ಬೆಂಗಳೂರು: ಎಟಿಎಂ ಬೂತ್ನಲ್ಲಿ ಹಣ ಜಮೆ ಮಾಡಲು ಬರುವರಿಗೆ ಯಾಮಾರಿಸಿ ಹಣ ದೋಚುತ್ತಿದ್ದ ವಂಚಕ, ಪೊಲೀಸರಿಗೆ ಉಚಿತವಾಗಿ ಜರ್ಕಿನ್ ಕೊಡುವುದಾಗಿ ಠಾಣೆಗೆ ಹೋಗಿ ಕಂಬಿ ಹಿಂದೆ ಸೇರಿದ್ದಾನೆ.
ಬಿಎಚ್ಇಎಲ್ ಲೇಔಟ್ ನಿವಾಸಿ ನವೀನ್ ಕುಮಾರ್ (25) ಬಂಧಿತ. ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ನವೀನ್ ಕುಮಾರ್, ಎಲೆಕ್ಟ್ರಿಕಲ್ ಗುತ್ತಿಗೆದಾರನ ಜತೆ ಕೆಲಸ ಮಾಡಿಕೊಂಡು ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ತಂತ್ರಜ್ಞಾನ ಅರಿವಿದ್ದ ನವೀನ್, ಗೂಗಲ್ ಪ್ಲೈಸ್ಟೋರ್ನಲ್ಲಿ ವೈಪರ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಆ ಆ್ಯಪ್ ಮೂಲಕ ನಕಲಿ ‘ಪೇಮೆಂಟ್ ಔಟ್’ ಸಂದೇಶ ಸೃಷ್ಟಿಸುವ ಜ್ಞಾನ ಹೊಂದಿದ್ದ. ಬ್ಯಾಂಕ್ಗಳ ಎಟಿಎಂ ಬೂತ್ನಲ್ಲಿ ಅಳವಡಿಸಿರುವ ಸಿಡಿಎಂ ಮೆಷನ್ನಲ್ಲಿ ಹಣ ಜಮೆ ಮಾಡಲು ಬರುವ ಗ್ರಾಹಕರನ್ನೇ ಟಾರ್ಗೆಟ್ ಮಾಡಿ ನಿಗಾವಹಿಸುತ್ತಿದ್ದ.
ಹಣ ತುಂಬಲು ಬರುತ್ತಿದ್ದ ಗ್ರಾಹಕರನ್ನು ಎಟಿಎಂ ಬೂತ್ ಬಳಿ ತಡೆದು, ತುರ್ತಾಗಿ ಹಣ ಬೇಕಿದೆ. ಆದರೆ, ನನ್ನ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡುವ ಮಿತಿ ಮೀರಿದೆ. ನಗದು ಹಣ ಕೊಟ್ಟರೇ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡುತ್ತೆನೆ ಎಂದು ನಂಬಿಸುತ್ತಿದ್ದ. ಅಮಾಯಕರು, ಹುಡುಗ ಕಷ್ಟದಲ್ಲಿ ಇದ್ದಾನೆ ಎಂದು ನಂಬಿ ಆತನ ಕೈಗೆ ನಗದು ಕೊಡುತ್ತಿದ್ದರು. ಆತ ವೈಪರ್ ಆ್ಯಪ್ ಮೂಲಕ ‘ಪೇಮೆಂಟ್ ಔಟ್’ ಎಂಬ ನಕಲಿ ಹಣ ವರ್ಗಾವಣೆ ಆಗಿರುವ ಸಂದೇಶವನ್ನು ತೋರಿಸಿ ಅಲ್ಲಿಂದ ತೆರಳುತ್ತಿದ್ದ.
ಇದೇ ರೀತಿ ಆಗಸ್ಟ್ 12ರಂದು ರಾಜರಾಜೇಶ್ವರಿನಗರ ನಿಮಿಷಾಂಬ ಸರ್ಕಲ್ ಬಳಿಯ ಎಸ್ಬಿಐ ಬ್ಯಾಂಕ್ನ ಸಿಡಿಎಂ ಮೆಷನ್ನಲ್ಲಿ ಹಣ ಜಮೆ ಮಾಡಲುಬಂದ ಗ್ರಾಹಕನಿಗೆ ಯಾಮಾರಿಸಿ ಹಣ ದೋಚಿದ್ದ. ಎಷ್ಟು ಹೊತ್ತಾದರು ತಮ್ಮ ಬ್ಯಾಂಕ್ ಖಾತೆಗೆ ಹಣ ಜಮೆ ಆಗದೆ ಇದ್ದಾಗ ವಂಚನೆಗೆ ಒಳಗಾದ ಗ್ರಾಹಕ, ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಶಿವಣ್ಣ ನೇತೃತ್ವದ ತಂಡ ಆರೋಪಿ ಪತ್ತೆಗೆ ಬಲೆಬೀಸಿದ್ದರು. ಕೃತ್ಯ ನಡೆದ ಸ್ಥಳ ಸಿಡಿಎಂ ಮಿಷನ್ ಬಳಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಆರೋಪಿ ಮುಖ ಚಹರೆ ಪತ್ತೆಯಾಗಿತ್ತು. ಮುಖ ಚಹರೆ ಆಧರಿಸಿ ಆರೋಪಿಗೆ ಬಲೆಬೀಸಿದ್ದರು.
