ಚೆನ್ನೈ: ತಮಿಳುನಾಡು ಮೂಲದ 29 ವರ್ಷದ ಯೋಧರೊಬ್ಬರು ಮೃತಪಟ್ಟಿರುವ ಘಟನೆ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. ಆಡಳಿತಾರೂಢ ಡಿಎಂಕೆ ಪಕ್ಷದ ಕೌನ್ಸಿಲರ್ ಒಬ್ಬರು ನಡೆಸಿದ ದಾಳಿಗೆ ಸೈನಿಕ ಸಾವಿಗೀಡಾಗಿರುವ ಎಂಬ ಆರೋಪ ಕೇಳಿಬಂದಿದೆ.
ಮೃತ ಯೋಧನನ್ನು ಪ್ರಭು ಎಂದು ಗುರುತಿಸಲಾಗಿದೆ. ಇವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಸಾರ್ವಜನಿಕ ನೀರಿನ ಟ್ಯಾಂಕ್ನಲ್ಲಿ ಬಟ್ಟೆ ಒಗೆಯುವ ವಿಚಾರಕ್ಕೆ ಕೌನ್ಸಿಲರ್ ಚಿನ್ನಸ್ವಾಮಿ ಮತ್ತು ಯೋಧ ಪ್ರಭು ನಡುವೆ ವಾಗ್ವಾದ ಆರಂಭವಾಯಿತು. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಈ ವೇಳೆ ಕೌನ್ಸಿಲರ್ ಕಡೆಯವರು ಆಗಮಿಸಿ ಯೋಧ ಪ್ರಭು ಮತ್ತು ಆತನ ಸಹೋದರನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಈ ಘಟನೆ ಫೆ.8ರಂದು ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಪ್ರಭುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ (ಫೆ.15) ರಾತ್ರಿ ಪ್ರಭು ಕೊನೆಯುಸಿರೆಳೆದಿದ್ದಾರೆ. ಅಂದಹಾಗೆ ಆರೋಪಿ ಚಿನ್ನಸ್ವಾಮಿ ಮತ್ತು ಯೋಧ ಪ್ರಭು ಇಬ್ಬರು ಸಂಬಂಧಿಕರು. ಈ ಘಟನೆಯ ಬಗ್ಗೆ ಆಡಳಿತಾರೂಢ ಡಿಎಂಕೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಫೆ.9ರಂದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಲಾಗಿದೆ. ಕೌನ್ಸಿಲರ್ ಸೇರಿದಂತೆ ಉಳಿದ ಆರೋಪಿಗಳನ್ನು ನಿನ್ನೆ ಬಂಧಿಲಾಗಿದೆ. ಯೋಧನ ಮೇಲೆ ದಾಳಿ ಮಾಡಲು ಕೌನ್ಸಿಲರ್ ಬೆಂಬಲಿಗರು ಮರದ ದಿಮ್ಮಿಗಳನ್ನು ಬಳಸಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಪ್ರಭು ಸಹೋದರನಿಗೂ ಗಾಯಗಳಾಗಿವೆ.
ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಮಾತನಾಡಿ, ಸೇನಾ ಸಿಬ್ಬಂದಿಗೆ ಅವರ ಸ್ವಂತ ಊರಿನಲ್ಲಿ ಸುರಕ್ಷತೆ ಇಲ್ಲ, ಗೃಹ ಖಾತೆ ಹೊಂದಿರುವ ಮುಖ್ಯಮಂತ್ರಿಯನ್ನು ಜನರು ಗಮನಿಸುತ್ತಿದ್ದಾರೆ ಟೀಕಿಸಿದ್ದಾರೆ. (ಏಜೆನ್ಸೀಸ್)
ಹನಿಮೂನ್ ರಾತ್ರಿ ಪಕ್ಕದ ಮನೆಯಲ್ಲಿ ಬಚ್ಚಿಟ್ಟುಕೊಂಡ ವರ! ಕಾರಣ ಕೇಳಿ ದಂಗಾದ ಪಾಲಕರು
ಅಯ್ಯೋ ದುರ್ವಿಧಿಯೇ! ಮದುವೆಯಾದ ಮೂರೇ ದಿನದಲ್ಲಿ ದುರಂತ ಅಂತ್ಯ ಕಂಡ ನವದಂಪತಿ