ಮೈಸೂರು: ಸಫಾರಿಗೆ ಹೊರಟವರಿಗೆ ಎದುರಿಗೆ ಪ್ರಾಣಿ ಸಿಕ್ಕರೆ ಅದಕ್ಕಿಂತ ಖುಷಿ ಬೇರೆ ಇರುವುದಿಲ್ಲ. ಅಂಥದ್ದೇ ಒಂದು ಖುಷಿಯನ್ನು ಈ ಸಫಾರಿಗರು ಅನುಭವಿಸಿದ್ದಾರೆ. ಆ ಖುಷಿಯನ್ನು ಕೊಟ್ಟಿದ್ದು ಅವರಿಗೆ ಕೇರೇ ಎನ್ನದೆ ರಾಜಾರೋಷವಾಗಿ ಸಾಗಿಬಂದ ಹುಲಿರಾಯ.
ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಸಫಾರಿ ಕೇಂದ್ರದಲ್ಲಿ ಇಂಥದ್ದೊಂದು ದೃಶ್ಯ ಕಂಡುಬಂದಿದೆ. ಇಲ್ಲಿ ವಾಹನದಲ್ಲಿ ಸಫಾರಿಗೆ ಹೊರಟವರಿಗೆ ನೀರಿನ ಹೊಂಡವೊಂದರ ಬಳಿ ಅಡ್ಡಾಡುತ್ತಿದ್ದ ಹುಲಿ ಕಾಣಸಿಕೊಂಡಿದೆ. ಆಗ ಅವರು ಹುಲಿಯನ್ನು ನೋಡಲು ವಾಹನವನ್ನು ನಿಲ್ಲಿಸಿ ವೀಕ್ಷಣೆಗೆ ತೊಡಗಿದಾಗ ಅದು ವಾಹನದತ್ತವೇ ತೆರಳಿದೆ.
ವಾಹನವನ್ನು ಕಂಡರೂ ಒಂಚೂರೂ ಬೆದರದ ಹುಲಿ ರಾಜಾರೋಷವಾಗಿ ವಾಹನದತ್ತಲೇ ಸಾಗಿಬಂದಿದೆ. ಹುಲಿಯನ್ನು ನೋಡಬೇಕೆಂದು ಹೊರಟವರತ್ತಲೇ ಹುಲಿಯೇ ಬಂದಿರುವುದು ಅವರ ಖುಷಿಯನ್ನು ಹೆಚ್ಚಿಸಿದೆ. ಇದನ್ನು ಸಫಾರಿಗೆ ತೆರಳಿದ್ದ ಇನ್ನೊಂದು ವಾಹನದಲ್ಲಿದ್ದವರು ವಿಡಿಯೋ ಮಾಡಿದ್ದು, ಅದು ಎಲ್ಲೆಡೆ ಹರಿದಾಡಲಾರಂಭಿಸಿದೆ.