ಶಿವಮೊಗ್ಗ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಾನು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿ ಗೆಲ್ಲುವುದು ಖಚಿತ. ನಾನು ಗೆದ್ದ ನಂತರ ವಿಜಯೇಂದ್ರ ತಮ್ಮ ರಾಜ್ಯಾಧ್ಯಕ್ಷರ ಹುದ್ದೆ ಕಳೆದುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ ಈ ಕುರಿತು ಮಾತನಾಡಿದ ಈಶ್ವರಪ್ಪ ನಾನು ಸ್ಪರ್ಧಿಸುವುದು ಖಚಿತ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ. ಸ್ಪರ್ಧೆ ಬಗ್ಗೆ ಇಡೀ ರಾಜ್ಯದಲ್ಲಿ ಚರ್ಚೆ ಆಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಧಿಕೃತವಾಗಿ ರಿವೀಲ್ ಆಯ್ತು ಆರ್ಸಿಬಿ ನೂತನ ಜೆರ್ಸಿ, ಲೋಗೋ; ಹೊಸ ಅಧ್ಯಾಯ ಎಂದ ಫ್ಯಾನ್ಸ್
ಜನರು ಲೋಕಸಭೆ ಚುನಾವಣೆಯಲ್ಲಿ ಬಿ.ವೈ ರಾಘವೇಂದ್ರನನ್ನ ಸೋಲಿಸಿ ಬಿಜೆಪಿ ಕಟ್ಟಾ ಅನುಯಾಯಿಯಾದ ನನ್ನನ್ನು ಗೆಲ್ಲಿಸಬೇಕು. ಈಶ್ವರಪ್ಪ ಸ್ಪರ್ಧೆ ಬಗ್ಗೆ ಇಡೀ ರಾಜ್ಯದಲ್ಲಿ ಚರ್ಚೆ ಆಗ್ತಿದೆ. ಲೋಕಸಭೆ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆ. ಚುನಾವಣಾ ಫಲಿತಾಂಶ ಬಂದು ಬಿಜೆಪಿ ಕಾರ್ಯಕರ್ತರ ವಿಜಯವಾಗುತ್ತಿದ್ದಂತೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಮ್ಮ ಹುದ್ದೆಗೆ ರಾಜೀನಾಮೆ ಕೊಡುತ್ತಾರೆ.
ನನ್ನ ಪುತ್ರ ಕಾಂತೇಶ್ಗೆ ವಿಧಾನಪರಿಷತ್ ಹಾಗೂ ನನ್ನನ್ನು ರಾಜ್ಯಪಾಲರನ್ನಾಗಿ ಮಾಡುತ್ತೇವೆ ಎಂದು ಬಿಜೆಪಿ ವರಿಷ್ಠರು ಮಾತು ಕೊಟ್ಟಿದ್ದಾರೆ. ಆದರೆ ನನಗೆ ಸ್ಥಾನಮಾನಗಳು ಬೇಡ, ಪಕ್ಷ ಉಳಿಯಬೇಕು ಅಷ್ಟೇ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸ್ವಪಕ್ಷೀಯರ ವಿರುದ್ಧ ಮತ್ತೊಮ್ಮೆ ಗುಡುಗಿದ್ದಾರೆ.