ಶಿವಮೊಗ್ಗ: ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈಗಾಗಲೇ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಏಳು ಹುರಿಯಾಳುಗಳ ಹೆಸರನ್ನು ಘೋಷಿಸಿ 21 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಾಕಿ ಉಳಿಸಿಕೊಂಡಿದೆ. ಈ ವಾರದಲ್ಲೇ ಕರ್ನಾಟಕದ ಎರಡನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ.
ಈಗಾಗಲೇ ಹೆಸರು ಘೋಷಣೆಯಾಗಿರುವ ಏಳು ಅಭ್ಯರ್ಥಿಗಳು ಪ್ರಚಾರ ಕಾರ್ಯ ಆರಂಭಿಸಿದ್ದು, ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅವರ ಪತ್ನಿ ಗೀತಾ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಬುಧವಾರ (ಮಾರ್ಚ್ 20) ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ಪತ್ನಿ ಗೀತಾಗೆ ನೆರಳಾಗಿ ಶಿವರಾಜ್ ಕುಮಾರ್ ಸಹ ಬಂದಿದ್ದಾರೆ. ಇಬ್ಬರೂ ಒಟ್ಟಿಗೆ ಬಿಸಿನಲ್ಲಿಯೇ ಶಿವಮೊಗ್ಗದ ಹಲವು ಬೀದಿಗಳನ್ನು ಸುತ್ತಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಶಿವಮೊಗ್ಗದ ಭದ್ರಾವತಿಯ ಕಾರೇಹಳ್ಳಿ ಗ್ರಾಮದಿಂದ ಪ್ರಚಾರ ಕಾರ್ಯ ಆರಂಭಿಸಿದ ಗೀತಾ ಶಿವರಾಜ್ಕುಮಾರ್ ಸ್ಥಳೀಯ ನಾಯಕರು ಸಾಥ್ ನೀಡಿದ್ದಾರೆ. ಈ ವೇಳೆ ಅದ್ಧೂರಿಯಾಗಿ ಬೈಕ್ ರ್ಯಾಲಿ ನಡೆಸಿದ್ದಾರೆ.
ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಅಂತಿಮ; ಸಂಭಾವ್ಯರ ಪಟ್ಟಿ ಹೀಗಿದೆ
ಈ ವೇಳೆ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಗೀತಾ ಶಿವರಾಜ್ಕುಮಾರ್, ನಾನು ಭದ್ರಾವತಿಯ ಕಾರೇಹಳ್ಳಿ ಗ್ರಾಮದಿಂದ ಪ್ರಚಾರ ಕಾರ್ಯ ಆರಂಭಿಸುತ್ತಿದ್ದೇನೆ. ಜನರು ಉತ್ಸಾಹಭರಿತರಾಗಿದ್ದು, ನಾನು ಗೆಲ್ಲುತ್ತೇನೆ ಎಂಬ ಭರವಸೆ ನನಗಿದೆ. ನನ್ನ ಪಕ್ಷದ ಮಾತಿನಂತೆ ಕೆಲಸ ಮಾಡುತ್ತೇನೆ. ಶಿವಮೊಗ್ಗ ನನ್ನ ತಂದೆಯವರ ಕ್ಷೇತ್ರ ಅವರ ಸೇವೆ ಮತ್ತು ನನ್ನ ಸಹೋದರನ ಸೇವೆ ನನಗೆ ಚುನಾವಣೆಯಲ್ಲಿ ಸಹಾಯ ಮಾಡುತ್ತದೆ. ಪ್ರತಿ ಗ್ರಾಮದಲ್ಲೂ ಪ್ರಚಾರ ಮಾಡುತ್ತೇನೆ. ನಾನು ಯಾವುದೇ ಸ್ಟಾರ್ ಪ್ರಚಾರಕರನ್ನು ಆಹ್ವಾನಿಸಿಲ್ಲ. ನನ್ನನ್ನು ಬೆಂಬಲಿಸುವವರನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
ನಾವು ಭಧ್ರಾವತಿಯ ಕಾರೇಹಳ್ಳಿ ಗ್ರಾಮದಿಂದ ಪ್ರಚಾರ ಆರಂಭಿಸುತ್ತಿದ್ದೇವೆ. ಶಿವಮೊಗ್ಗದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ಇದೆ. 24ರಿಂದ ನಿರಂತರ ಪ್ರಚಾರ ಮಾಡುತ್ತೇವೆ. ನಾನು ನನ್ನ ಶೂಟಿಂಗ್ ಜೊತೆಗೆ ಪ್ರಚಾರ ಮಾಡುತ್ತೇನೆ ಇದಕ್ಕಾಗಿ ಸಮಯವನ್ನು ಸರಿದೂಗಿಸಬೇಕಾಗಿದೆ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ.