ಕೊನೆಗೂ ಜಾರಿ ನಿರ್ದೇಶನಾಲಯದ ಕರೆಗೆ ಸ್ಪಂದಿಸಿದ ರಿಯಾ ಚಕ್ರವರ್ತಿ ಶುಕ್ರವಾರ ಮುಂಬೈನಲ್ಲಿರುವ ಇಡಿ ಕಚೇರಿಗೆ ತೆರಳಿದ್ದಾರೆ. ಸುಶಾಂತ್ ಹಣ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿದ್ದಂತೆ ತಂದೆ ಕೆಕೆ ಸಿಂಗ್ ಮನಿ ಲಾಂಡರಿಂಗ್ ಪ್ರಕರಣ ದಾಖಲಿಸಿದ್ದರು. ಅದರ ಅನುಸಾರ ಆಗಸ್ಟ್ 7ರಂದು ವಿಚಾರಣೆಗೆ ಆಗಮಿಸುವಂತೆ ಇಡಿ ಆದೇಶಿಸಿತ್ತು. ಇದೀಗ ರಿಯಾ ವಿಚಾರಣೆಗೆ ಹಾಜರಾಗಿದ್ದಾರೆ.
ಇದನ್ನೂ ಓದಿ: ಸುಶಾಂತ್ ಆತ್ಮಹತ್ಯೆ ಪ್ರಕರಣದಲ್ಲಿ ಹೊಸ ಹೆಸರು ಎಂಟ್ರಿ: ಯಾರು ಈ ಶ್ರುತಿ ಮೋದಿ?
ಈ ಸಂಬಂಧ ಪಾಟ್ನಾದ ರಾಜೀವ್ ನಗರ್ ಪೊಲೀಸ್ ಠಾಣೆಯಲ್ಲಿ ಕೆಕೆ ಸಿಂಗ್ ದೂರು ನೀಡಿದ್ದರು. ರಿಯಾ ಜತೆಗೆ ಸುಶಾಂತ್ ಸ್ನೇಹಿತ ಸಿದ್ಧಾರ್ಥ್ ಪಟಾಣಿ ಅವರಿಗೂ ಸಮನ್ಸ್ ಜಾರಿ ಮಾಡಿರುವ ಜಾರಿ ನಿರ್ದೇಶನಾಲಯ, ಅವರನ್ನು ವಿಚಾರಣೆಗೆ ಆಹ್ವಾನಿಸಿದೆ. ಈಗಾಗಲೇ ಸುಶಾಂತ್ ಮನೆ ಮ್ಯಾನೇಜರ್ ಮತ್ತು ರಿಯಾ ಅಸೋಸಿಯೇಟ್ ಸ್ಯಾಮ್ಯುಲ್ ಮಿರಾಂದ್ ಮತ್ತು ಸುಶಾಂತ್ ಅವರ ಸಿಎ ಸಂದೀಪ್ ಶ್ರೀಧರ್ ಅವರನ್ನೂ ಇಡಿ ವಿಚಾರಣೆ ಮಾಡಿದೆ.
ಈ ಮೊದಲು ಪಾಟ್ನಾದಲ್ಲಿ ದಾಖಲಾಗಿದ್ದ ತನ್ನ ವಿರುದ್ಧದ ಪ್ರಕರಣವನ್ನು ಮುಂಬೈಗೆ ವರ್ಗಾವಣೆ ಮಾಡಬೇಕೆಂದು ಕೋರಿ, ಸುಪ್ರೀಂ ಕೋರ್ಟ್ ನಲ್ಲಿ ರಿಯಾ ಅರ್ಜಿ ಸಲ್ಲಿಸಿದ್ದರು. ಅದರ ಉತ್ತರ ಬಂದ ಬಳಿಕ ವಿಚಾರಣೆಗೆ ಹಾಜರಾಗುವ ಬಗ್ಗೆ ಇಡಿಗೆ ಮನವಿ ಮಾಡಿದ್ದರು. ಆದರೆ, ಇತ್ತೀಚೆಗಷ್ಟೇ ಆ ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಇಡಿಯಿಂದ ಮೇಲ್ ಮೂಲಕ ಅವರಿಗೆ ಮತ್ತೊಮ್ಮೆ ಸಮನ್ಸ್ ನೀಡಲಾಗಿತ್ತು.
ಇದನ್ನೂ ಓದಿ: VIDEO: 10 ಸಾವಿರ ರೂ. ನೀಡಲಿಲ್ಲ ಎಂಬ ಕಾರಣಕ್ಕೆ ಫೇಸ್ಬುಕ್ ಲೈವ್ ಬಂದು ಆತ್ಮಹತ್ಯೆಗೆ ಶರಣಾದ ನಟಿ!
ಜುಲೈ 31ರಂದೇ ರಿಯಾ ವಿರುದ್ಧ ಮನಿ ಲಾಂಡರಿಂಗ್ ಕೇಸ್ ದಾಖಲಾಗಿದ್ದು, ಜತೆಗೆ ರಿಯಾ ಆಪ್ತರೂ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಅನುಮಾನದಿಂದ ಅವರ ಮೇಲೆಯೂ ದೂರು ದಾಖಲಾಗಿದೆ. ಇತ್ತ ಸಿಬಿಐ ಸಹ ಸುಶಾಂತ್ ಅವರ ಜತೆ ಕೆಲಸ ಮಾಡಿದ ಮ್ಯಾನೇಜರ್ಗಳ ವಿರುದ್ಧ ಮತ್ತು ರಿಯಾ ಕುಟುಂಬ ಸದಸ್ಯರ ವಿರುದ್ಧವೂ ದೂರು ದಾಖಲಿಸಿ ವಿಚಾರಣೆ ನಡೆಸುತ್ತಿದೆ. (ಏಜೆನ್ಸೀಸ್)