ಡೆಹ್ರಾಡೂನ್: ಉತ್ತರಕಾಶಿಯ ಸಿಲ್ಕ್ಯಾರಾದಲ್ಲಿ ಸಂಭವಿಸಿದ ಸುರಂಗ ದುರಂತದಲ್ಲಿ ಸಿಲುಕಿ ಹೊರಜಗತ್ತಿಗೆ ಬರಲು ಹವಣಿಸುತ್ತಿರುವ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರ ಕರೆತರಲು ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ 13ನೇ ದಿನಕ್ಕೆ ಕಾಲಿಟ್ಟಿದೆ. ಅಮೆರಿಕದ ಆಗರ್ ಯಂತ್ರವನ್ನು ಬಳಸಿ ಸುರಂಗವನ್ನು ಕೊರೆಯುವ ಕೆಲಸ ನಡೆಯುತ್ತಿದ್ದು, ಗುರವಾರ ತಡರಾತ್ರಿ ಉಂಟಾದ ತಾಂತ್ರಿಕ ಸಮಸ್ಯೆಯ ಕಾರಣದಿಂದ ರಕ್ಷಣಾ ಕಾರ್ಯವನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈವರೆಗೂ 46.8 ಮೀಟರ್ಗಳಷ್ಟು ದೂರ ಡ್ರಿಲ್ ಮಾಡಬೇಕಿದೆ. ಕಾರ್ಮಿಕರನ್ನು ರಕ್ಷಿಸಲು ಇನ್ನೂ ಕೆಲವೇ ಮೀಟರ್ಗಳು ಬಾಕಿ ಇದೆ. ಅದರೆ, ಡ್ರಿಲ್ಲಿಂಗ್ ಯಂತ್ರ ದುರಸ್ಥಿಯಾಗಲು ಇನ್ನು ಕೆಲವು ಸಮಯ ಹಿಡಿಯುವುದರಿಂದ ಇಂದು ಬೆಳಗ್ಗೆ 9 ಗಂಟೆಗೆ ಮತ್ತೆ ರಕ್ಷಣಾ ಕಾರ್ಯಾಚರಣೆ ಪುನಾರಾಂಭವಾಗಲಿದೆ ಎಂದು ತಿಳಿದುಬಂದಿದೆ.
ಇಂದು ಗುಡ್ ನ್ಯೂಸ್ ನಿರೀಕ್ಷೆ
ರಕ್ಷಣಾ ಕಾರ್ಯಾಚರಣೆಯು ಬುಧವಾರ ಕೊನೆಯ ಹಂತಕ್ಕೆ ತಲುಪಿದ್ದು, ಇಂದು 41 ಕಾರ್ಮಿಕರು ಕತ್ತಲೆ ಕೂಪದಿಂದ ಬೆಳಕಿನೆಡೆಗೆ ಬರುವ ನಿರೀಕ್ಷೆ ಇದೆ. ಆದರೆ, ಯಾವ ಸಮಯದಲ್ಲಿ ಹೊರಬರುತ್ತಾರೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (NDMA) ಸದಸ್ಯ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅಟಾ ಹಸ್ನೇನ್ ಮಾತನಾಡಿ, ಕಾರ್ಮಿಕರನ್ನು ರಕ್ಷಿಸಲು ಸಮತಲ ಅಥವಾ ಅಡ್ಡಲಾಗಿ ಕೊರೆಯುವ ಕಾರ್ಯಾಚರಣೆಗೆ ಹೆಚ್ಚುವರಿ ಅಡೆತಡೆಗಳನ್ನು ಎದುರಿಸುವ ಸಾಧ್ಯತೆ ಇದೆ. ಮುಂದೆ ಎದುರಾಗಬಹುದಾದ ಅನಿರೀಕ್ಷಿತ ಮತ್ತು ಸವಾಲಿನ ಸ್ವರೂಪವನ್ನು ಪರಿಗಣಿಸಿ, ರಕ್ಷಣಾ ಕಾರ್ಯಾಚರಣೆಯ ಸಮಯದ ಚೌಕಟ್ಟನ್ನು ಊಹಿಸುವುದು ಸಾಧ್ಯವಿಲ್ಲ ಎಂದಿದ್ದಾರೆ.
