ಉಜ್ಜಯಿನಿ: ವಿಶ್ವ ಶ್ರೀಮಂತ ಕ್ರಿಕೆಟ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಆಟಗಾರರು ತಮ್ಮ ತಂಡಗಳನ್ನು ಕೂಡಿಕೊಳ್ಳುತ್ತಿದ್ದಾರೆ. 17 ನೇ ಆವೃತ್ತಿಯ ಐಪಿಎಲ್ಗೆ ಮಾರ್ಚ್ 22ರಂದು ವರ್ಣರಂಜಿತ ಚಾಲನೆ ದೊರೆಯಲಿದ್ದು, ಈಗಾಗಲೇ ಸ್ಟಾರ್ ಆಟಗಾರರು ಭರ್ಜರಿ ತಯಾರಿಯನ್ನು ಆರಂಭಿಸಿದ್ದಾರೆ.
ಐಪಿಎಲ್ ಆರಂಭಕ್ಕೂ ಮುನ್ನ ಲಖನೌ ಸೂಪರ್ಜೈಂಟ್ಸ್ ತಂಡದ ನಾಯಕ ಕೆ.ಎಲ್. ರಾಹುಲ್ ಕುಟುಂಬ ಸಮೇತರಾಗಿ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಬಾಬಾ ಮಹಾಕಾಳೇಶ್ವರದ ಜ್ಯೋತಿರ್ಲಿಂಗ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದರ ಪೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕನ್ನಡಿಗ ಕೆಎಲ್ ರಾಹುಲ್ ಮಹಾಕಾಲೇಶ್ವರ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿ ಆಶೀರ್ವಾದ ಪಡೆದರು. ಐಪಿಎಲ್ ಆರಂಭಕ್ಕೂ ಮುನ್ನವೇ ರಾಹುಲ್ ಟೆಂಪಲ್ಗೆ ಭೇಟಿ ನೀಡಿದ್ದು ಕುತೂಹಲ ಮೂಡಿಸಿದೆ. ಸತತ ಮೂರನೇ ಬಾರಿ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿರುವ ರಾಹುಲ್, ತಂಡಕ್ಕೆ ಚೊಚ್ಚಲ ಟ್ರೋಫಿ ತೊಡಿಸುವ ಕನಸು ಕಾಣುತ್ತಿದ್ದಾರೆ.
ಇದನ್ನೂ ಓದಿ: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಮಾಜಿ ದಂಪತಿ; ಮತ್ತೆ ಒಂದಾಗ್ತಾರ ಈ ಸ್ಟಾರ್ ಕಪಲ್
ಅಪಾರ ದೈವ ಭಕ್ತರಾಗಿರುವ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ, ಕನ್ನಡಿಗ ಕೆ.ಎಲ್ ರಾಹುಲ್ ತಮ್ಮ ಕ್ರಿಕೆಟ್ ಬಿಡುವಿನ ವೇಳೆ ಹಲವು ದೇವಾಲಯಕ್ಕೆ ಹೋಗುವ ಮೂಲಕ ವಿಶೇಷ ಪೂಜೆ ಸಲ್ಲಿಸುತ್ತಲೇ ಇರುತ್ತಾರೆ. ಅದರಲ್ಲೂ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮತ್ತು ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಾಗ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸುತ್ತಿರುತ್ತಾರೆ. 2 ತಿಂಗಳ ಹಿಂದೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಭೇಟಿ ಶ್ರೀ ದೇವಿಯ ದರ್ಶನ ಪಡೆದಿದ್ದರು.
ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಿಂದ ಕೆ.ಎಲ್ ರಾಹುಲ್ ಫಿಟ್ನೆಸ್ ಸರ್ಟಿಫಿಕೆಟ್ ಪಡೆದಿದ್ದು ಐಪಿಎಲ್ ಮೊದಲ ಪಂದ್ಯದಿಂದಲೇ ತಂಡಕ್ಕೆ ಲಭ್ಯರಾಗಲಿದ್ದಾರೆ. ಆದರೆ, ಕೀಪಿಂಗ್ ನಡೆಸುವ ಸಾಧ್ಯತೆ ಕಡಿಮೆ ಎಂಬುದಾಗಿ ವರದಿಯಾಗಿದೆ. ಇಂಗ್ಲೆಂಡ್ ವಿರುದ್ಧದ ತವರಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಆಡಿದ ಬಳಿಕ ಗಾಯಗೊಂಡ ರಾಹುಲ್ ಉಳಿದ ನಾಲ್ಕು ಪಂದ್ಯಗಳಿಗೆ ಅಲಭ್ಯರಾಗಿದ್ದರು.