ಬೆಂಗಳೂರು: ಜೂನ್ ಶುರುವಾಗಿಬಿಟ್ಟಿದೆ. ಎಲ್ಲವೂ ಸರಿಯಾಗಿದ್ದರೆ ಇದಾಗಲೇ ಶಾಲೆ ಆರಂಭವಾಗಿ ಹಲವು ದಿನಗಳೇ ಕಳೆದುಬಿಡುತ್ತಿದ್ದವು. ಆದರೆ ಕರೊನಾ ವೈರಸ್ನಿಂದ ಎಲ್ಲವೂ ಅಯೋಮಯ.
ಇಂಥ ಸಂದರ್ಭದಲ್ಲಿ ಶಾಲೆ ಯಾವಾಗ ಆರಂಭ ಮಾಡಬೇಕು ಎಂಬುದೇ ಸರ್ಕಾರದಿಂದ ಹಿಡಿದು ಎಲ್ಲರಿಗೂ ದೊಡ್ಡದಾಗಿ ಕಾಡುತ್ತಿರುವ ಪ್ರಶ್ನೆ. ಇದೀಗ ಪಾಲಕರ ಅಭಿಮತವನ್ನೂ ಸರ್ಕಾರ ಕೇಳಹೊರಟಿರುವ ಬೆನ್ನಲ್ಲೇ, ಜುಲೈನಲ್ಲಿ ಶಾಲೆ ಆರಂಭದ ಬಗ್ಗೆಯೂ ಮಾತು ಕೇಳಿಬಂದಿದೆ.
ಶಾಲೆ ಶುರು ಮಾಡಿ ಎಂದು ಕೆಲವರು, ಸದ್ಯ ಶಾಲೆ ಬೇಡವೇ ಬೇಡ ಎಂದು ಹಲವರು. ಶಾಲೆ ಆರಂಭಕ್ಕೆ ಇಷ್ಟ ಇಲ್ಲದಿದ್ದರೂ, ತಮ್ಮ ಮಕ್ಕಳ ಶಿಕ್ಷಣ ಏನಾಗುತ್ತದೆ ಎಂಬ ಆತಂಕ ಹಲವು ಪಾಲಕರದ್ದು. ಈಗಾಗಲೇ ಹಲವಾರು ಶಾಲೆಗಳು ಆನ್ಲೈನ್ ಶಿಕ್ಷಣ ಆರಂಭಿಸಿದ್ದರೂ ಅದು ಸಂಪೂರ್ಣ ಯಶಸ್ಸನ್ನೂ ಕಂಡಿಲ್ಲ.
ಇದನ್ನೂ ಓದಿ: ಖಾಸಗಿ ಲಾಬಿಗೆ ಮಣಿದಿಲ್ಲ, ಪಾಲಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಶಾಲೆ ಶುರುವಾಗಲ್ಲ- ಶಿಕ್ಷಣ ಸಚಿವ ಸುರೇಶ್ ಕುಮಾರ್
ಇವೆಲ್ಲವುಗಳ ನಡುವೆ, ಶಾಲೆಯ ಕುರಿತಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪುಟ್ಟ ಬಾಲೆಗೆ ಕೇಳಿದ ಪ್ರಶ್ನೆ ಹಾಗೂ ಅದಕ್ಕೆ ಆಕೆ ಕೊಟ್ಟ ಉತ್ತರ ಇದೀಗ ಭಾರಿ ವೈರಲ್ ಆಗಿದೆ. ಈ ಕುರಿತು ಖುದ್ದು ಸಚಿವ ಸುರೇಶ್ ಕುಮಾರ್ ಅವರೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಪಾರ ಕಮೆಂಟ್, ಶೇರ್ಗಳನ್ನು ಇದು ಕಂಡಿದೆ. ವಿಧಾನಸೌಧಕ್ಕೆ ಹೋಗುವ ಸಂದರ್ಭದಲ್ಲಿ ಸಿಕ್ಕ ಬಾಲಕಿಯ ಬಳಿ ಸುರೇಶ್ ಕುಮಾರ್ ಅವರು ಮಾತನಾಡಿದ್ದನ್ನು ಅವರು ಶೇರ್ ಮಾಡಿದ್ದಾರೆ.
