ನಮ್ಮ ಅಜ್ಜನಿಗೆ ಇಬ್ಬರು ಹೆಂಡತಿಯರು ಮತ್ತು ಐದು ಜನ ಗಂಡು ಮಕ್ಕಳು . ಈಗ ನಮ್ಮ ಅಜ್ಜ ಮತ್ತು ಇಬ್ಬರು ಅಜ್ಜಿಯರೂ ಇಲ್ಲ. ನಮ್ಮ ಅಜ್ಜನ ಎಲ್ಲ ಸ್ವಯಾರ್ಜಿತ ಆಸ್ತಿಗಳನ್ನು ನಮ್ಮ ಅಜ್ಜನ ಕಿರಿಯ ಮಗ ಒಬ್ಬನೇ ಯಾರಿಗೂ ಗೊತ್ತಿಲ್ಲದ ಹಾಗೆ ನಮ್ಮ ಅಜ್ಜನಿಂದ ಉಯಿಲು (ವಿಲ್) ಬರೆಯಿಸಿಕೊಂಡಿದ್ದಾನೆ. ಉಯಿಲು ಬರೆಯಿಸಿಕೊಳ್ಳುವ ಹಿಂದಿನಿಂದ ನಮ್ಮ ಅಜ್ಜ ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಅಜ್ಜನ ಉಳಿದ ಮಕ್ಕಳು ಆಸ್ತಿಯಲ್ಲಿ ಭಾಗ ಪಡೆಯಲು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ, ದಾರಿ ತೋರಿಸಿ.
ಉತ್ತರ: ನಿಮ್ಮ ಪ್ರಶ್ನೆಯಲ್ಲಿ ಸಂಪೂರ್ಣ ಮಾಹಿತಿ ಇಲ್ಲ. ನಿಮ್ಮ ಅಜ್ಜನ ಉಳಿದ ಮಕ್ಕಳು ತಮಗೆಲ್ಲಾ ಆಸ್ತಿಯಲ್ಲಿ ಐದನೇ ಒಂದುಭಾಗ ಇದೆ ಎಂದು ಭಾಗಕ್ಕೆ ದಾವೆ ಹಾಕಬಹುದು. ಅವರು ಉಯಿಲಿನ ಕಾಪಿ ನೋಡಿದ್ದರೆ, ಅದರ ಕಾಪಿ ತಮ್ಮ ಹತ್ತಿರ ಇದ್ದರೆ ಆಗ ವಿಭಾಗಕ್ಕೆ ದಾವೆ ಹಾಕಿ, ಆ ಉಯಿಲು ಸಿಂಧುವಾದದ್ದಲ್ಲ ಎನ್ನುವ ಹಕ್ಕು ಘೋಷಣೆಯನ್ನೂ ಕೇಳಬಹುದು. ಅಥವಾ ಉಯಿಲಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿದ್ದರೆ , ಬರಿಯ ವಿಭಾಗಕ್ಕೆ ದಾವೆ ಹಾಕ ಬಹುದು.
ಆಗ ನಿಮ್ಮ ಅಜ್ಜನ ಕಿರಿಯ ಮಗ ತನಗೆ ವಿಲ್ ಇದೆ ಎಂದು ಹೇಳಿದರೆ, ಆ ದಾಖಲೆಯನ್ನು ನೋಡಿ ನಂತರ ಉಳಿದವರು ಆ ದಾಖಲೆಯ ಬಗ್ಗೆ ರಿಜಾಯಿಂಡರ್ ಹಾಕಿ ದಾವೆಯನ್ನು ಮುಂದುವರೆಸಬಹುದು. ಉಯಿಲು ಸಿಂಧುವಾದದ್ದು ಎಂದು ಸಾಬೀತು ಪಡಿಸುವ ಹೊರೆ ನಿಮ್ಮ ಅಜ್ಜನ ಕಿರಿಯ ಮಗನ ಮೇಲೆ ಇರುತ್ತದೆ. ಅದನ್ನು ಸಾಬೀತು ಪಡಿಸಿದರೆ ಆಸ್ತಿ ಅವನಂತೆ ಆಗುತ್ತದೆ, ಸಾಬೀತು ಪಡಿಸದಿದ್ದರೆ ಅಜ್ಜನ ಉಳಿದ ಮಕ್ಕಳಿಗೆ ಮತ್ತು ಅಜ್ಜನ ಕಿರಿಯಮಗನಿಗೆ ಆಸ್ತಿಯಲ್ಲಿ ಸಮಭಾಗ ಸಿಗುತ್ತದೆ.
ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿ ಉಯಿಲು ಬರೆಯಬಾರದೆಂದು ಕಾನೂನಿನಲ್ಲಿ ಇಲ್ಲ. ಆದರೆ ಉಯಿಲು ಮಾಡುತ್ತಿರುವ ವ್ಯಕ್ತಿಯ ಮನಸ್ಸು ಮತ್ತು ಬುದ್ಧಿ ಸುಸ್ಥಿತಿಯಲ್ಲಿರಬೇಕು. ಉಯಿಲಿಗೆ ಸಾಕ್ಷಿ ಆಗಿದ್ದವರು ಮತ್ತು ಉಯಿಲನ್ನು ಬರೆದವರು ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಬಂದಾಗ, ಅವರ ವಿಚಾರಣೆಯಲ್ಲಿ , ಉಯಿಲು ಮಾಡುವವರು, ಉಯಿಲು ಬರೆಯಲು ತಿಳುವಳಿಕೆ ಕೊಡುವಷ್ಟು ಚೈತನ್ಯ ಹೊಂದಿದ್ದರೇ? ಅಥವಾ ಉಯಿಲು ಯಾರ ಪರ ಆಗಿದೆಯೋ ಅವರು ಏನೂ ತಿಳಿಸದೆ ಉಯಿಲು ಮಾಡಿದವರ ಸಹಿ /ಹೆಬ್ಬೆಟ್ಟನ್ನು ಮೋಸದಿಂದ ಹಾಕಿಸಿಕೊಂಡರೇ ?ಎನ್ನುವುದೆಲ್ಲ ಹೊರಬರುತ್ತದೆ. ಆ ನಂತರ ಎಲ್ಲ ಅಂಶಗಳನ್ನೂ ಗಮನಿಸಿ ಪರಾಮರ್ಶಿಸಿ ನ್ಯಾಯಾಲಯ ಸೂಕ್ತ ತೀರ್ಪನ್ನು ಕೊಡುತ್ತದೆ.
ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು ಕ್ಲಿಕ್ಕಿಸಿ.
ಮಾವಂದಿರು ಕೊಡುವ ಜಮೀನಿಗೆ ಅವರ ಮಕ್ಕಳಿಂದ ತಕರಾರು ಬರದಿರಲು ಏನು ಮಾಡಬೇಕು?
ಅಪ್ಪನ ಆಸ್ತಿಯಲ್ಲಿ ತನ್ನಿಚ್ಛೆಯಂತೆ ಭಾಗ ಮಾಡುವ ಅಧಿಕಾರ ಅಮ್ಮನಿಗೆ ಇದೆಯೆ?
ಮಾವಂದಿರು ಕೊಡುವ ಜಮೀನಿಗೆ ಅವರ ಮಕ್ಕಳಿಂದ ತಕರಾರು ಬರದಿರಲು ಏನು ಮಾಡಬೇಕು?