ಡೆವಿಲ್ಸ್ ಕಿಚನ್ ಎಂದೇ ಖ್ಯಾತಿ ಪಡೆದಿರುವ ತಮಿಳುನಾಡಿನ ಕೊಡೈಕೆನಾಲ್ನಲ್ಲಿರುವ ಗುಣ ಗುಹೆಯು ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು. ಕಾರಣ ಮಂಜುಮ್ಮೇಲ್ ಬಾಯ್ಸ್ ಎಂಬ ಮಲಯಾಳಂ ಸಿನಿಮಾ. ಈ ಸಿನಿಮಾ ನೋಡಿದವರಿಗೆ ‘ಡೆವಿಲ್ಸ್ ಕಿಚನ್’ ಮರೆಯಲಾಗದ ಒಂದು ಭಾಗವೇ ಸರಿ. ಜತೆಗೆ ಈ ಸಿನಿಮಾದಲ್ಲಿ ಬರುವ ತಮಿಳಿನ ‘ಕಣ್ಮಣಿ ಅನ್ಬೋಡು’ ಹಾಡು. ಇನ್ಸ್ಟಾಗ್ರಾಂ ತೆರೆದ ಕೊಡಲೇ ಮೊದಲು ಟ್ರೆಡಿಂಗ್ನಲ್ಲಿರುವ ಹಾಡಿದು. ಅಷ್ಟಕ್ಕೂ ಡೆವಿಲ್ಸ್ ಕಿಚನ್ಗೂ ‘ಕಣ್ಮಣಿ ಅನ್ಮೋಡು’ ಹಾಡಿಗೂ ಇರುವ ಲಿಂಕ್ ಏನು? ಈ ಡೇವಿಲ್ಸ್ ಕಿಚನ್ಗೆ ಹೋದವರು ಮತ್ತೆ ಬರೋದಿಲ್ಲ ಏಕೆ? ಈ ನಿಗೂಢ ಸ್ಥಳದ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ ಇಲ್ಲಿದೆ ಓದಿ…
ಡೆವಿಲ್ಸ್ ಕಿಚನ್ (ಸೈತಾನನ ಅಡುಗೆ ಕೋಣೆ)
ಗುಣ ಕೇವ್ ಅಥವಾ ಡೆವಿಲ್ಸ್ ಕಿಚನ್ ಕೊಡೈಕೆನಾಲ್ನಿಂದ 8.5 ಕಿ.ಮೀ. ದೂರದಲ್ಲಿರುವ ಪ್ರವಾಸಿ ಸ್ಥಳ. 400 ಮೀಟರ್ ಕಾಲ್ನಡಿಗೆಯ ದಾರಿಯಲ್ಲಿ ಸಾಗಿದರೆ ಈ ಗುಹೆಯ ಮುಖ್ಯ ದ್ವಾರ ಸಿಗುತ್ತದೆ. 1821 ರಲ್ಲಿ ಬ್ರಿಟಿಷರು ಈ ಗುಹೆಯನ್ನು ಮೊದಲ ಬಾರಿಗೆ ‘ಡೆವಿಲ್ಸ್ ಕಿಚನ್’ ಎಂದು ಕರೆದರು. ಈ ನಿಗೂಢ ಮತ್ತು ಗುಹೆಯನ್ನು ಮೊದಲ ಬಾರಿಗೆ ಕಂಡು ಹಿಡಿದವರು ಬ್ರಿಟಿಷ್ ಆಫೀಸರ್ ಬಿ.ಎಸ್. ವಾರ್ಡ್.
ಈ ಗುಹೆಯ ಸುತ್ತ ಶೀತ ವಾತಾವರಣವಿದ್ದು, ಇದು ಸಮುದ್ರಮಟ್ಟದಿಂದ ಸುಮಾರು 2230 ಮೀಟರ್ ಎತ್ತರದಲ್ಲಿದೆ. ಈ ಗುಹೆಯ ದ್ವಾರದಲ್ಲಿ 2 ಬೃಹದಾಕಾರದ ಕಲ್ಲು ಬಂಡೆಗಳು ಸಂಭ್ತಗಳ ಆಕಾರದಲ್ಲಿದ್ದರೆ, ಸುತ್ತಲೂ ಮರ ಗಿಡಗಳು, ಎತ್ತರದ ಹಾಗೂ ಉದ್ದನೆಯ ಬೇರುಗಳುಳ್ಳ ಮರಗಳಿವೆ. ಗುಹೆಯ ಒಳಗೆ ಹಲವಾರು ಕತ್ತಲೆಯ ಕೋಣೆಗಳಿದ್ದು, ಸಾವಿರಾರು ಬಾವಲಿಗಳ ವಾಸತಾಣವಾಗಿದೆ. ಇದಿಷ್ಟೇ ಅಲ್ಲ ಇದರೊಳಗೆ ಹಲವಾರು ಕತ್ತಲೆಯ ಗುಂಡಿಗಳಿವೆ. ಗುಹೆಯ ಆಳಕ್ಕೆ ಹೋದಂತೆಲ್ಲ ಆಕ್ಸಿಜನ್ ಮಟ್ಟ ಕಡಿಮೆಯಾಗುತ್ತಾ ಹೋಗುತ್ತದೆ. ಪಾಂಡವರು ತಮ್ಮ ಅಜ್ಞಾತವಾಸದ ಸಮಯದಲ್ಲಿ ಈ ಗುಹೆಯಲ್ಲೇ ಅಡುಗೆ ಮಾಡಿಕೊಂಡು ತಂಗಿದ್ದರು ಎಂಬ ಮಾತಿದೆ.