ಸುರಂಗದಲ್ಲಿ ಸಿಲುಕಿರುವ ಪ್ರತಿಯೊಬ್ಬ ಕಾರ್ಮಿಕರಿಗೆ ಒಂದರಂತೆ ಒಟ್ಟು 41 ಆಂಬ್ಯುಲೆನ್ಸ್ಗಳನ್ನು ಸುರಂಗದ ಸ್ಥಳದಲ್ಲಿ ಈಗಾಗಲೇ ಇರಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಕಾರ್ಮಿಕರನ್ನು ಏರ್ಲಿಫ್ಟ್ ಮಾಡಲು ವ್ಯವಸ್ಥೆ ಮಾಡಲಾಗಿದೆ ಎಂದು ಅಟಾ ಹಸ್ನೇನ್ ತಿಳಿಸಿದರು.
ರಕ್ಷಣಾ ಕಾರ್ಯಕರ್ತರು ಒಳಗಿರುವ ಕಾರ್ವಿುಕರನ್ನು ಸಮೀಪಿಸಿದ ಬಳಿಕ ಒಬ್ಬೊಬ್ಬರೇ ಕಾರ್ವಿುಕರನ್ನು ಹಗ್ಗ ಕಟ್ಟಿದ ಗಾಲಿ ಸ್ಟ್ರೆಚರ್ ನೆರವಿನಿಂದ ಸುರಂಗದಿಂದ ಹೊರ ಕರೆತರಲು ಎನ್ಡಿಆರ್ಎಫ್ ಯೋಜನೆ ರೂಪಿಸಿದೆ. ಅಲ್ಲದೆ, ಕಾರ್ಮಿಕರ ಕೈಕಾಲುಗಳು ಪರಚಿಕೊಳ್ಳುವುದನ್ನು ತಡೆಯಲು ಪ್ರತಿಯೊಬ್ಬ ಕಾರ್ಮಿಕನನ್ನು ತುಂಬಾ ಎಚ್ಚರಿಕೆಯಿಂದ ಸ್ಟ್ರೆಚರ್ನಲ್ಲಿ ಇರಿಸಲಾಗುತ್ತದೆ.
ತಡರಾತ್ರಿ 1 ಗಂಟೆಯಲ್ಲಿ 3 ಮೀಟರ್ ಕೊರೆಯುವ ಸಾಮರ್ಥ್ಯದ ಈ ಯಂತ್ರಕ್ಕೆ ಲೋಹವೊಂದು ಅಡ್ಡ ಬಂದು ತೊಂದರೆಯಾಗಿತ್ತು. ಬಳಿಕ ಗ್ಯಾಸ್ ಕಟ್ಟರ್ ಬಳಸಿ ಅಡ್ಡಿಯನ್ನು ನಿವಾರಿಸಲಾಯಿತು. ಆದರೆ, ಡ್ರಿಲ್ಲಿಂಗ್ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರುವುದರಿಂದ ದುರಸ್ಥಿಯ ಬಳಿಕ ಕಾರ್ಯಾಚರಣೆ ಮತ್ತೆ ಆರಂಭವಾಗಲಿದೆ. ಇನ್ನೊಂದೆಡೆ ಕಾರ್ವಿುಕರನ್ನು ಸುರಕ್ಷಿತವಾಗಿ ಹೊರ ಕರೆತರುವ ಕಾರ್ಯಾಚರಣೆಗೆ ಬೇಕಾಗುವ ಬೃಹತ್ ಯಂತ್ರಗಳನ್ನು ಸಾಗಿಸಲು ಭಾರತೀಯ ರೈಲ್ವೆ ವಿಶೇಷ ರೈಲನ್ನು ಓಡಿಸುತ್ತಿದೆ. ಡ್ರಿಲ್ಲಿಂಗ್ ಯಂತ್ರಗಳನ್ನು ಹೊತ್ತ ನಾನ್-ಸ್ಟಾಪ್ ವಿಶೇಷ ರೈಲು ಒಡಿಶಾದ ಸಂಬಲ್ಪುರ್ ಜಂಕ್ಷನ್ನಿಂದ ಹೊರಟಿದ್ದು ಗುರುವಾರ ಸಂಜೆ ಹೊತ್ತಿಗೆ ಋಷಿಕೇಶ ರೈಲ್ವೆ ನಿಲ್ದಾಣ ತಲುಪಲಿದೆ.
