್ವಿನ್ ಕುಮಾರ್ ಮಾಡಿದ್ದಾರೆ.
ಇದನ್ನೂ ಓದಿ: ಮುಂದೆ ಕಷ್ಟ ಆದರೂ ಪರವಾಗಿಲ್ಲ, ನಾನ್ ರೆಡಿ … ಜಾಹ್ನವಿ ತೀರ್ಮಾನ
ಅಂದಹಾಗೆ, ಈ ಚಿತ್ರವು ಮಣಿ ಆರ್ ರಾವ್ ಅವರ ‘ಭಾವನ’ ಎಂಬ ಕಾದಂಬರಿ ಆಧಾರಿಸಿದ್ದು, ನಿರ್ದೇಶನದ ಜತೆಗೆ ನಿರ್ಮಾಣವನ್ನೂ ಸ್ವತಃ ವಿಕ್ರಮ್ ಸೂರಿ ಮಾಡುತ್ತಿದ್ದಾರೆ. ವಿಕ್ರಮ್ ತಮ್ಮ ಪತ್ನಿ ನಮಿತಾ ರಾವ್ ಜತೆಗೆ ಸೇರಿಕೊಂಡು ನವ ನಿರ್ಮಿತಿ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಈ ಸಂಸ್ಥೆಯ ಮೊದಲ ಚಿತ್ರವಾಗಿ ‘ಚೌಕಾಬಾರ’ ಕೈಗೆತ್ತಿಕೊಂಡಿದ್ದಾರೆ.
ಜನರೇಶನ್ ಗ್ಯಾಪ್ನ ಕಥೆ ಇದಾಗಿದ್ದು, ಸಂಬಂಧಗಳಲ್ಲಿ ಗೊಂದಲ ಹೆಚ್ಚಾದರೆ ಏನೆಲ್ಲಾ ಆಗುತ್ತದೆ ಎಂದು ಚಿತ್ರ ಸಾರುತ್ತದೆ. ಗೊಂದಲವನ್ನು ಬೆಳೆಸದಿದ್ದರೆ ಎಂತಹ ಸಮಸ್ಯೆಯನ್ನು ಬೇಕಾದರೂ ಬಗೆಹರಿಸಬಹುದು ಎಂಬ ಸಂದೇಶವಿರುವ ಈ ಚಿತ್ರವು ಪ್ರತಿಯೊಬ್ಬರ ಜೀವನಕ್ಕೂ ಬಹಳ ಹತ್ತಿರವಾಗಿದೆ ಎನ್ನುತ್ತಾರೆ ವಿಕ್ರಮ್ ಸೂರಿ.
ಇದನ್ನೂ ಓದಿ: ಸುಶಾಂತ್ ಹಣ ದುರ್ಬಳಕೆ ಪ್ರಕರಣ; ವಿಚಾರಣೆಗೆ ಹಾಜರಾದ ರಿಯಾ ಚಕ್ರವರ್ತಿಗೆ ಇಡಿ ಡ್ರಿಲ್!
ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆಯಂತೆ. ಸೆಪ್ಟೆಂಬರ್ನಲ್ಲಿ ಕಾರವಾರ, ದಾಂಡೇಲಿ ಮುಂತಾದ ಕಡೆ ಚಿತ್ರೀಕರಣ ಮುಗಿಸುವ ಯೋಚನೆ ವಿಕ್ರಮ್ ಮತ್ತು ಚಿತ್ರತಂಡಕ್ಕಿದೆ.
ಈ ಹಿಂದೆ ‘ಚಿತ್ರಮಂದಿರದಲ್ಲಿ’ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ನಮಿತಾ ರಾವ್, ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಜತೆಗೆ ಕಾವ್ಯ ರಮೇಶ್, ಪ್ರಭಂಜನ್, ಸುಜಯ್ ಹೆಗಡೆ, ಸಂಜಯ್ ಸೂರಿ, ಕಿರಣ್ ವಟಿ, ಸೀತಾ ಕೋಟೆ, ಶಶಿಧರ್ ಕೋಟೆ, ಮಧು ಹೆಗಡೆ, ಪ್ರಥಮ ಪ್ರಸಾದ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಪಂಜಾಬ್ ಲಿಕ್ಕರ್ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸೋನು ಸೂದ್ ಅಭಯ