ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ ಕೋಟಾದಡಿ ಮುಸ್ಲಿಮ್ಗೆ ಮೀಸಲಾತಿ ನೀಡಿದೆ. ಇದನ್ನು ಕೈ ಬಿಡಬೇಕು ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗ (ಒಬಿಸಿ)ಗಳಿಗೆ ನೀಡಲಾದ ಶೇ.32ರಷ್ಟು ಮೀಸಲಾತಿಯಲ್ಲಿ ಶೇ. 23 ರಷ್ಟು ಮೀಸಲಾತಿಯನ್ನು ಮುಸ್ಲಿಮ್ಗೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡುತ್ತಿದೆ ಎಂದರು.
ಹಿಂದುಳಿದ ವರ್ಗಕ್ಕೆ ಕೆಟಗರಿ 1ರಲ್ಲಿ ಶೇ. 4ರಷ್ಟು, 2ಎ ರಲ್ಲಿ ಶೇ. 15ರಷ್ಟು, 2ಬಿ ರಲ್ಲಿ ಶೇ. 4ರಷ್ಟು, 3ಎ ನಲ್ಲಿ ಶೇ. 4ರಷ್ಟು ಹಾಗೂ 3ಬಿ ನಲ್ಲಿ ಶೇ. 5 ರಷ್ಟು ಒಟ್ಟು ಶೇ. 32ರಷ್ಟು ಮೀಸಲಾತಿ ಇದೆ. ಇದರಲ್ಲಿ ಕೆಟಗರಿ 1, 2ಎ ಹಾಗೂ 2ಬಿ ನಲ್ಲಿ ಮುಸ್ಲಿಮ್ಗೆ ಮೀಸಲಾತಿ ಕಲ್ಪಿಸಲಾಗಿದೆ. ಈ ರೀತಿ ಧರ್ವಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಹೇಳಿದರು.
ಒಬಿಸಿ ಮೀಸಲಾತಿಯನ್ನು ಮುಸ್ಲಿಮ್ಗೆ ನೀಡುವ ರಾಜ್ಯ ಸರ್ಕಾರದ ಕ್ರಮದ ಕುರಿತು ರಾಜ್ಯದಲ್ಲಿ ನಾವೇ ಧ್ವನಿ ಎತ್ತಿದ್ದೇವು. ಇದೀಗ ಈ ವಿಷಯ ದೇಶದಾದ್ಯಂತ ಚರ್ಚೆ ಆಗುತ್ತಿದೆ. ಮುಸ್ಲಿಮ್ನ್ನು ಸೆಂಟ್ರಲ್ ಒಬಿಸಿ ಪಟ್ಟಿಗೆ ಸೇರಿಸುವ ರಾಜ್ಯ ಸರ್ಕಾರದ ಶಿಫಾರಸ್ಸ್ನ್ನು ರಾಷ್ಟ್ರೀಯ ಹಿಂದುಳಿವ ವರ್ಗಗಳ ಆಯೋಗ ತಿರಸ್ಕರಿಸಿದೆ. ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಸರ್ಕಾರ ಮೀಸಲಾತಿಯಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸುತ್ತೇವೆ ಎಂದರು.
ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ನಾವು ಯಾವುದೇ ಆಪರೇಷನ್ ಮಾಡುವ ಅಗತ್ಯವಿಲ್ಲ, ಅವರು ತಮ್ಮೊಳಗೆ ಕಚ್ಚಾಟ ಮಾಡಿಕೊಂಡು ಬೀಳಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚುನಾವಣೆ ಉಸ್ತುವಾರಿ ಮಾ. ನಾಗರಾಜ, ಮಾಧ್ಯಮ ಸಂಚಾಲಕ ಕರುಣಾಕರ, ಗುರು ಪಾಟೀಲ, ಇತರರು ಇದ್ದರು.