ಸುರೇಶ್ ಕುಮಾರ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವುದು ಹೀಗೆ: ವಿಧಾನಸೌಧಕ್ಕೆ ಹೊರಟಿದ್ದೆ. ಈ young friend ಬಂದು ನನ್ನೆದುರು ನಿಂತಳು. “ನಿಮ್ಮನ್ನು ಟಿ.ವಿಯಲ್ಲಿ ನೋಡಿದ್ದೇನೆ” ಎಂದಳು ಮಹನ್ಯಾ ಎಂಬ ಈ ಬಾಲೆ. “ಸ್ಕೂಲ್ ಯಾವಾಗ ಪ್ರಾರಂಭ ಮಾಡುತ್ತೀರಾ” ಎಂದು ಕೇಳಿದಳು. ” ಯಾವಾಗ ಶುರು ಮಾಡಬೇಕು?” ಎಂಬ ನನ್ನ ಪ್ರಶ್ನೆಗೆ “ಕರೊನಾ ಹೋದ ಮೇಲೆ” ಎಂದಳು First Std ಓದುತ್ತಿರುವ ಈ ಚಿನ್ನಾರಿ. “ತುಂಬಾ ದಿನ ಕೊರೋನಾ ಹೋಗದಿದ್ದರೆ” ಎಂದು ನಾನು ಪ್ರಶ್ನಿಸಿದ್ದಕ್ಕೆ “ಇಲ್ಲ. ಕೊರೋನಾ ಹೋದ ಮೇಲೇ ಓಪನ್ ಮಾಡಿ” ಎಂದಳಾ ಪೋರಿ. “ಶಾಲೆ ಓಪನ್ ಮಾಡದಿದ್ದರೆ ನೀನು ಏನು ಮಾಡ್ತೀ” ಎಂಬ ನನ್ನ ಪ್ರಶ್ನೆಗೆ “ಮನೇಲೇ ಇರುತ್ತೇನೆ. ಟಿವಿ ನೋಡ್ತೀನಿ. ಆಟ ಆಡುತ್ತೇನೆ” ಎಂದು ಬೀಗುತ್ತಾ ನುಡಿದಳು ಮಹನ್ಯಾ. ಇವೆಲ್ಲವನ್ನೂ ವಿಡಿಯೋ ಮಾಡಿಕೊಳ್ಳುತ್ತಿದ್ದದ್ದು ದೂರದಲ್ಲಿ ನಿಂತಿದ್ದ ಅವರಮ್ಮ.
ಇದನ್ನೂ ಓದಿ: ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ- ತಾತ್ಕಾಲಿಕ ಪಟ್ಟಿ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ
ಪುಟ್ಟ ಬಾಲಕಿಯ ಉತ್ತರಕ್ಕೆ ಭಾರಿ ಮೆಚ್ಚುವೆ ವ್ಯಕ್ತವಾಗಿದ್ದು ಮಾತ್ರವಲ್ಲದೇ, ಆಕೆ ಹೇಳಿದಂತೆಯೇ ಕೇಳುವಂತೆಯೇ ಬಹುತೇಕ ಎಲ್ಲರೂ ಕಮೆಂಟ್ ಮಾಡಿದ್ದಾರೆ. ಸದ್ಯ ಶಾಲೆಯನ್ನು ತೆರೆಯದಂತೆ, ಪುಟ್ಟ ಮಕ್ಕಳು ಆರಾಮಾಗಿ ಎಂಜಾಯ್ ಮಾಡಿಕೊಂಡು ಇರಲು ಅನುಕೂಲ ಮಾಡಿಕೊಡುವಂತೆ ಬಹುತೆಕ ಮಂದಿ ಮನವಿ ಮಾಡಿಕೊಂಡಿದ್ದಾರೆ. ಕೆಲವು ಶಾಲೆಗಳಲ್ಲಿ ಆನ್ಲೈನ್ ತರಗತಿಗಳನ್ನು ಆರಂಭಿಸಿದ್ದು, ಅವರಿಗೆ ಬುದ್ಧಿ ಹೇಳುವಂತೆಯೂ ಕೆಲವು ಕಮೆಂಟ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿಧಾನಸೌಧಕ್ಕೆ ಹೊರಟಿದ್ದೆ. ಈ young friend ಬಂದು ನನ್ನೆದುರು ನಿಂತಳು."ನಿಮ್ಮನ್ನು ಟಿವಿ ಯಲ್ಲಿ ನೋಡಿದ್ದೇನೆ" ಎಂದಳು ಮಹನ್ಯಾ ಎಂಬ ಈ…
Suresh Kumar S ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಜೂನ್ 3, 2020
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಆಯುಕ್ತರಾಗಿ ಡಾ. ಮಹಾದೇವ್