ನವದೆಹಲಿ: ವ್ಯಭಿಚಾರ ಮಾಡಿ ಸಿಕ್ಕಿ ಬೀಳುವ ಮಹಿಳೆಯರನ್ನು ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆದ ಸಾಯಿಸುವ ನಿಯಮವನ್ನು ಶೀಘ್ರದಲ್ಲೇ ಮತ್ತೆ ಜಾರಿಗೆ ತರುವುದಾಗಿ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಘೋಷಣೆ ಮಾಡಿರುವುದಾಗಿ ವರದಿಯಾಗಿದೆ.
ತಾಲಿಬಾನ್ನ ಸುಪ್ರೀಂ ನಾಯಕ ಮುಲ್ಲಾ ಹಿಬತುಲ್ಲಾ ಅಖುಂಡ್ಜಾದಾ ಈ ಘೋಷಣೆ ಮಾಡಿದ್ದಾನೆ. ಸಾರ್ವಜನಿಕವಾಗಿ ಮಹಿಳೆಯರನ್ನು ಕಲ್ಲಿನಿಂದ ಹೊಡೆದು ಕೊಲ್ಲುವ ನಿಯಮವನ್ನು ಶೀಘ್ರದಲ್ಲೇ ಮರು ಜಾರಿಗೆ ತರಲಾಗುವುದು ಎಂಬ ಧ್ವನಿ ಸಂದೇಶವನ್ನು ಕಳೆದ ಶನಿವಾರ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ ಎಂದು ಟೆಲಿಗ್ರಾಫ್ ವರದಿ ಮಾಡಿದೆ.
ಟೆಲಿಗ್ರಾಫ್ಗೆ ಲಭ್ಯವಿರುವ ವಿಡಿಯೋದಲ್ಲಿ, ಅಖುಂಡ್ಜಾದಾ, ಅಂತಾರಾಷ್ಟ್ರೀಯ ಸಮುದಾಯವು ಪ್ರತಿಪಾದಿಸುತ್ತಿರುವ ಮಹಿಳಾ ಹಕ್ಕುಗಳು ಇಸ್ಲಾಮಿಕ್ ಷರಿಯಾದ ತಾಲಿಬಾನ್ ವ್ಯಾಖ್ಯಾನಕ್ಕೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದ್ದಾನೆ. ನಾವು ಕಲ್ಲಿನಿಂದ ಹೊಡೆದು ಸಾಯಿಸುವುದನ್ನು ಮಹಿಳಾ ಹಕ್ಕುಗಳ ಉಲ್ಲಂಘನೆ ಎಂದು ನೀವು ಹೇಳುತ್ತೀರಿ. ಆದರೆ, ನಾವು ವ್ಯಭಿಚಾರ ಮಾಡುವವರಿಗೆ ಈ ಶಿಕ್ಷೆಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಿದ್ದೇವೆ. ನಾವು ಸಾರ್ವಜನಿಕವಾಗಿ ಮಹಿಳೆಯರಿಗೆ ಥಳಿಸುತ್ತೇವೆ. ಸಾರ್ವಜನಿಕವಾಗಿಯೇ ಕಲ್ಲಿನಿಂದ ಹೊಡೆದು ಸಾಯಿಸುತ್ತೇವೆ ಎಂದಿದ್ದಾನೆ.
ಕಾಬೂಲ್ ಅನ್ನು ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ ತಾಲಿಬಾನ್ನ ಕೆಲಸವು ಕೊನೆಗೊಂಡಿಲ್ಲ, ಅದು ಈಗಷ್ಟೇ ಪ್ರಾರಂಭವಾಗಿದೆ ಎಂದು ಅಖುಂಡ್ಜಾದಾ ಹೇಳಿದ್ದಾನೆ.
2021ರಲ್ಲಿ ಆಫ್ಘಾನ್ ಅನ್ನು ತಾಲಿಬಾನ್ ತಮ್ಮ ಕೈವಶ ಮಾಡಿಕೊಂಡಾಗಿನಿಂದ ಆಫ್ಘಾನ್ನ ಮಹಿಳೆಯರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಯುದ್ಧಪೀಡಿತ ದೇಶದ ಹುಡುಗಿಯರು ಮತ್ತು ಮಹಿಳೆಯರು ಶಿಕ್ಷಣ, ಉದ್ಯೋಗದಿಂದ ವಂಚಿತರಾಗಿದ್ದಾರೆ ಮತ್ತು ಸಾರ್ವಜನಿಕ ಪ್ರದೇಶಗಳಲ್ಲೂ ಕಾಣಿಸಿಕೊಳ್ಳದಂತೆ ನಿರ್ಬಂಧಿಸಲಾಗಿದೆ.
ಅಧಿಕಾರಕ್ಕೆ ಮರಳಿದ ಕೇವಲ ಒಂದು ತಿಂಗಳ ನಂತರ ತಾಲಿಬಾನ್ ಅಧಿಕಾರಿಗಳು ಹೆಣ್ಣು ಮಕ್ಕಳು ಮಾಧ್ಯಮಿಕ ಶಾಲೆಗೆ ಹೋಗುವುದನ್ನು ನಿಷೇಧಿಸಿದರು. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಪರಿಸ್ಥಿತಿಗಳು ಜಾಗತಿಕವಾಗಿ ಅತ್ಯಂತ ಕೆಟ್ಟದಾಗಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ. ತಾಲಿಬಾನ್ ಸರ್ಕಾರದ ನೀತಿಗಳು ಇಸ್ಲಾಂ ಧರ್ಮದ ಕಟ್ಟುನಿಟ್ಟಾದ ವ್ಯಾಖ್ಯಾನವನ್ನು ಆಧರಿಸಿದೆ. ಇದು ಲಿಂಗ ವರ್ಣಭೇದ ನೀತಿಗೆ ಕಾರಣವಾಗಬಹುದು ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ತಾಲಿಬಾನ್ನ ಕಟುವಾದ ನೀತಿಗಳಿಂದಾಗಿ ಆಫ್ಘಾನ್ನಲ್ಲಿ ಖಿನ್ನತೆ ವ್ಯಾಪಕವಾಗಿದೆ. ಕಳೆದ ಎರಡು ವರ್ಷಗಳಲ್ಲಿ ಹೆಣ್ಣುಮಕ್ಕಳ ಆತ್ಮಹತ್ಯೆಯ ಪ್ರಮಾಣವು ಬಹಳಷ್ಟು ಹೆಚ್ಚಾಗಿದೆ. ಇದು ದುರಂತ ಎಂದು ಅನೇಕ ವರದಿಗಳಾಗಿವೆ. (ಏಜೆನ್ಸೀಸ್)
SRH ದಾಖಲೆಗೂ RCB ಆಟಗಾರರೇ ಬರಬೇಕಾಯ್ತು! ಬೆಂಗ್ಳೂರು ತಂಡಕ್ಕೆ ಅಂಟಿದ ಈ ಕಳಂಕಕ್ಕೆ ಕೊನೆ ಯಾವಾಗ?
ಅಣ್ಣಾಮಲೈಗಿಂತ ಪತ್ನಿಯೇ ಶ್ರೀಮಂತೆ! ಮಾಜಿ ಐಪಿಎಸ್ ಅಧಿಕಾರಿ ಬಳಿಯಿರುವ ಒಟ್ಟು ಆಸ್ತಿ ಎಷ್ಟು?