ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಹಾಸ್ಯ ದಿಗ್ಗಜ ಟಿ.ಆರ್. ನರಸಿಂಹರಾಜು. ‘ಬೇಡರ ಕಣ್ಣಪ್ಪ’, ‘ಭಲೇ ಬಸವ’, ‘ಯಾವ ಜನುಮದ ಮೈತ್ರಿ’ ಸೇರಿ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಹಾಸ್ಯನಟರಾಗಿ ಪ್ರೇಕ್ಷಕರನ್ನು ನಗಿಸಿದ ಖ್ಯಾತಿ ಅವರದು. ಸೋಮವಾರ (ಜು.24) ನರಸಿಂಹರಾಜು ಅವರ ಜನ್ಮದಿನ.
ಇದನ್ನೂ ಓದಿ : ನನಗೂ ಹೆಂಡ್ತಿ ಬೇಕು : ತಬಲಾ ನಾಣಿ, ಚೈತ್ರಾ ಕೋಟೂರ್ ನಟಿಸಿರುವ ಕಾಮಿಡಿ ಚಿತ್ರ
ಈ ವರ್ಷ ನೂರನೇ ಹುಟ್ಟುಹಬ್ಬವಾದ ಕಾರಣ ವಿಶೇಷವಾಗಿ ಆಚರಿಸಲು ನರಸಿಂಹರಾಜು ಕುಟುಂಬದವರು ಹಾಗೂ ಅಭಿಮಾನಿಗಳು ಸಜ್ಜಾಗಿದ್ದಾರೆ. ‘ಶತಮಾನಕ್ಕೊಬ್ಬ ಹಾಸ್ಯಚಕ್ರವರ್ತಿಯ ಶತಮಾನೋತ್ಸವ’ ಎಂಬ ಹೆಸರಿನಲ್ಲಿ ಈ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್. ಆರ್. ಕೆ. ವಿಶ್ವನಾಥ್, ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎನ್ ಸುಬ್ರಹ್ಮಣ್ಯ ಹಾಗೂ ಹಿರಿಯನಟ ಬೆಂಗಳೂರು ನಾಗೇಶ್ ಚಾಲನೆ ನೀಡಿದರು.
ಕಾರ್ಯಕ್ರಮಗಳ ಸ್ವರೂಪದ ಬಗ್ಗೆ ನರಸಿಂಹರಾಜು ಅವರ ಮೊಮ್ಮಗ ಅವಿನಾಶ್,‘ಹನ್ನೆರಡು ಜನರ ತಂಡ ಮೂಲಕ 32 ಜಿಲ್ಲೆಗಳಲ್ಲಿರುವ ಕೆಲವು ಆಯ್ದ ಕಾಲೇಜುಗಳಲ್ಲಿ ನರಸಿಂಹರಾಜು ಅವರ ಹಾಸ್ಯ ನಾಟಕಗಳ ಪ್ರದರ್ಶನ ಹಾಗೂ ಅವರ ಕುರಿತು ಮಾಹಿತಿ ನೀಡುವ ಕಾರ್ಯ ಮಾಡಲಿದೆ. ಪ್ರಸಿದ್ಧ ನಾಟಕ ಕಂಪೆನಿಗಳಿಂದ ಅಹೋರಾತ್ರಿ ನಾಟಕ ಮಾಡಿಸಲಾಗುವುದು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಾಸ್ಯ ಕಿರುಚಿತ್ರೋತ್ಸವ ಆಯೋಜಿಸಲಾಗುವುದು. ಆಗಸ್ಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಕಾರ್ಯಕ್ರಮಕ್ಕೆ ತಯಾರಿ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.