‘ಕಣ್ಮಣಿ ಅನ್ಬೋಡು….ಕಾದಲನ್’
1991ರಲ್ಲಿ ತೆರೆಕಂಡ ಕಮಲ್ ಹಾಸನ್ ನಟನೆಯ ತಮಿಳಿನ ‘ಗುಣ’ ಚಿತ್ರದ ನಂತರ ಈ ಗುಹೆಗೆ ಡೆವಿಲ್ಸ್ ಕಿಚನ್ ಬದಲಿಗೆ ‘ಗುಣ ಕೇವ್’ (ಗುಣ ಗುಹೆ) ಎಂಬ ಹೆಸರು ಬಂತು. ಈ ಸಿನಿಮಾದಲ್ಲಿ ಬರುವ ‘ಕಣ್ಮಣಿ ಅನ್ಬೋಡು ಕಾದಲನ್’ಹಾಡು ಚಿತ್ರೀಕರಣವಾಗಿದ್ದು ಇದೇ ಗುಹೆಯಲ್ಲಿ. ನಂತರ ಈ ಹಾಡಿದ ಜತೆ ಗುಹೆಯು ಹೆಚ್ಚು ಪ್ರಖ್ಯಾತಿ ಪಡೆಯಿತು. ನಂತರದ ದಿನಗಳಲ್ಲಿ ಈ ಗುಹೆಯು ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿತಲ್ಲದೇ, ಇಲ್ಲಿಗೆ ಭೇಟಿ ಕೊಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಯಿತು. ಇಲ್ಲಿನ ಅಧಿಕಾರಿಗಳು ಪ್ರವಾಸಿಗರಿಗೆ ಗುಹೆಯ ಆಳ ಹಾಗೂ ಅಪಾಯದ ಬಗ್ಗೆ ಮುನ್ನೆಚ್ಚರಿಕೆಗಳನ್ನು ನೀಡಿದ್ದರು. ಆದ್ಯಾಗೂ ಪ್ರವಾಸಿಗರ ಕುತುಹೂಲ ಅವರನ್ನು ಗುಹೆಯ ಒಳಭಾಗಕ್ಕೆ ಕರೆದುಕೊಂಡು ಹೋಗುತ್ತಿತ್ತು. ತಮಿಳುನಾಡು ಸರ್ಕಾರದ ಅಧಿಕೃತ ವರದಿಯ ಪ್ರಕಾರ, 13 ಜನರು ಈ ಗುಹೆಯ ಒಳಭಾಗದ ಗುಂಡಿಯೊಳಗೆ ಬಿದ್ದು ಸತ್ತಿದ್ದಾರೆ. ಆದರೆ ಸತ್ತವರ ಒಂದು ಚೂರು ಮೂಳೆಯೂ ಸಿಕ್ಕಿಲ್ಲ.
2006ರಲ್ಲಿ, ಎರ್ನಾಕುಲಂ ಜಿಲ್ಲೆಯ ಮಂಜುಮ್ಮೇಲ್ನ 11 ಯುವಕರ ತಂಡವೊಂದು ಇಲ್ಲಿಗೆ ಪ್ರವಾಸಕ್ಕೆ ಬಂದಿತ್ತು. ಈ ವೇಳೆ ಆಕಸ್ಮಿಕವಾಗಿ ತಂಡದಲ್ಲಿನ ಒಬ್ಬ ಯುವಕ ಈ ಗುಹೆಯ ಗುಂಡಿಯೊಳಗೆ ಬಿದಿದ್ದನು. ಕಾರ್ಯಾಚರಣೆಗಳ ಬಳಿಕ ಪವಾಡ ಎಂಬಂತೆ ಆ ಯುವಕನನ್ನು ಸುರಕ್ಷಿತವಾಗಿ ಮೇಲೆ ತರಲಾಯಿತು. ಈ ಪ್ರಕರಣದ ನಂತರ ತಮಿಳುನಾಡು ಸರ್ಕಾರವು ಸುಮಾರು 10 ವರ್ಷಗಳವರೆಗೆ ಈ ಗುಹೆಗೆ ಪ್ರವೇಶವನ್ನು ನಿರಾಕರಿಸಿತ್ತು. ಆದರೆ ಈಗ ಈ ಗುಹೆಯನ್ನು ದೂರದಿಂದ ನೋಡಲು ಪ್ರವಾಸಿಗರಿಗೆ ಅನುಮತಿ ನೀಡಲಾಗಿದೆ. ಇದೇ ಕಥೆಯನ್ನು ಆಧರಿಸಿ ಮಂಜುಮ್ಮೇಲ್ ಸಿನಿಮಾವನ್ನು ಮಾಡಲಾಗಿದೆ.
ಟೈಟಾನಿಕ್ ದುರಂತ: ನಾಯಕಿಯ ಜೀವ ಉಳಿಸಿದ ಮರದ ಹಲಗೆ ಮಾರಾಟವಾದ ಬೆಲೆ ಕೇಳಿದ್ರೆ ಬೆರಗಾಗ್ತೀರಾ!