ಇತ್ತೀಚೆಗೆ ಪೊಲೀಸ್ ಇನ್ಸ್ಪೆಕ್ಟರ್ ಭೇಟಿಗೆ ಠಾಣೆಗೆ ಬಂದಾಗ ಕ್ರೈಂ ಸಿಬ್ಬಂದಿ ಆರೋಪಿ ಮುಖ ಚಹರೆ ಗಮನಿಸಿ ಅನುಮಾನಬಂದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.
ಅಲ್ಲದೆ, ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಹ ಗ್ರಾಹಕರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, 55 ಸಾವಿರ ರೂ. ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಸಿ ಕ್ಯಾಮಾರದಲ್ಲಿ ಸೆರೆಸಿಕ್ಕ ಮುಖ ಚಹರೆ :
ಉತ್ತರಹಳ್ಳಿ ರಸ್ತೆ ಚನ್ನಸಂದ್ರದಲ್ಲಿ ಆರ್.ಆರ್.ನಗರ ಠಾಣೆ ಹೊಯ್ಸಳ ಸಿಬ್ಬಂದಿ ಗಸ್ತು ಇದ್ದಾಗ ಅವರನ್ನು ಆರೋಪಿ ನವೀನ್ ಕುಮಾರ್ ಭೇಟಿ ಮಾಡಿದ್ದ. ನಿಮ್ಮ ಠಾಣೆ ಎಲ್ಲ ಅಧಿಕಾರಿ, ಸಿಬ್ಬಂದಿಗೆ ಉಚಿತವಾಗಿ ಜರ್ಕಿನ್ ಕೊಡುತ್ತೇನೆ ಎಂದು ಆಮಿಷವೊಡ್ಡಿದ್ದ. ಅದಕ್ಕೆ ಹೊಯ್ಸಳ ಸಿಬ್ಬಂದಿ ಪೊಲೀಸ್ ಇನ್ಸ್ಪೆಕ್ಟರ್ ಶಿವಣ್ಣ ಅವರನ್ನು ಭೇಟಿಗೆ ಸೂಚಿಸಿದ್ದರು. ಅದರಂತೆ ಠಾಣೆಗೆ ಬಂದ ನವೀನ್, ಇನ್ಸ್ಪೆಕ್ಟರ್ರನ್ನು ಭೇಟಿ ಮಾಡಿದ್ದ. ಅಷ್ಟೊತ್ತಿಗೆ ಕ್ರೈಂ ವಿಭಾಗ ಸಿಬ್ಬಂದಿ ನವೀನ್ ಮುಖ ಚಹರೆ ನೋಡಿ ಎಟಿಎಂ ಬೂತ್ನಲ್ಲಿ ಸೆರೆಸಿಕ್ಕ ಸಿಸಿ ಕ್ಯಾಮರಾ ಸೆರೆಯಾಗಿದ್ದ ಆರೋಪಿಯೇ ಇರಬೇಕೆಂದು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಮುಖವಾಡ ಕಳಚಿತ್ತು.
ಬ್ಯಾಂಕ್ ಗ್ರಾಹಕರಿಗೆ ಜಾಗೃತಿ :
ಪಶ್ಚಿಮ ವಿಭಾಗ ಪೊಲೀಸರು ಬ್ಯಾಂಕ್ ಗ್ರಾಹಕರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಬ್ಯಾಂಕ್ ಮತ್ತು ಎಟಿಎಂ ಬೂತ್ಗೆ ಬರುವ ಗ್ರಾಹಕರಿಗೆ ‘ ಅಪರಿಚಿತ ವ್ಯಕ್ತಿಗಳ ಜತೆ ಹೆಚ್ಚು ಮಾತನಾಡಬೇಡಿ. ಹಣ ಡ್ರಾ ಅಥವಾ ಜಮೆ ಮಾಡಲು ಅಪರಿಚಿತರ ಸಹಾಯ ಪಡೆಯಬೇಡಿ. ಜಾಗೃತವಾಗಿ ಇರುವಂತೆ’ ಪೊಲೀಸ್ ಸಿಬ್ಬಂದಿ ಅರಿವು ಮೂಡಿಸುತ್ತಾರೆ.
VIDEO: ಯುವತಿ ಕೇಳಿದ ಪ್ರಶ್ನೆಗೆ ನಾಚುತ್ತಲೇ ಉತ್ತರಿಸಿದ ತಮಿಳುನಾಡು ಸಿಎಂ ಸ್ಟಾಲಿನ್- ವಿಡಿಯೋ ವೈರಲ್
ನನ್ನ ತಾಯಿಯನ್ನೇ ಮತಾಂತರ ಮಾಡಿದ್ದಾರೆ- ಪ್ರಶ್ನಿಸಿದ್ರೆ ರೇಪ್ ಕೇಸ್ ಹಾಕಿಸ್ತೇನೆ ಅಂತಾರೆ… ಗೂಳಿಹಟ್ಟಿ ಕಣ್ಣೀರು