ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ, ಕಾಂಗ್ರೆಸ್ ಮುಖಂಡ ಅನಿಲ್ ದೇಶಮುಖ್ ವಿರುದ್ಧ ಹಣದ ಅಕ್ರಮ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಿದೆ.
ಕಳೆದ ತಿಂಗಳು ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರು ದೇಶ್ಮುಖ್ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿ ಬಹಿರಂಗ ಪತ್ರ ಬರೆದಿದ್ದರು. ದೇಶ್ಮುಖ್ ಅವರು ಸುಮಾರು 100 ಕೋಟಿ ರೂಪಾಯಿ ಲಂಚ ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದರು. ಈ ಬಗೆಗಿನ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿ, ಬಾಂಬೆ ಹೈಕೋರ್ಟ್ ಸಿಬಿಐಗೆ ಪ್ರಾಥಮಿಕ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆದೇಶಿಸಿತ್ತು.
ಈ ಆದೇಶದ ಹಿನ್ನೆಲೆಯಲ್ಲಿ ದೇಶಮುಖ್ ವಿರುದ್ಧ ಇತ್ತೀಚೆಗೆ ಎಫ್ಐಆರ್ ದಾಖಲಾಗಿತ್ತು. ಈಗ ಇದರ ಆಧಾರದ ಮೇಲೆ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ದೇಶಮುಖ್ ಅವರಿಗೆ ಇಡಿ ಅಧಿಕಾರಿಗಳು ಸದ್ಯದಲ್ಲಿಯೇ ಸಮನ್ಸ್ ನೀಡಲಿದ್ದಾರೆ.
ಪರಂ ಬೀರ್ ಸಿಂಗ್ ಅವರ ಆರೋಪದ ಹಿನ್ನೆಲೆಯಲ್ಲಿ ಅನಿಲ್ ದೇಶಮುಖ್ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಪರಂ ಬೀರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಬೇರೊಂದು ಪ್ರಕರಣದಲ್ಲಿ ಸರಿಯಾಗಿ ತನಿಖೆ ಮಾಡಿಲ್ಲ ಎಂಬ ಕಾರಣವೊಡ್ಡಿ ಪರಂ ಬೀರ್ ಅವರ ಟ್ರಾನ್ಸ್ಫರ್ ಮಾಡಲಾಗಿತ್ತು. ಸಚಿವರ ಭ್ರಷ್ಟಾಚಾರಗಳ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ದೂರು ಕೊಟ್ಟಿದ್ದರಿಂದ ತನ್ನನ್ನು ವರ್ಗಾವಣೆ ಮಾಡಲಾಗಿದೆ ಎಂದು ಪರಂ ಬೀರ್ ಇದೇ ವೇಳೆ ಆರೋಪಿಸಿದ್ದರು.
ತಾತ ಬಾಯಿ ಮಾತಿನಲ್ಲಿ ಹೇಳಿದ ಮಾತ್ರಕ್ಕೆ ಉಳುಮೆ ಮಾಡಿದವರಿಗಷ್ಟೇ ಜಮೀನು ಸಿಗುವುದಿಲ್ಲ
ಹೊರಗೆ ಬಂದವರ ಮೇಲೆ ಬಲಪ್ರಯೋಗ ಬೇಡ- ಕಾನೂನುರೀತ್ಯಾ ಕ್ರಮ ಎಂದು ಪೊಲೀಸರಿಗೆ ಸೂಚನೆ
ಲಾಕ್ಡೌನ್ ವಿಶೇಷ: ಇಂದಿರಾ ಕ್ಯಾಂಟೀನ್ನಲ್ಲಿ ಸರ್ಕಾರದಿಂದ ಫ್ರೀ ಉಪಾಹಾರ, ಊಟ
ಗಂಡನಿಗೆ ಪತ್ನಿಯ ಮೇಲೆ ದೈಹಿಕ ಕಾಮನೆಗಳೇ ಬರದುದಕ್ಕೆ ಕಾರಣಗಳು ಇವೆಲ್ಲಾ ಇರುತ್ತವಮ್ಮಾ…