ಸುರಂಗ ಮಾರ್ಗದ ಉದ್ದೇಶವೇನು?
ಕೇಂದ್ರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾದ ಸುರಂಗವು ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡಲ್ಗಾಂವ್ ನಡುವೆ ಉತ್ತರಕಾಶಿ ಮತ್ತು ಯಮುನೋತ್ರಿಯನ್ನು ಸಂಪರ್ಕಿಸಲು ಉದ್ದೇಶಿಸಿರುವ ರಸ್ತೆಯಲ್ಲಿದೆ. ಇದರ ಕಾಮಗಾರಿ ಭರದಿಂದ ಸಾಗಿತ್ತು. ಆದರೆ, ಮಣ್ಣು ಕುಸಿತದಿಂದಾಗಿ ನ.12 ರಂದು 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ.
ಕಾರ್ವಿುಕರೊಂದಿಗೆ ಸಿಎಂ ಮಾತು
ಗುರುವಾರ ಸುರಂಗಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಒಳಗಡೆ ಸಿಲುಕಿರುವ 41 ನಿರ್ಮಾಣ ಕಾರ್ವಿುಕರನ್ನು ಮಾತನಾಡಿಸಿದರು. ‘ರಕ್ಷಣಾ ಕಾರ್ಯಕರ್ತರು ನಿಮ್ಮ ಹತ್ತಿರ ಬರುತ್ತಿದ್ದಾರೆ’ ಎಂದು ಕಾರ್ವಿುಕರಿಗೆ ಹೇಳಿ ಧೈರ್ಯ ತುಂಬಿದರು. ಸಹ-ಕಾರ್ವಿುಕರ ಸ್ಥಿತಿಗತಿ ಬಗ್ಗೆ ಗಬ್ಬರ್ ಸಿಂಗ್ ನೇಗಿ ಮತ್ತು ಸಬಾ ಅಹಮದ್ ಎಂಬಿಬ್ಬರು ಶ್ರಮಿಕರ ಬಳಿ ವಿಚಾರಿಸಿದ ಸಿಎಂ, ಈ ಇಬ್ಬರು ಕಾರ್ವಿುಕರ ನೈತಿಕ ಸ್ಥೈರ್ಯಕ್ಕೆ ಮೆಚ್ಚುಗೆ ಸೂಚಿಸಿದರು. (ಏಜೆನ್ಸೀಸ್)
ಚಳಿಗಾಲ ಸಮೀಪಿಸುತ್ತಿದೆ ಚರ್ಮದ ಕಾಳಜಿ ವಹಿಸಲು ತೆಂಗಿನ ಎಣ್ಣೆಯ ಮಹತ್ವ ನಿಮಗೆ ತಿಳಿದಿರಲಿ…
ಮದುವೆಯ ಬಳಿಕ ಅಭಿ ಗುಡ್ ಮ್ಯಾನರ್ಸ್ ; ಬದಲಾಗಿದ್ದಾರಂತೆ ಅಭಿಷೇಕ್ ಅಂಬರೀಷ್