ಮುದಗಲ್: ಉಪ್ಪರನಂದಿಹಾಳ ಗ್ರಾಮಕ್ಕೆ ಸೋಮವಾರ ವೈದ್ಯಾಧಿಕಾರಿಗಳ ತಂಡ ಭೇಟಿ ಪರಿಶೀಲನೆ ನಡೆಸಿತು. ಗ್ರಾಮದಲ್ಲಿ ಅನೈರ್ಮಲ್ಯದಿಂದ ಕಳೆದ ವಾರ ಶಂಕಿತ ಡೆಂಗ್ಯೂಗೆ ಬಾಲಕಿಯೊಬ್ಬಳು ಬಲಿಯಾಗಿದ್ದಳು. ಈ ಕುರಿತು ‘‘ಉಪ್ಪರನಂದಿಹಾಳದಲ್ಲಿ ಡೆಂಗ್ಯೂ ತಾಂಡವ’ ಶೀರ್ಷಿಕೆಯಡಿ ಮೇ 8ರಂದು ‘ವಿಜಯವಾಣಿ’ ವರದಿ ಪ್ರಕಟಿಸಿತ್ತು.
ಇದನ್ನೂ ಓದಿ: ಡೆಂಗ್ಯೂನಿಂದ ಬೇಗ ಚೇತರಿಸಿಕೊಳ್ಳಬೇಕೆ? ಇಲ್ಲಿದೆ ಸರಳ ಉಪಾಯ…
ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳ ತಂಡ ಟಿಎಚ್ಒ ಡಾ.ಅಮರೇಶ ಪಾಟೀಲ್ ನೇತೃತ್ವದಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಜ್ವರದಿಂದ ಬಳಲುತ್ತಿದ್ದ ಮತ್ತು ಈಗಾಗಲೇ ಕೆಲವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳ ರಕ್ತದ ಮಾದರಿ, ನೀರು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದರು.
ಗ್ರಾಮದಲ್ಲಿ ಕೊಳಚೆ ಇರುವುದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಇದರಿಂದ ಟೈಫೈಡ್ ಹಾಗೂ ಡೆಂಘೆ ಜ್ವರ ಕಾಣಿಸಿಕೊಳ್ಳುವಂತಾಗಿದೆ. ಈ ಬಗ್ಗೆ ಸ್ಥಳೀಯ ಗ್ರಾಪಂ ಹೆಚ್ಚಿನ ಗಮನಹರಿಸಿ ಮಲೀನತೆ ತೆರವುಗೊಳಿಸಲು ಪಿಡಿಒ ಕ್ರಮಕೈಗೊಳ್ಳಬೇಕು. ಗ್ರಾಮದಲ್ಲಿ ಆರೋಗ್ಯ ಸಿಬ್ಬಂದಿ ಕ್ಯಾಂಪ್ ಹಾಕಿ ತಪಾಸಣೆ ನಡೆಸಲಿದ್ದಾರೆಂದು ಡಾ.ಅಮರೇಶ ತಿಳಿಸಿದರು. ಡಾ.ರವಿಕಿರಣ ಬಯ್ಯಪೂರ, ಸಿಎಚ್ಒ ಸಂಗಮೇಶ, ಬಸವರಾಜ, ಪಿಡಿಒ ಪ್ರೇಮಾ ಇತರರಿದ್ದರು.
ಅಧಿಕಾರಿಗಳ ವಿರುದ್ಧ ಆಕ್ರೋಶ
ಕಳೆದ ಮೂರ್ನಾಲ್ಕು ತಿಂಗಳಿಂದ ಕುಡಿವ ನೀರು ಮತ್ತು ರಸ್ತೆ ಮೇಲೆ ಹರಿಯುತ್ತಿರುವ ಕೊಳಚೆಯಿಂದ ಆರೋಗ್ಯ ಸಮಸ್ಯೆ ಆಗುತ್ತಿರುವ ಬಗ್ಗೆ ಗ್ರಾಪಂ ಆಡಳಿತದ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷಿಸಿದ್ದಾರೆಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ನಾಗರಿಕರ ಆರೋಗ್ಯದಲ್ಲಿ ಸಮಸ್ಯೆಯಾಗುತ್ತಿರುವ ಕುರಿತು ಮಲೀನತೆ ನಿಯಂತ್ರಣಕ್ಕೆ ಕಳೆದ ತಿಂಗಳು ವೈದ್ಯರು ಪಿಡಿಒಗೆ ಲಿಖತ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರಾದ ಹುಸೇನ್ ಸಾಬ್ ಕಡಿವಾಲ, ಮೈನುದ್ದೀನ್, ಮಹಾಂತೇಶ ವಾಲ್ಮೀಕಿ, ಹನುಮನಗೌಡ ಮಾಲಿ ಪಾಟೀಲ್, ಗೂಡಸಾಬ್, ಹಸನ್ ಸಾಬ್ ಅಂಗಡಿ ಆರೋಪಿಸಿದರು.